ಪಾಪುಗೆ 100: ಧಾರವಾಡದಲ್ಲಿ ಅಭಿನಂದನಾ ಕಾರ್ಯಕ್ರಮ
ನಾಡೋಜ ಡಾ.ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವ ಸಮಾರಂಭ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಧಾರವಾಡ: ಹಿರಿಯ ಪತ್ರಕರ್ತ, ನಾಡೋಜ ಡಾ.ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವ ಸಮಾರಂಭ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯದಲ್ಲಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಸೋಮವಾರದಂದು ನಡೆಯಲಿದೆ.
99 ವಸಂತಗಳನ್ನು ಯಶಸ್ವಿಯಾಗಿ ದಾಟಿ ಶತಕದ ಹೆಜ್ಜೆ ಇಡುತ್ತಿರುವ ಪಾಪು ಅವರ ಜನ್ಮಶತಮಾನೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಪಾಪು ಅಭಿಮಾನಿ ಬಳಗ ಜಂಟಿಯಾಗಿ ಆಯೋಜಿಸಿವೆ. ಕಾರ್ಯಕ್ರಮದಲ್ಲಿ ಗದಗ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು, ಮುರುಘಾಮಠ ಮಲ್ಲಿಕಾರ್ಜುನ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಿ.ಎಸ್. ಶಿವಳ್ಳಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ.ಬಾಳಣ್ಣ ಶೀಗಿಹಳ್ಳಿ ಅವರು ಪಾಟೀಲ ಪುಟ್ಟಪ್ಪ ಕುರಿತಾದ ಕನ್ನಡ-ಕರ್ನಾಟಕ ಕೃತಿ, ಶಶಿ ಸಾಲಿ ಅವರ ಸಿದ್ಧಪಡಿಸಿದ ಪಾಪು ಪ್ರಪಂಚ ಹಾಗೂ ಡಾ. ಶಾಂತಿನಾಥ ದಿಬ್ಬದ ಅವರ ಪಾಪು ಒಂದು ಕೇಂದ್ರ ಶಕ್ತಿ ಗ್ರಂಥಗಳ ಬಿಡುಗಡೆ ನಡೆಯಲಿದೆ.