Asianet Suvarna News Asianet Suvarna News

‘ಒಂದು ಹಂತದಲ್ಲಿ ನಾನು ಸೋತು ಕೂತಿದ್ದೆ’ ಫೇಸ್‌ಬುಕ್ ಸೃಷ್ಟಿಸಿದವನ ಆತ್ಮಕತೆ

ಜಗತ್ತಿನ ಅತ್ಯಂತ ಯಶಸ್ವಿ ಸಂಸ್ಥೆ ಫೇಸ್‌ಬುಕ್ ಕಟ್ಟಿದ ಮಾರ್ಕ್ ಜುಕರ್‌ಬರ್ಗ್ ಒಂದು ಕಾಲದಲ್ಲಿ ತನ್ನವರಿಂದಲೇ ತಿರಸ್ಕೃತನಾಗಿ ಸೋತು ಹೋಗಿದ್ದ. ಅಲ್ಲಿಂದ ಆತ ಗೆದ್ದು ಬಂದಿದ್ದೇ ಬಹುದೊಡ್ಡ ಅಚ್ಚರಿ.

Mark Zuckerberg Writes

ಒಂದು ಕಂಪನಿ ಕಟ್ಟಬೇಕು ಅನ್ನುವುದು ನನ್ನ ಕನಸಾಗಿರಲಿಲ್ಲ. ದೂರದೂರದಲ್ಲಿರುವ ಜನರನ್ನು ಒಟ್ಟು ಮಾಡಬೇಕು, ಹತ್ತಿರ ತರಬೇಕು ಅನ್ನುವುದು ನನ್ನ ಉದ್ದೇಶವಾಗಿತ್ತು. ಫೇಸ್‌ಬುಕ್ ಅನ್ನು ಆರಂಭಿಸಿದ ಕೆಲವು ವರ್ಷಗಳ ನಂತರ ಕೆಲವು ದೊಡ್ಡ ಕಂಪನಿಗಳು ಫೇಸ್‌ಬುಕ್ ಅನ್ನು ಖರೀದಿಸಲು ಬಂದವು. ಬಹುತೇಕರು ಫೇಸ್‌ಬುಕ್ ಅನ್ನು ಮಾರುವುದೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದರು. ಆದರೆ ನಾನು ಒಪ್ಪಲಿಲ್ಲ. ಮತ್ತಷ್ಟು ಜನರನ್ನು ಹತ್ತಿರ ತರಬೇಕು ಅಂದುಕೊಂಡೆ.

ನನ್ನ ನಿರ್ಧಾರ ಅವರಿಗೆಲ್ಲಾ ಇಷ್ಟವಾಗಲಿಲ್ಲ. ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡಿತು. ಅಷ್ಟು ದಿನ ಜೊತೆಗಿದ್ದವರು ಮುನಿಸಿಕೊಂಡು ಬೇರೆಬೇರೆಯಾದರು. ಕೇವಲ ಒಂದು ವರ್ಷದಲ್ಲಿ ನಮ್ಮ ಕಂಪನಿಯ ಮ್ಯಾನೇಜ್‌ಮೆಂಟ್ ತಂಡದಲ್ಲಿ ಪ್ರತಿಯೊಬ್ಬರೂ ಬಿಟ್ಟು ಹೋದರು. ಫೇಸ್‌ಬುಕ್ ಇತಿಹಾಸದಲ್ಲಿ ನಾನು ಅನುಭವಿಸಿದ ಅತ್ಯಂತ ಕಷ್ಟಕರ ದಿನಗಳು ಅವು. ನಾನು ಮಾಡುತ್ತಿದ್ದ

ಕೆಲಸದ ಮೇಲೆ ನನಗೆ ನಂಬಿಕೆ ಇತ್ತು. ಆದರೆ ಒಂಟಿಯಾಗಿ ಬಿಟ್ಟಿದ್ದೆ. ನನ್ನದೇ ತಪ್ಪಿನಿಂದಾಗಿ ನಾನು ಎಲ್ಲರನ್ನೂ ಕಳೆದುಕೊಂಡಿದ್ದೆ. ಇದರಿಂದ ನಾನು ಒಂದು ಪಾಠವನ್ನು ಕಲಿತೆ. ನಾನಷ್ಟೇ ಕನಸು ಕಂಡರೆ ಸಾಲದು. ನಾನಷ್ಟೇ ಉದ್ದೇಶ ಇಟ್ಟುಕೊಂಡರೆ ಮುಂದುವರಿದರೆ ಸಾಕಾಗುವುದಿಲ್ಲ. ಅವರಲ್ಲಿ ಕನಸುಗಳನ್ನು ಬಿತ್ತಬೇಕಿತ್ತು. ಬೇರೆಯವರ ಬದುಕಿಗೂ ಒಂದು ಉದ್ದೇಶವನ್ನು ಸೃಷ್ಟಿಸಬೇಕಿತ್ತು. ನಾನು ಮಾಡಿದ ತಪ್ಪೇನು ಅಂದರೆ ಅವರು ಯಾರಿಗೂ ನನ್ನ ಉದ್ದೇಶ ಏನು ಅನ್ನುವುದನ್ನು ವಿವರಿಸಿರಲಿಲ್ಲ. ನನ್ನ ಕನಸು ಅವರ ಕನಸು ಆಗಿರಲಿಲ್ಲ. ಕನಸು, ಸಂಕಲ್ಪ ಎಲ್ಲಕ್ಕಿಂತ ದೊಡ್ಡದು. ಈ ಕನಸುಗಳು ದುಡ್ಡು ಗಳಿಸುವುದಷ್ಟೇ ಬದುಕಲ್ಲಿ ಮುಖ್ಯ ಅಲ್ಲ ಅನ್ನುವುದನ್ನು ಕಲಿಸುತ್ತದೆ.

ಒಂದು ಒಳ್ಳೆ ಸಂಕಲ್ಪ ಇತರರನ್ನೂ ಆಕರ್ಷಿಸುತ್ತದೆ. ನಾವಿಲ್ಲಿ ಏನೇನೋ ಹೊಸತನ್ನು ಕಂಡು ಹಿಡಿಯಲು ಶ್ರಮಿಸುತ್ತೇವೆ. ನಮ್ಮ ಉದ್ದೇಶ ಒಂದೇ ನಾವು ಏನೋ ಹೊಸತು ಕೊಟ್ಟರು ಅದರಿಂದ ಫೇಸ್‌ಬುಕ್ ಬಳಸುವವರ ಬದುಕಲ್ಲಿ ಏನೋ ಒಂದು ಅರ್ಥಪೂರ್ಣವಾದುದು ಘಟಿಸಬೇಕು ಅನ್ನುವುದು. ಜಗತ್ತಲ್ಲಿ, ಸಮಾಜದಲ್ಲಿ ಒಂದು ಪಾಸಿಟಿವ್ ಆದ ಬದಲಾವಣೆ ಉಂಟು ಮಾಡಲು ನೆರವಾಗುತ್ತಿದ್ದೇವೆ ಅನ್ನುವ ಭಾವವೇ ನಮ್ಮನ್ನು ಕೈ ಹಿಡಿದು ನಡೆಸುತ್ತಿದೆ. ಫೇಸ್‌ಬುಕ್‌ನ ಯಶಸ್ಸಿಗೆ ಕಾರಣವೂ ಅದೇ.

ಫೇಸ್‌ಬುಕ್‌ನಂತಹ ದೊಡ್ಡ ಸಮುದಾಯವನ್ನು ಮುನ್ನಡೆಸಬೇಕಾದರೆ ಒಂದು ಸ್ಫೂರ್ತಿ ಬೇಕು. ನಮ್ಮ ಲೀಡರ್ ಟೀಂ ಆ ಸ್ಫೂರ್ತಿಯವನ್ನು ಯಾವಾಗಳೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುತ್ತದೆ. ನಾವು ನೀಡುವ ಸೇವೆಗಳು ಜಗತ್ತಿನ ಅತಿ ಹೆಚ್ಚು ಮಂದಿಗೆ ತಲುಪಬೇಕು ಅನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಲೇ ಇರುತ್ತೇವೆ. ನಮ್ಮ ಧ್ವನಿ ಅವರನ್ನು ತಲುಪಿದರೆ ಸಾರ್ಥಕ.

ಸಾಮಾನ್ಯವಾಗಿ ಬಹುತೇಕರು ಹೊಸತಾಗಿ ಕಂಪನಿ ಶುರು ಮಾಡುವವರಿಗೆ ಏನಾದರೂ ಸಲಹೆ ನೀಡಿ ಅಂತ ಕೇಳುತ್ತಾರೆ. ನಾನು ಕಂಪನಿ ಮಾಡಬೇಕು ಅನ್ನುವ ಆಸೆ ಇರುವ ಎಲ್ಲರಿಗೂ ಹೇಳುವುದಿಷ್ಟೇ: ನಿಮ್ಮ ಗುರಿ ಕಂಪನಿ ಶುರು ಮಾಡುವುದು ಆಗಿರಬಾರದು. ನೀವು ಏನೋ ಬದಲಾವಣೆ ತರಬೇಕು ಅಂತ ಬಯಸುತ್ತಿದ್ದೀರಲ್ಲ ಆ ಕಡೆ ನಿಮ್ಮ ಗಮನ ಇರಲಿ. ಅನಂತರ ಸಮಾನ ಮನಸ್ಥಿತಿ ಇರುವವರನ್ನು ನಿಮ್ಮ

ಜೊತೆ ಸೇರಿಸಿಕೊಳ್ಳಿ. ಎಲ್ಲರೂ ಸೇರಿಕೊಂಡು ಬೇರೆಯವರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾಅಂತ ಯೋಚಿಸಿ. ಒಂದಲ್ಲ ಒಂದು ದಿನ ಜಗತ್ತಿನಲ್ಲಿ ಒಂದು ಸಣ್ಣ ಪಾಸಿಟಿವ್ ಬದಲಾವಣೆ ಉಂಟುಮಾಡಲು ಸಾಧ್ಯವಾದರೆ ಅದೇ ನಿಮ್ಮ ಗೆಲುವು.

-ಮಾರ್ಕ್ ಜುಕರ್‌ಬರ್ಗ್

Follow Us:
Download App:
  • android
  • ios