ರೇವಣ್ಣ ಕರ್ನಾಟಕದ ಕುರಿಯನ್: ಪುಟ್ಟರಾಜು
ರೇವಣ್ಣ ಅವರು ಕರ್ನಾಟಕದ ಕುರಿಯನ್ ಎಂದು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ಹೇಳಿದ್ದಾರೆ. ಮಂಡ್ಯದಲ್ಲಿ ಮನ್ಮುಲ್ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದ ಸಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ಮಂಡ್ಯ(ಅ.04): ಹಾಲು ಒಕ್ಕೂಟದ ಅಭಿವೃದ್ಧಿಗೆ ಖ್ಯಾತರಾಗಿರುವ ಮಾಜಿ ಸಚಿವ ರೇವಣ್ಣನವರು ಕರ್ನಾಟಕದ ಕುರಿಯನ್ ಇದ್ದ ಹಾಗೆ ಎಂದು ಮಾಜಿ ಸಚಿವ ಸಿ. ಎಸ್ ಪುಟ್ಟರಾಜು ಹೇಳಿದ್ದಾರೆ.
ಮನ್ಮುಲ್ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಲಾಟರಿ ಮೂಲಕ ಜೆಡಿಎಸ್ ರಾಮಚಂದ್ರು ಹಾಗೂ ರಘುನಂದನ್ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಮಾರ್ಗದರ್ಶನದಲ್ಲಿ ಮನ್ ಮುಲ್ ಸಂಸ್ಥೆಯನ್ನು ಅಭಿವೃದ್ಧಿ ಮಾಡಿ ರೈತರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅವ್ಯವಹಾರದ ತನಿಖೆಯಾಗುತ್ತದೆ:
ಮನ್ಮುಲ್ನಲ್ಲಿ ಈ ಹಿಂದೆ ನಡೆದಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ನಾವೂ ಸಹ ಅದಕ್ಕೆ ಸಾಥ್ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಹಾಗೆ ನೋಡಿ ಕೊಳ್ಳುತ್ತೇವೆ. ಆ ಬಗ್ಗೆ ಯಾವುದೇ ಅನುಮಾನ ಬೇಡ. ರೈತರಿಗೆ ಕಳೆದ 6 ತಿಂಗಳನಿಂದ ಹಾಲಿನ ಸಬ್ಸಿಡಿ ಹಣ ಪಾವತಿ ಮಾಡಿಲ್ಲ. ಈ ಹಣವನ್ನೂ ಕೂಡ ಆದಷ್ಟುಬೇಗ ಕೊಡಿಸುತ್ತೇವೆ ಎಂಬ ಭರವಸೆಯನ್ನು ಪುಟ್ಟರಾಜು ನೀಡಿದರು.
ಮಂಡ್ಯ: JDSಗೆ ಒಲಿದ ಮನ್ಮುಲ್ ಅಧ್ಯಕ್ಷಗಿರಿ, ಲಾಟರಿ ಮೂಲಕ ಜಯಭೇರಿ
ನೂತನ ಅಧ್ಯಕ್ಷ ರಾಮಚಂದ್ರು ಹಾಗೂ ಉಪಾಧ್ಯಕ್ಷ ರಘುನಂದನ್ ಮಾತನಾಡಿ, ನಮ್ಮ ಆಯ್ಕೆಗೆ ಕಾರಣರಾದ ಮಾಜಿ ಸಚಿವ ಪುಟ್ಟರಾಜು ಹಾಗೂ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಆಡಳಿತ ಮಂಡಳಿಯನ್ನು ಯಾವುದೇ ಕಳಂಕ ರಹಿತವಾಗಿ ನಡೆಸಿಕೊಂಡು ಹೋಗಲು ಎಲ್ಲಾ ಸಹಕಾರ ಕೋರುವುದಾಗಿ ಹೇಳಿದರು.
'ಕಾಂಗ್ರೆಸ್ ಕೈ ಬಿಡಲಿಲ್ಲ, ಜೆಡಿಎಸ್ ಮತ್ತೆ ಧೂಳಿನಿಂದ ಎದ್ದು ಬಂದಿದೆ'..!