ಬೆಂಗಳೂರು : ಇನ್ಮುಂದೆ ಕಳವು ಮಾಡಿದ ಮೊಬೈಲ್ ಪತ್ತೆ ಸುಲಭ
ಕಳುವಾದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡುವುದು ಇನ್ನು ಸುಲಭ. ಇದಕ್ಕಾಗಿ ನುರಿತ ತಜ್ಞರ ತಂಡವೊಂದನ್ನು ರಚನೆ ಮಾಡಲಾಗುತ್ತಿದೆ.
ಬೆಂಗಳೂರು [ಅ.04] : ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕದ್ದ ಮೊಬೈಲ್ನಲ್ಲಿನ ದತ್ತಾಂಶ ಹಾಗೂ ಐಎಂಇಐ ಸಂಖ್ಯೆ ಅಳಿಸಿ ಹಾಕುವುದನ್ನು ಕಳ್ಳರು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಮೊಬೈಲ್ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚಿಸಲಾಗುವುದು ಎಂದರು. ಮೊಬೈಲ್ ಬಳಕೆದಾರರು ಜಿಪಿಎಸ್ ಬಳಕೆ ಮಾಡಿಕೊಂಡರೆ ಒಳಿತು. ಇದರಿಂದ ಕಳವಾದ ಮೊಬೈಲ್ ಸುಲಭವಾಗಿ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಆಯುಕ್ತರು ಸಲಹೆ ನೀಡಿದರು.
ಅಲ್ಲದೆ, ಅನಧಿಕೃತವಾಗಿ ಸಿಮ್ಕಾರ್ಡ್ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಲಾಗುವುದು. ಒಂದು ವೇಳೆ ಅಕ್ರಮ ಕಂಡು ಬಂದರೆ ಅವರ ವಿರುದ್ಧ ಟೆಲಿಗ್ರಾಫ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೈಕ್ಗೆ ಜಿಪಿಎಸ್ ಅಳವಡಿಸಲು ಪತ್ರ : ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಅಧಿಕವಾಗುತ್ತಿರುವ ಸಂಬಂಧ ಉತ್ಪಾದನಾ ಕಂಪನಿಗಳಿಗೆ ಪತ್ರ ಬರೆದು, ಉತ್ಪಾದನೆ ವೇಳೆಯ ವಾಹನಕ್ಕೆ ಜಿಪಿಎಸ್ ಅಳವಡಿಸುವಂತೆ ಮನವಿ ಮಾಡಲಾಗುವುದು. ವಾಹನ ಖರೀದಿ ಸಂದರ್ಭದಲ್ಲಿ ಮಾಲಿಕನ ಮೊಬೈಲ್ ನಂಬರ್ಗೆ ಆ ಜಿಪಿಎಸನ್ನು ಸಂಪರ್ಕಿಸಿದರೆ, ಕಳವಾಗಿರುವ ವಾಹನವನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದು ಹೇಳಿದರು.