ಆಸಕ್ತಿ ಇಲ್ವಾ..? ಜಾಗ ಖಾಲಿ ಮಾಡಿ, ವೈದ್ಯರಿಗೆ ಸಚಿವರ ಖಡಕ್ ವಾರ್ನಿಂಗ್..!
ಆಸಕ್ತಿ ಇಲ್ಲದ ವೈದ್ಯರು ತಾವಾಗಿಯೇ ತಾಲೂಕಿನಿಂದ ಜಾಗ ಖಾಲಿ ಮಾಡಿ ಎಂದು ಸಚಿವ ಎಚ್.ನಾಗೇಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಗರದ ಸಾರ್ವಜನಿಕರ ಆಸ್ಪತ್ರೆಗೆ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿ ವೈದ್ಯರ ನಡುವೆ ಉಂಟಾಗಿದ್ದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ಕೋಲಾರ(ಅ.17): ಮುಳಬಾಗಿಲು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಗುಂಪಗಾರಿಕೆ ಮಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡದೆ ತಮ್ಮ ಪ್ರತಿಷ್ಠೆಯನ್ನು ತೋರಿ ಖಾಸಗಿ ಕ್ಲೀನಿಕ್ಗಳ ಮೂಲಕ ರೋಗಿಗಳಿಂದ ಹಣ ಮಾಡುತ್ತಿರುವುದು ಕಂಡು ಬಂದಿರುವುದರಿಂದ ಆಸಕ್ತಿ ಇಲ್ಲದ ವೈದ್ಯರು ತಾವಾಗಿಯೇ ತಾಲೂಕಿನಿಂದ ಜಾಗ ಖಾಲಿ ಮಾಡಿ ಎಂದು ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ
ನಗರದ ಸಾರ್ವಜನಿಕರ ಆಸ್ಪತ್ರೆಗೆ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿ ವೈದ್ಯರ ನಡುವೆ ಉಂಟಾಗಿದ್ದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಸಚಿವರು, ಸರ್ಕಾರದಿಂದ ಸಂಬಳ ಪಡೆಯುವ ವೈದ್ಯರು ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗದಿದ್ದರೆ ಇಲ್ಲಿ ಏಕೆ ಕೆಲಸ ಮಾಡಬೇಕು. ಆಸ್ಪತ್ರೆಯಲ್ಲಿರುವ ಆಡಳಿತಾಧಿಕಾರಿ ನಿಮಗೆ ತೊಂದರೆ ನೀಡಿದಲ್ಲಿ ನನ್ನ ಗಮನಕ್ಕೆ ತರಬೇಕು ಅದು ಬಿಟ್ಟು ನೆಪಗಳನ್ನು ಹೇಳಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದಿದ್ದಾರೆ.
ವೈದ್ಯರಿಗೆ ಸಚಿವರ ತರಾಟೆ
ಚರ್ಚೆಯ ವೇಳೆ ವೈದ್ಯರು ಮತ್ತು ಆಡಳಿತಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದಾಗ ತಾಳ್ಮೆ ಕಳೆದುಕೊಂಡ ಸಚಿವರು, ಈ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ನೆಲೆನಿಂತು ತಮಗೆ ಬೇಕಾದಂತೆ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಸಾರ್ವಜನಿಕ ಆಸ್ಪತ್ರೆಯನ್ನು ಹಾಳು ಮಾಡುತ್ತಿದ್ದೀರಿ. ನಾನು ಈ ಹಿಂದೆ ಇದ್ದಂತಹ ಶಾಸಕರಂತಲ್ಲ, ನಿಮ್ಮ ರಾಜಕೀಯ ಪ್ರಭಾವವನ್ನು ಬೇರೆ ಕಡೆ ತೋರಿಸಿಕೊಳ್ಳಲು ವರ್ಗಾವಣೆಯಾಗಿ ಹೋಗಿ, ಇಲ್ಲವಾದರೆ ನಾನೇ ಖುದ್ದು ಕ್ಷೇತ್ರದ ಜನತೆಯ ಪರವಾಗಿ ಶಿಸ್ತು ಕ್ರಮ ತೆಗೆದಕೊಳ್ಳಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಸಿದ್ದಾರೆ.
ಸರಿಹೋಗದಿದ್ದರೆ ಕ್ರಮ:
ಸ್ಥಳದಿಂದಲೆ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ಎರಡು ದಿನಗಳಲ್ಲಿ ಆಸ್ಪತ್ರೆಯಲ್ಲಿನ ಗುಂಪುಗಾರಿಕೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಅವರೊಂದಿಗೆ ನಿಮ್ಮನ್ನು ಜೋತೆ ಮಾಡಿ ಕ್ರಮ ತೆಗೆದುಕೊಳ್ಳುತ್ತೆನೆಂದು ಎಚ್ಚರಿಸಿದರು. ಸ್ಥಳದಲ್ಲಿದ್ದ ಸುದ್ದಿಗಾರರು ಸಚಿವರನ್ನು ಈ ವಿಚಾರವಾಗಿ ಪ್ರಶ್ನೆ ಮಾಡಿದಾಗ, ಸ್ಥಳೀಯ ಆಸ್ಪತ್ರೆಯಲ್ಲಿನ ವೈದ್ಯರು ಇಲ್ಲಿನ ಸ್ಥಳಿಯರಾಗಿದ್ದು ಆಡಳಿತಾಧಿಕಾರಿ ವಿರುದ್ಧ ಗುಂಪು ಕಟ್ಟಿಕೊಂಡು ಜನರ ಸೇವೆಗೆ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಂತಹ ವೈದ್ಯರು ಅವರಾಗಿಯೇ ಜಾಗ ಖಾಲಿಮಾಡಲಿ ಎಂದಿದ್ದಾರೆ.
'ಹಣ ಇದೆ ಅಂತ ಎಂಟಿಬಿ ಮೆರೀತಿದ್ದಾರೆ, ಎಲೆಕ್ಷನ್ ನಂತ್ರ ಆಟ ಬಂದ್'..!