Asianet Suvarna News Asianet Suvarna News

ಬಾಣಂತಿಗೇಕೆ ಬೇಸರವಾಗುತ್ತದೆ? ಖಿನ್ನತೆ ಬಗ್ಗೆ ಹುಷಾರ್

ಅವಳ ಕಡೆಯಿಂದ ಗುಡ್‌ನ್ಯೂಸ್ ಬಂತು ಅಂದರೆ ಮನೆಯಿಡೀ ಸಂಭ್ರಮ, ಖುಷಿ. ಆದರೆ ಆ ಹೊತ್ತಿನಲ್ಲಿ ಕಾಣಿಸಿಕೊಳ್ಳುವ ಖಿನ್ನತೆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಖಿನ್ನತೆ ಹೆರಿಗೆಯ ಬಳಿಕವೂ ಬರಬಹುದು.

Tips to resolve depression and stress  during pregnancy
Author
Bengaluru, First Published Oct 22, 2018, 10:59 AM IST

ಸರಸ ಈಗ ಆರು ತಿಂಗಳ ಗರ್ಭಿಣಿ. ತಾನು ಗರ್ಭಿಣಿ ಎಂದು ತಿಳಿದಾಕ್ಷಣದಿಂದ ತುಂಬಾ ಸಂತಸದಿಂದಿದ್ದಳು.

ಮೊದಲ ಮೂರು ತಿಂಗಳು ವಾಂತಿ, ಸುಸ್ತು ಎಂದು ಕಳೆದಿದ್ದಾಯಿತು. ಮೂರು ತಿಂಗಳಾದ ನಂತರ ವಾಂತಿಯೇನೋ ನಿಂತಿತು. ಸುಸ್ತು ಕಡಿಮೆಯಾಗಲಿಲ್ಲ. ಅದರ ಜೊತೆಗೆ, ಮನಸ್ಸಿಗೆ ಯಾವಾಗಲೂ ಬೇಸರ. ಯಾವ ಕೆಲಸದಲ್ಲೂ ಆಸಕ್ತಿ ಇಲ್ಲ. ತಾನು ಮೊದಲ ಬಾರಿ ತಾಯಿಯಾಗುತ್ತೇನೆಂಬ ಸಂಭ್ರಮವೇ ಇಲ್ಲ. ರಾತ್ರಿ ನಿದ್ರೆಯೂ ಬರಲೊಲ್ಲದು. ಊಟವೂ ಸರಿಯಾಗಿ ರುಚಿಸದು. ಆಗಾಗ ಕಾಡುವ ‘ಜೀವನವೇ ಬೇಡ’ ಎಂಬ ನಕಾರಾತ್ಮಕ ಭಾವನೆ. ಐದು ತಿಂಗಳು ಆಗುವಷ್ಟರಲ್ಲಿ ಸರಸಳಿಗೇ ಅನ್ನಿಸಿತು, ತಾನು ಮನೋವೈದ್ಯರಿಗೆ ತೋರಿಸಿಕೊಳ್ಳಬೇಕೆಂದು. ಆದರೆ, ಮನೋವೈದ್ಯರು ನೀಡುವ ಮಾತ್ರೆಯಿಂದ, ಮಗುವಿಗೆ ಏನಾಗುತ್ತದೋ, ಎಂಬ ಭಯ ವೈದ್ಯರಲ್ಲಿ ಹೋಗುವುದನ್ನು ತಡೆಯಿತು. ಸಂಬಂಧಿಕರ ಮಾತೂ ಇದಕ್ಕೆ ಕಾರಣವಾಯಿತು. ಯಾವಾಗ, ಎಂಟು ತಿಂಗಳ ಸ್ಕ್ಯಾನ್‌ನಲ್ಲಿ, ಮಗುವಿನ ತೂಕ ಕಡಿಮೆಯಿದೆ ಎಂದು ಡಾಕ್ಟರು ಹೇಳಿದರೋ, ಆಗ ಈ ಖಿನ್ನತೆಯ ಲಕ್ಷಣಗಳು ಇನ್ನೂ ಉಲ್ಬಣಿಸಿ, ತಡೆಯಲಾರದೇ, ಪ್ರಸೂತಿ ವೈದ್ಯರ ಸಲಹೆ ಮೇರೆಗೆ ಮನೋವೈದ್ಯರಲ್ಲಿ ಆಗಮಿಸಿದರು

ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿದೆ. ಒಂಭತ್ತು ತಿಂಗಳು ಹೊಟ್ಟೆಯಲ್ಲಿದ್ದು, ತನ್ನದೇ ಭಾಗವೆನಿಸಿಕೊಂಡಿದ್ದ ಈ ಪುಟಾಣಿ ಪಾಪಣ್ಣ ಈಗ ಕಣ್ಣ ಮುಂದೆ ಇದೆ. ಎದೆ ಹಾಲಿಗಾಗಿ ಹಂಬಲಿಸುತ್ತಿದೆ. ತನಗೂ ಹಾಲು ಚೆನ್ನಾಗಿಯೇ ಇದೆ. ಆದರೆ, ಯಾಕೋ ಮನಸ್ಸಿಗೇ ಖುಷಿಯಿಲ್ಲ. ಬಯಸಿ, ಬಯಸಿ ಪಡೆದುಕೊಂಡ ಮಗುವಿನ ಬಗ್ಗೆ ಪ್ರೀತಿಯೇ ಬರುತ್ತಿಲ್ಲ. ಮಗು ಇರಲಿ, ಜೀವನವೇ ಬೇಸರವಾಗಿದೆ. ಪಾಪಣ್ಣನಿಗೆ ಮೂರು ತಿಂಗಳು ತುಂಬಿ, ನನ್ನನ್ನು ನೋಡಿ ಆಗಾಗ ಮಂದಹಾಸವನ್ನೂ ಬೀರುತ್ತಾನೆ. ಆದರೆ ಈ ಮಗುವಿನ ನಗು ನನ್ನ ಮನಸ್ಸಿನಲ್ಲಿ ಬೆರಗು ತುಂಬಿ, ನನ್ನ ಮುಖದಲ್ಲಿ ನಗು ಮೂಡಿಸುತ್ತಿಲ್ಲ. ಭಾವನೆಗಳೇ ಬರುತ್ತಿಲ್ಲ. ಕಾರಣವಿಲ್ಲದೇ ಆಗಾಗ ಅಳು ಬರುತ್ತದೆ. ರಾತ್ರಿಯಾದರೆ ಭಯವೆನಿಸುತ್ತದೆ. ನಿದ್ರೆ ಬರುವುದಿಲ್ಲ. ಏನೇನೋ ಭಯಗಳು.’ ಇದು ಮಧುರ ಎಂಬ ನಾಲ್ಕು ತಿಂಗಳ ಬಾಣಂತಿಯ ಕಥೆ-ವ್ಯಥೆ. ಈ ವ್ಯಥೆಗೆ ಕಾರಣ ‘ಮಾನಸಿಕ ಖಿನ್ನತೆ’. ಈ ಸಮಸ್ಯೆಗೆ ಖಂಡಿತ ಪರಿಹಾರವಿದೆ. ಪರಿಹಾರ ಪಡೆಯಲು, ಸಮಸ್ಯೆಯ ಅರಿವಿರಬೇಕಷ್ಟೇ?

ಬಾಣಂತಿ ಸಮಯದ ಖಿನ್ನತೆ ಏನಿದು?
ಹೌದು ಎಲ್ಲ ಮಹಿಳೆಯರಲ್ಲಿ ಹೇಗೆ ಮಾನಸಿಕ ಖಿನ್ನತೆ ಆಗುವುದಕ್ಕೆ ಸಾಧ್ಯವೋ, ಹಾಗೆಯೇ ಬಾಣಂತಿಯರಲ್ಲಿ ಕೂಡ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಗರ್ಭಾವಸ್ಥೆಯಲ್ಲಿಯೇ ಈ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಂಡಿದ್ದರೂ, ಯಾರ ಅರಿವಿಗೂ ಬರದೇ ಇರಬಹುದು. ಗರ್ಭಿಣಿ ಚಿಕಿತ್ಸೆಯಿಂದ ಗರ್ಭದಲ್ಲಿರುವ ಮಗುವಿಗೆ ಹಾನಿಯಾಗುತ್ತದೆಂಬ ಭಯದಿಂದ ಯಾರಿಗೂ ಹೇಳಿಕೊಳ್ಳದೇ ಇರಬಹುದು. ಹೆರಿಗೆಯಾದ ನಂತರ ಈ ಖಿನ್ನತೆಯ ಲಕ್ಷಣಗಳು ಉಲ್ಭಣಿಸಬಹುದು. ಇನ್ನಷ್ಟು ಮಹಿಳೆಯರಲ್ಲಿ ಹೆರಿಗೆಯಾದ ನಂತರದ ದಿನಗಳಲ್ಲಿ ಪ್ರಾರಂಭವಾಗಬಹುದು. 

ಲಕ್ಷಣಗಳೇನು? 

  • ಮನಸ್ಸಿಗೆ ಯಾವಾಗಲೂ ದುಃಖ/ಬೇಸರ, ಇತರ ಯಾವ ಚಟುವಟಿಕೆಗಳಲ್ಲಿ ತೊಡಗಿಕೊಂಡರೂ ಕಳೆಯಲಾಗದ ಬೇಸರ
  • ಮಗುವಿನ ಬಗ್ಗೆ ಭಾವನೆಗಳಿಲ್ಲದಿರುವುದು.
  • ನಿದ್ರಾ ಹೀನತೆ / ಊಟ ತಿಂಡಿಗಳಲ್ಲಿ ನಿರಾಸಕ್ತಿ
  • ಯಾವುದೇ ಕೆಲಸಗಳಲ್ಲಿ ನಿರಾಸಕ್ತಿ
  • ಕಾರಣವಿಲ್ಲದೆ ಸುಸ್ತು
  • ಭಯ/ಗಾಬರಿ
  • ‘ಜೀವಿಸಿ ಏನು ಪ್ರಯೋಜನ?’ ‘ಜೀವನ ವ್ಯರ್ಥ’, ‘ಜೀವವೇ ಬೇಡ’ ಎಂಬ ನಕಾರಾತ್ಮಕ ಭಾವನೆಗಳು. 

ಚಿಕಿತ್ಸೆ ಏನು?

  • ಗರ್ಭಿಣಿ-ಬಾಣಂತಿ ಸಮಯದ ಖಿನ್ನತೆಗೆ ಖಂಡಿತ ಚಿಕಿತ್ಸೆ ಉಂಟು, ಭಯ ಪಡಬೇಡಿ.
  • ಬೇಗ ಗುರುತಿಸುವುದು ಅತ್ಯವಶ್ಯಕ.
  • ಸೌಮ್ಯ ತರಹದ ಖಿನ್ನತೆಗೆ ಆಪ್ತಸಮಾಲೋಚನೆ ಸಾಕು. ಮಧ್ಯಮ/ತೀವ್ರ ತರಹದ ಖಿನ್ನತೆಗೆ ಮಾತ್ರೆಗಳ ಅಗತ್ಯವೂ ಉಂಟು. 
  • ಗರ್ಭದಲ್ಲಿರುವ ಮಗು ಅಥವಾ ಹಾಲೂಡುತ್ತಿರುವ ಮಗುವಿಗೆ ಆದಷ್ಟು ಯಾವುದೇ ಹಾನಿಯಾಗದ ಹಾಗೆ ಮಾತ್ರೆಗಳನ್ನು ಮನೋವೈದ್ಯರು ನೀಡುತ್ತಾರೆ.
  • ಚಿಕಿತ್ಸೆಯೊಂದಿಗೆ ಗಂಡ/ಪೋಷಕರು/ ಅತ್ತೆ-ಮಾವ ಇವರ ಪ್ರೀತಿ, ಬೆಂಬಲ ಈ ಸಮಯದಲ್ಲಿ ಬಾಣಂತಿಗೆ ನೀಡಿದರೆ, ಖಂಡಿತ ಈ ಮಾನಸಿಕ ಖಿನ್ನತೆಯಿಂದ ಹೊರಬರಲು ಸಾಧ್ಯವಿದೆ.
Follow Us:
Download App:
  • android
  • ios