Asianet Suvarna News Asianet Suvarna News

ಹಂಪಿ ಉತ್ಸವ ಮಾಡ್ತೀರಾ, ಆನೆಗೊಂದಿ ಉತ್ಸವ ಯಾಕೆ ಮಾಡ್ತಿಲ್ಲ?

 2014 ನಂತರ ಆಚರಣೆಯೇ ಆಗಿಲ್ಲ | ಹಂಪಿಗೆ ಇರುವ ಆದ್ಯತೆ ಆನೆಗೊಂದಿಗೆ ಯಾಕಿಲ್ಲ | ಜಂಟಿಯಾಗಿ ಮಾಡುವ ಪ್ರಸ್ತಾಪ ನೆನೆಗುದಿಗೆ

Anegondi Utsava Did Not Organise Last Six Years
Author
Bengaluru, First Published Oct 23, 2019, 7:47 AM IST

ಕೊಪ್ಪಳ[ಅ.23]: ಹಂಪಿಯ ತೂಗುತೊಟ್ಟಿಲು ಎಂದು ಕರೆಯುವ ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಮೀನಮೇಷ ಮಾಡುತ್ತಲೇ ಬಂದಿದೆ. ಹಂಪಿ ಉತ್ಸವಕ್ಕೆ ನೀಡುವ ಆದ್ಯತೆ ನೀಡುತ್ತಲೇ ಇಲ್ಲ ಎನ್ನುವ ಕೊರಗಿಗೆ ಮುಕ್ತಿ ಯಾವಾಗ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯೇ ಆಗಿದೆ. ಈಗೇನು ಸರ್ಕಾರ ಹಂಪಿ ಉತ್ಸವನ್ನು ಮಾಡಲು ಮುಂದಾಗಿದ್ದು, ಆನೆಗೊಂದಿ ಉತ್ಸವದ ಕುರಿತುಇದುವರೆಗೂ ಚಕಾರ ಎತ್ತುತ್ತಿಲ್ಲ. 2014 ರಲ್ಲಿ ನಡೆದ ಬಳಿಕ ಮತ್ತೆ ಆನೆಗೊಂದಿ ಉತ್ಸವ ನಡೆದೇ ಇಲ್ಲ. 

ಬರಗಾಲದ ಕರಿನೆರಳು: 

ಆನೆಗೊಂದಿ ಉತ್ಸವಕ್ಕೆ ಸತತವಾಗಿ ಬರಗಾಲದ ಕರಿನೆರಳು ಎದುರಾಯಿತು. ಹೀಗಾಗಿ, ಉತ್ಸವ ಆಚರಣೆಯ ಕುರಿತು ಸಾರ್ವಜನಿಕರ ಆಗ್ರಹವೂ ಅಷ್ಟಾಗಿ ಕೇಳಿ ಬರಲಿಲ್ಲ. ಆದರೆ, ಪ್ರಸಕ್ತ ವರ್ಷ ಮುಂಗಾರು ಹಂಗಾಮು ಸಾಧರಣವಾಗಿದ್ದರೂ ಹಿಂಗಾರು ಮಳೆ ಅತ್ಯುತ್ತಮವಾಗಿಯೇ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಆಗುತ್ತಿರುವುದರಿಂದ ಬರಗಾಲದ ಛಾಯೆಮಾಯವಾಗುತ್ತಿದೆ. ಹೀಗಾಗಿ, ಮತ್ತೆ ಆನೆಗೊಂದಿ ಉತ್ಸವದ ಕುರಿತು ಕೂಗು ಎದ್ದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸರ್ಕಾರ ಈ ದಿಸೆಯಲ್ಲಿ ನಿರ್ಧಾರ ತೆಗೆದುಕೊಂಡು ಉತ್ಸವ ಆಚರಣೆಗೆ ಮುಂದಾಗಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹ ಮಾಡಿವೆ. ಇಲ್ಲದಿದ್ದರೇ ಹೋರಾಟ ಮಾಡುವ ಎಚ್ಚರಿಕೆಯನ್ನು ಈಗಾಗಲೇ ನೀಡಿವೆಯಾದರೂ ಸರ್ಕಾರ ಮಾತ್ರ ಇದುವರೆಗೂ ಚಕಾರ ಎತ್ತಿಲ್ಲ.

ನನಸಾಗದ ಕನಸು: 

ಆನೆಗೊಂದಿ ಮತ್ತು ಹಂಪಿ ಬೇರೆ ಅಲ್ಲವೇ ಅಲ್ಲ, ಸಾಮ್ರಾಜ್ಯ ಒಂದೇ ಆಗಿದ್ದವು. ಅದರಲ್ಲೂ ಹಂಪಿಯ ತೂಗುತೊಟ್ಟಿಲು ಆನೆಗೊಂದಿ ಎಂದು ಹೇಳಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯೂ ಆಗಿದೆ. ಹೀಗಾಗಿ, ಆನೆಗೊಂದಿ ಮತ್ತು ಹಂಪಿ ಉತ್ಸವನ್ನು ಜಂಟಿಯಾಗಿಯೇ ಮಾಡಬೇಕು ಎನ್ನುವ ಕೂಗು ಮೊದಲಿನಿಂದಲೂ ಬಲವಾಗಿಯೇ ಇತ್ತು. ಇದು ಸರ್ಕಾರದ ಮುಂದೆಯೂ ಬಂದಿತ್ತು. 2001 ರಲ್ಲಿ ಆನೆಗೊಂದಿ ಮತ್ತು ಹಂಪಿ ಉತ್ಸವವನ್ನು ಜಂಟಿ ಎನ್ನುವ ಅರ್ಥದಲ್ಲಿ ಆಚರಣೆ ಮಾಡಿ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದರು. ಈ ವೇಳೆಯಲ್ಲಿ ಜಂಟಿಯಾಗಿಯೇ ನಡೆಸಬೇಕು ಎನ್ನುವ ಧ್ವನಿಬಲವಾಗಿತ್ತು. ಆದರೆ, ನಂತರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮತ್ತು ಕೆಲವರ ವಿರೋಧದಿಂದಾಗಿ ಅದು ನೆನೆಗುದಿಗೆ ಬಿದ್ದಿತು.

ಮಲತಾಯಿ ಧೋರಣೆ: 

ಆನೆಗೊಂದಿ ಉತ್ಸವ ಆಚರಣೆಯ ವಿಷಯದಲ್ಲಿ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ. ಹಂಪಿ ಉತ್ಸವ ಆಚರಣೆಗೆ ನೀಡುವಷ್ಟು ಪ್ರಾಧಾನ್ಯತೆ ನೀಡುವುದಿಲ್ಲ ಮತ್ತು ಪ್ರತಿವರ್ಷವೂ ಇಲ್ಲಿ ಉತ್ಸವ ನಡೆಯುವುದಕ್ಕೆ ಹೋರಾಟವೇ ನಡೆಯಬೇಕು. ಸರ್ಕಾವೇ ಸ್ವಯಂಪ್ರೇರಣೆಯ ನಿರ್ಧಾರತೆಗೆದುಕೊಳ್ಳುವುದಿಲ್ಲ. ಈ ಹಿಂದೆ ಆನೆಗೊಂದಿ ಉತ್ಸವಕ್ಕೂಬಜೆಟ್‌ನಲ್ಲಿಯೇ ಅನುದಾನ ನಿಗದಿ ಮಾಡುವ ಕುರಿತುಸರ್ಕಾರ ನಿರ್ಧಾರ ಕೈಗೊಂಡಿತ್ತಾದರೂ ಅದುಜಾರಿಯಾಗಲೇ ಇಲ್ಲ.

ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,  ಆನೆಗೊಂದಿ ಉತ್ಸವ ಆಚರಣೆಮಾಡುವ ಕುರಿತು ಬೇಡಿಕೆ ಇದ್ದು,ಇದನ್ನು ಗಂಭೀರವಾಗಿ ಪರಿಗಣಿಸಿ, ಸಚಿವಸಂಪುಟದಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳದ ಡಿಸಿ ಪಿ. ಸುನೀಲ್ ಕುಮಾರ ಅವರು, ಆನೆಗೊಂದಿ ಉತ್ಸವ ಆಚರಣೆಗೆ ಜಿಲ್ಲಾಡಳಿತದ ಬಳಿ 70 ರು. ಲಕ್ಷ ಇದ್ದು,ಇಷ್ಟು ಸಾಕಾಗುವುದಿಲ್ಲ. ಸರ್ಕಾರ ಆದೇಶ ಮಾಡಿ, ಅನುದಾನ ನೀಡಿದಲ್ಲಿ ಆನೆಗೊಂದಿ ಉತ್ಸವವನ್ನು ಆಚರಿಸಬಹುದಾಗಿದೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios