’ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ’
ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದ ತೋಂಟದಾರ್ಯ ಮಠದ ಶ್ರೀ | ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಹಕರಿಸದೇ ಇದ್ದುದ್ದಕ್ಕೆ ಆಕ್ರೋಶ
ಗದಗ (ಫೆ. 11): ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಹಕರಿಸದ ಬಿಜೆಪಿ ವಿರುದ್ಧ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
"ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಯಿತು" ಎಂದು ಡಾ. ಸಿದ್ಧರಾಮ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
"ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಎನ್ನುವ ನಿಟ್ಟಿನಲ್ಲಿ ಹೋರಾಡುತ್ತಿದ್ದೇವೆ. ಪ್ರತ್ಯೇಕ ಲಿಂಗಾಯತ ಧರ್ಮದಿಂದ ಬಿಜೆಪಿಗೆ ಹಾನಿಯಿಲ್ಲ. ಅದನ್ನು ಅವರು ತಿಳಿದುಕೊಳ್ಳಬೇಕು. ಜೈನ, ಬೌದ್ಧರು ಮೊದಲು ಹಿಂದೂಗಳಾಗಿದ್ದರು. ಅವರೀಗ ಹಿಂದೂ ಧರ್ಮದಿಂದ ಹೊರ ಹೋಗಿದ್ದಾರೆ. ಅದರಿಂದ ಹಿಂದೂ ಧರ್ಮಕ್ಕೆ ಏನು ಹಾನಿಯಾಗಿದೆ?" ಎಂದು ತೋಂಟದಾರ್ಯ ಶ್ರೀಗಳು ಪ್ರಶ್ನಿಸಿದರು.
"ಲಿಂಗಾಯತ ಧರ್ಮಕ್ಕೆ ಹೆಚ್ಚಿನ ಆಧಾರಗಳಿವೆ. ಇದರಿಂದ ರಾಷ್ಟ್ರದ ಅಖಂಡತೆಗೆ, ಏಕತೆಗೆ ಹಾನಿಯಾಗಲ್ಲ. ಲಿಂಗಾಯತರು ದೇಶ ಪ್ರೇಮಿಗಳು. ದೇಶ ದ್ರೋಹಿಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಯಾವತ್ತೂ ನಿಲ್ಲಲ್ಲ. ಪ್ರತಿ ಗ್ರಾಮಗಳಲ್ಲೂ ಲಿಂಗಾಯತ ಧರ್ಮದ ಅರಿವು ಮೂಡಿಸುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಒತ್ತಾಯಿಸಲಾಗುವುದು" ಎಂದು ಶ್ರೀಗಳು ಹೇಳಿದರು.