ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು, 8 ಗಾಯ
ಭೀಕರ ರಸ್ತೆ ಅಪಘಾತವೊಂದರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ.
ದೇವನಹಳ್ಳಿ: ಮಾರುತಿ ಓಮ್ನಿ ಹಾಗೂ ಟೊಯೋಟೋ ಇನ್ನೋವಾ ಕಾರುಗಳ ನಡುವೆ ನಡೆದ ಭೀಕರ ಅಪಘಾತವೊಂದರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಎಂಟು ಮಂದಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕನ್ನಮಂಗಲ ಪಾಳ್ಯ ಗೇಟ್ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಬೆಂಗಳೂರಿನ ಆರ್.ಟಿ.ನಗರದ ವೆಂಕಟೇಶ್( 25), ಸತೀಶ್(24), ವಿಕಾಸ್(23) ಹಾಗೂ ಸುಂದರ್(25) ಮೃತಪಟ್ಟವರು. ಇವರು ಫ್ಲವರ್ ಡೆಕೋರೇಶನ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಒಮ್ನಿ ವ್ಯಾನಿನಲ್ಲಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದು ಚಾಲಕ ಹೇಮಂತ್, ಅಜಿತ್, ಭರತ್, ಅವಿನಾಶ್, ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೋವಾ ಕಾರಿನಲ್ಲಿದ್ದ ಮೂವರಿಗೂ ಸಣ್ಣಪುಟ್ಟಗಾಯಗಾಳಾಗಿವೆ. ಬೆಂಗಳೂರು ಕಡೆಯಿಂದ ದೇವನಹಳ್ಳಿ ಕಡೆ ಬರುತ್ತಿದ್ದ ಒಮ್ನಿ ವ್ಯಾನಿಗೆ ಇನ್ನೋವಾ ಕಾರು ಹಿಂದಿನಿಂದ ವೇಗವಾಗಿ ಡಿಕ್ಕಿ ಹೊಡೆದಿರುವುದರಿಂದ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.