ಚಪ್ಪಲಿಯಿಂದ ಹೊಡೆದ ಮಹಿಳೆ: ಅವಮಾನ ತಾಳಲಾರದೇ ನೇಣಿಗೆ ಶರಣಾದ ಯುವಕ
ಮಹಿಳೆ ಚಪ್ಪಲಿಯಿಂದ ಹೊಡೆದಳು ಎನ್ನುವ ಕಾರಣಕ್ಕೆ ಅಪಮಾನಕ್ಕೊಳಗಾದ ಯುವಕರ್ನೋವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಡ್ಯ, [ಜೂನ್.04]: ಮಹಿಳೆ ಚಪ್ಪಲಿಯಿಂದ ಹೊಡೆದಳು ಎನ್ನುವ ಕಾರಣಕ್ಕೆ ಮನನೊಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ರಾಮಯ್ಯ ಕಾಲೋನಿಯಲ್ಲಿ ನಡೆದಿದೆ.
ಸ್ವತಂತ್ರ (24) ಮೃತ ನೇಣಿಗೆ ಶರಣಾದ ಯುವಕ. ಸ್ವತಂತ್ರ ಮಂಗಳವಾರ ಆಸ್ಪತ್ರೆಗೆ ಹೋಗಿದ್ದು, ಸರತಿ ಸಾಲಿಗೆ ನಿಲ್ಲುವ ಸಂಬಂಧ ಕೊಂಚ ಗಲಾಟೆಯಾಗಿದೆ. ಆ ವೇಳೆ ಮಹಿಳೆ ಸ್ವತಂತ್ರನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.ಈ ಅವಮಾನ ತಾಳಲಾರದೇ ಡೆತ್ನೋಟ್ ಬರೆದಿಟ್ಟು ಸ್ವತಂತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಸಾವಿನಿಂದ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿನ ಕುರಿತು ಡೆತ್ನೋಟ್ ಬರೆದಿಟ್ಟಿರುವ ಸ್ವತಂತ್ರ, ತನ್ನ ಸಾವಿಗೆ ತಾನೇ ಕಾರಣ ಎಂದು ತಿಳಿಸಿದ್ದಾನೆ.ಈ ಪ್ರಕರಣ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಯುವಕ ಬರೆದಿರುವ ಡೆತ್ನೋಟ್ ಇಂತಿದೆ
"ಅಮ್ಮ ನಾನು ಮಧ್ಯಾಹ್ನ ಆಸ್ಪತ್ರೆಗೆ ಹೋಗಿದ್ದೆ. ಸರತಿ ಸಾಲಿನಲ್ಲಿ ಒಬ್ಬ ಹೆಂಗಸು ನನ್ನ ಮುಂದೆ ಬಂದು ನಿಂತಳು. ಆಗ ನಾನು ಅಕ್ಕ ನಾನು ಮೊದಲು ನಿಂತಿದ್ದು ಹಿಂದೆ ಹೋಗಿ ಎಂದು ಸ್ವಲ್ಪ ತಳ್ಳಿದೆ.
ಆ ಹೆಂಗಸು ಮದ್ಯಪಾನ ಮಾಡಿದ್ದಳು ಅನಿಸುತ್ತೆ. ಆ ಕಾರಣಕ್ಕೆ ಎಲ್ಲರ ಮುಂದೆ ನನಗೆ ಚಪ್ಪಲಿಯಲ್ಲಿ ಹೊಡೆದಳು. ನನಗೆ ಬಹಳ ಅಪಮಾನವಾಯಿತು. ಅದಕ್ಕೆ ನಾನು ಈ ನಿರ್ಧಾರ ತೆಗೆದುಕೊಂಡೆ. ನನ್ನ ಸಾವಿಗೆ ನಾನೇ ಕಾರಣ. ಯಾರನ್ನು ದೂಷಿಸಬೇಡಿ. ಮಿಸ್ ಯು ಅಮ್ಮ" ಎಂದು ಯುವಕ ಡೆತ್ ನೋಟ್ನಲ್ಲಿ ಬರೆದಿದ್ದಾನೆ.