ರಾಜ್ಯ ಸರ್ಕಾರ ಬದುಕಿದೆಯಾ ಸತ್ತಿದೆಯಾ?
ಸಿಎಂ ಭರವಸೆಯಂತೆ ಪರಿಹಾರ ನೀಡಲು ಆಗ್ರಹಿಸಿ 26ರಂದು ಕರಾವಳಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಸತ್ಯಾಗ್ರಹ| ರಾಜ್ಯದಲ್ಲಿ 26 ಬಿಜೆಪಿ ಸಂಸದರಿದ್ದರೂ ಪರಿಹಾರ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ| ಪ್ರಧಾನಿ ಬಳಿ ಮಾತನಾಡಲು ಹೆದರಿಕೆಯಾದರೆ ನಮ್ಮನ್ನು ಕರೆದೊಯ್ಯಲಿ, ನಾವು ಮಾತನಾಡುತ್ತೇವೆ ಎಂದು ಸವಾಲು ಹಾಕಿದ ಐವನ್|
ಮಂಗಳೂರು:(ಸೆ.22) ರಾಜ್ಯದಲ್ಲಿ ಪ್ರವಾಹ ಬಂದು 50 ದಿನಗಳಾದವು. 35 ಸಾವಿರ ಕೋಟಿ ರು.ಗೂ ಅಧಿಕ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1500 ಕೋಟಿ ರು., ಅಂದರೆ ಕೇವಲ ಶೇ.4.2ರಷ್ಟು ಮಾತ್ರ. ಜನರಿಗೆ ಪರಿಹಾರ ತಲುಪಿಲ್ಲ. ರಾಜ್ಯ ಸರ್ಕಾರ ಬದುಕಿದೆಯಾ ಸತ್ತಿದೆಯಾ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ತುರ್ತು ಪರಿಹಾರವಾಗಿ 10 ತಿಂಗಳ ಕಾಲ 5 ಸಾವಿರ ರು. ಮನೆ ಬಾಡಿಗೆ, 10 ಸಾವಿರ ರು. ಪರಿಹಾರ, ಮನೆ ಕಟ್ಟಲು ಸಹಾಯಧನ ಮತ್ತಿತರ ಭರವಸೆಗಳನ್ನು ಸಿಎಂ ಯಡಿಯೂರಪ್ಪ ನೀಡಿದ್ದರು. ಆದರೆ 10 ಸಾವಿರ ರು. ಬಿಟ್ಟರೆ ಯಾವ ಭರವಸೆಯೂ ಈಡೇರಿಲ್ಲ ಎಂದು ಆರೋಪಿಸಿದರು.
26ರಂದು ಸತ್ಯಾಗ್ರಹ:
ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದಂತೆ ಸಂತ್ರಸ್ತರಿಗೆ ಎಲ್ಲ ಬಗೆಯ ಸವಲತ್ತುಗಳನ್ನು ಕೂಡಲೆ ನೀಡಬೇಕು. ಇಲ್ಲದಿದ್ದರೆ ಸೆ.26ರಂದು ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ, ಕರಾವಳಿಯಲ್ಲೂ ಸತ್ಯಾಗ್ರಹಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಿ ಬಳಿ ನಾವು ಮಾತಾಡ್ತೇವೆ:
ರಾಜ್ಯದಲ್ಲಿ 26 ಸಂಸದರಿದ್ದರೂ ಪರಿಹಾರ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರಿಗೆ ಪ್ರಧಾನಿ ಬಳಿ ಮಾತನಾಡಲು ಹೆದರಿಕೆಯಾದರೆ ನಮ್ಮನ್ನು ಕರೆದೊಯ್ಯಲಿ, ನಾವು ಮಾತನಾಡುತ್ತೇವೆ ಎಂದು ಸವಾಲು ಹಾಕಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ನವೀನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.