ಹುಬ್ಬಳ್ಳಿ: ಹೊಂಡ ಬಿದ್ದ ರಸ್ತೆಯಲ್ಲಿ ಓಡಾಡಿ ಬಸ್ಗಳೆಲ್ಲ ಗ್ಯಾರೇಜ್ಗೆ, ಜನ ಆಸ್ಪತ್ರೆಗೆ..!
ಹುಬ್ಬಳ್ಳಿ-ಶಿರಸಿ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹದೆಗೆಟ್ಟಿದೆ. ಡಾಂಬರು ಕಿತ್ತು ಬಂದು ರಸ್ತೆ ಹೊಂಡಗಳಿಂದಲೇ ತುಂಬಿಹೋಗಿದೆ. ತಡಸದಿಂದ ಮುಂದಿನ 40 ಕಿಮೀ ಸಂಚರಿಸುವುದೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಮಾರ್ಗ ಹದಗೆಟ್ಟಿದೆ. ಪ್ರತಿದಿನ ಸಾವಿರಾರು ಜನ ಸಂಚರಿಸುವ ಈ ಮಾರ್ಗದಲ್ಲಿ ಭಾರಿ ವಾಹನ ಬಿಟ್ಟು, ದ್ವಿಚಕ್ರವಾಹನದಲ್ಲಿ ಸಂಚರಿಸುವುದೂ ಕಷ್ಟ ಎಂಬಂತಾಗಿದೆ.
ಹುಬ್ಬಳ್ಳಿ(ಸೆ.13): ಹುಬ್ಬಳ್ಳಿ ಈ ರಸ್ತೆಯಲ್ಲಿ ಸಂಚರಿಸಬೇಕೆ? ಒಂದೇ ದುರಸ್ತಿಯಾಗಿದೆಯಾ ಎಂದು ಕೇಳಿಕೊಂಡು ಬನ್ನಿ, ಇಲ್ಲವೆ ಬೆನ್ನುಮೂಳೆಗೆ ಚಿಕಿತ್ಸೆ ಪಡೆಯಲು ಸಿದ್ಧರಾಗಿ ಸಂಚರಿಸಿ ಎಂಬುದು ಹುಬ್ಬಳ್ಳಿ- ಶಿರಸಿ ಮಾರ್ಗದ ಕುರಿತು ಕೇಳಿಬರುತ್ತಿರುವ ಮಾತು.
ಮಳೆಯಿಂದಾಗಿ ಹುಬ್ಬಳ್ಳಿ- ಮುಂಡಗೋಡ- ಶಿರಸಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ತಡಸದಿಂದ ಮುಂದಿನ 40 ಕಿಮೀ ಸಂಚರಿಸುವುದೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಮಾರ್ಗ ಹದಗೆಟ್ಟಿದೆ. ಭಾರಿ ವಾಹನ ಹಾಗೂ ಇತರ ವಾಹನಗಳ ಚಾಲಕರು ಇಲ್ಲಿ ಚಾಲನೆ ಮಾಡುವಾಗ ಹೈರಾಣಾಗುತ್ತಿದ್ದಾರೆ.
ಕಾರು, ಜೀಪ್ ಬಿಡಿ ಟೂವೀಲ್ಹರ್ನಲ್ಲಿ ಹೋಗೋದು ಕಷ್ಟ:
ರಸ್ತೆ ದುರಸ್ತಿಗೆ ತಕ್ಷಣ ಮುಂದಾಗಬೇಕು, ಅದಲ್ಲದಿದ್ದರೆ ತಾತ್ಕಾಲಿಕವಾಗಿಯಾದರೂ ರಸ್ತೆಗುಂಡಿ ಮುಚ್ಚುವ ಕೆಲಸವಾಗಬೇಕು ಎನ್ನುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಉತ್ತರ ಕನ್ನಡ ಸೇರಿದಂತೆ ವಿವಿಧೆಡೆ ಪ್ರವಾಸಕ್ಕೆ ತೆರಳಲು ಇದು ಪ್ರಮುಖ ಮಾರ್ಗ. ಅಲ್ಲದೆ, ಹುಬ್ಬಳ್ಳಿ ಕೈಗಾರಿಕಾ ಪ್ರದೇಶದಿಂದ ಗೊಬ್ಬರ, ಹಿಂಡಿ ಸೇರಿ ಕೃಷಿಗೆ ಸಂಬಂಧಿಸಿದ ಸರಕು ಸಾಮಗ್ರಿಗಳು ಇದೇ ಮಾರ್ಗವಾಗಿ ಹೋಗಬೇಕು. ಪ್ರತಿದಿನ ಸಾವಿರಾರು ಜನ ಸಂಚರಿಸುವ ಈ ಮಾರ್ಗ ಸದ್ಯಕ್ಕೆ ಭಾರಿ ವಾಹನ ಹೋಗಲಿ, ದ್ವಿಚಕ್ರವಾಹದಲ್ಲಿ ಸಂಚರಿಸುವುದೂ ಕಷ್ಟ ಎಂಬಂತ ಸ್ಥಿತಿಗೆ ತಲುಪಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚಾಲಕರಿಗೆ ಹರಸಾಹಸ:
ಈ ಮಾರ್ಗವಾಗಿ ಪ್ರತಿನಿತ್ಯ 200ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತವೆ. ಹುಬ್ಬಳ್ಳಿ- ಶಿರಸಿ 15 ನಿಮಿಷಕ್ಕೊಂದರಂತೆ ೪೦ ಬಸ್ಗಳು ಸಂಚರಿಸಿದರೆ, ಇದೇ ಮಾರ್ಗವಾಗಿ ಭಟ್ಕಳ- ಮಂಗಳೂರು ಮಾರ್ಗವಾಗಿ 91 ಬಸ್ಗಳು ಹೋಗಿ ಬರುತ್ತವೆ. ಜೋಗ್ಫಾಲ್ಸ್ಗೆ ಹುಬ್ಬಳ್ಳಿ ವಿಭಾಗದಿಂದ ಎರಡು ವಿಶೇಷ ಬಸ್ಗಳನ್ನು ಬಿಡಲಾಗುತ್ತಿದೆ. ಉತ್ತರ ಕನ್ನಡ ಸೇರಿ ಹಲವು ಪ್ರವಾಸಿತಾಣಗಳಿಗೆ ಇದೇ ಮಾರ್ಗವಾಗಿ ತೆರಳಬೇಕಾಗಿದೆ.
ಹೊಂಡಗಳಿರೋ ರಸ್ತೆಯಲ್ಲಿ ಸಂಚರಿಸಿ ಬಸ್ಗಳು ಗ್ಯಾರೇಜ್ಗೆ:
112 ಬಸ್ಸುಗಳು ಮುಂಡಗೋಡ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರ, ಬೆಳಗಾವಿ, ಬಾಗಲಕೋಟೆ, ರಾಯಚೂರು, ಬಳ್ಳಾರಿ ಸೇರಿ ವಿವಿಧೆಡೆ ಸಂಚರಿಸುತ್ತವೆ. ಬಸ್ಗೆ ಎರಡೂವರೆ ಗಂಟೆಯ ಮಾರ್ಗ, ಸದ್ಯ ಹೊಂಡಾಗುಂಡಿಗಳಿಂದ ಹೆಚ್ಚುವರಿ ಮುಕ್ಕಾಲುಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಬಸ್ಗಳಿಗೂ ಸಮಸ್ಯೆಯಾಗುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸಿ ರಿಪೇರಿಗಾಗಿ ಬಸ್ಗಳು ಡಿಪೋ ಗ್ಯಾರೇಜ್ ಸೇರಿವೆ.
ನೆರೆ ಪರಿಹಾರ : ತಹಸೀಲ್ದಾರ್ ಗೆ ಗ್ರಾಮಸ್ಥರಿಂದ ವಾರ್ನಿಂಗ್
ತಡಸ್, ಬಿಸಲಕೊಪ್ಪ ಜೋಗಿಸರದಲ್ಲಿ ಮಾರ್ಗದಲ್ಲಿ ಪಾಟ್ಹೋಲ್ಗಳೇ ತುಂಬಿಹೋಗಿದ್ದು, ಚಾಲನೆ ಮಾಡುವುದೆ ಕಷ್ಟಕರವಾಗಿದೆ. ಇದರಿಂದ ನಿಗದಿತ ವೇಳೆಗೆ ಗಮ್ಯ ತಲುಪಲಾಗುತ್ತಿಲ್ಲ ಎನ್ನುತ್ತಾರೆ ಚಾಲಕ ರಾಜೇಂದ್ರ ನಾಯ್ಕ. ಹುಬ್ಬಳ್ಳಿ ಮೂಲಕ ಶಿರಸಿಗೆ ಕಳೆದ ವಾರ ಕಾರಿನಲ್ಲಿ ಹೋಗಿ ಸುಸ್ತು ಬಡಿದು ಹೋಗಿದ್ದೇನೆ. ಹೀಗಾಗಿ ಕಾರು ಬಿಟ್ಟು ಬಸ್ ನಲ್ಲಿ ತೆರಳಿದ್ದೆ. ಆದರೂ ನಿಗದಿತ ವೇಳೆಗೆ ತಲುಪಲಾಗದೆ ಸಮಸ್ಯೆಯಾಗಿದೆ. ಸಂಬಂಧಿಸಿದವರು ತಕ್ಷಣ ಈ ಮಾರ್ಗದ ದುರಸ್ತಿಗೆ ಮುಂದಾಗಲಿ ಎನ್ನುತ್ತಾರೆ ಹುಬ್ಬಳ್ಳಿ ತಾರಿಹಾಳದ ಕೈಗಾರಿಕೋದ್ಯಮಿ ಆರ್.ಜಿ. ಭಟ್.
ರಾತ್ರಿ ಕುದುರೆ ಕಾಟ:
ಹೊಂಡಗಳದ್ದು ಒಂದು ಕಡೆಯಾದರೆ, ವಿವಿಧೆಡೆ ರಸ್ತೆ ಮಧ್ಯವೆ ನಿಲ್ಲುವ ಕುದುರೆಗಳು ಚಾಲಕರಿಗೆ ತಲೆನೋವು ತರಿಸಿವೆ. ಬೀದಿದೀಪ ಇಲ್ಲದ ಕಡೆಗಳಲ್ಲಿ ಇವು ಏಕಾಏಕಿ ಕಂಡುಬರುವುದು, ವಾಹನಗಳಿಗೆ ಅಡ್ಡಬರುವುದೂ ಇದೆ.
- ಮಯೂರ ಹೆಗಡೆ