ದಸರೆ ಆನೆ ಕಾವೇರಿ ಕಾಲಿಗೆ ಚುಚ್ಚಿದ ಪಿನ್
ಮೈಸೂರಿನಲ್ಲಿ ದಸರಾ ತಾಲೀಮು ಜೋರಾಗಿದ್ದು ಈ ವೇಳೆ ಆನೆ ಕಾವೇರಿ ಕಾಲಿಗೆ ಪಿನ್ನು ಚುಚ್ಚಿದ ಘಟನೆ ನಡೆಯಿತು.
ಮೈಸೂರು [ಸೆ.23]: ದಸರಾ ಗಜಪಡೆ ತಾಲೀಮು ವೇಳೆ ಕಾವೇರಿ ಆನೆ ಕಾಲಿಗೆ ಪಿನ್ನೊಂದು ಚುಚ್ಚಿದ ಘಟನೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ಭಾನುವಾರ ನಡೆದಿದೆ.
ತಾಲೀಮಿಗೆ ಹೊರಟಿದ್ದ ಗಜಪಡೆಯಲ್ಲಿ ಕಾವೇರಿ ಆನೆ ಸಹ ಸಾಗುತ್ತಿತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಾಟಿ ಬರುತ್ತಿದ್ದಂತೆ ಕಾಲಿಗೆ ಪಿನ್ನು ಚುಚ್ಚಿದೆ. ಈ ವೇಳೆ ಕಾವೇರಿ ಆನೆಯು ವಿಚಲಿತವಾದದನ್ನು ಕಂಡ ಕಾವಾಡಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾಲಿಗೆ ಚುಚ್ಚಿದ್ದ ಪಿನ್ನನ್ನು ತೆಗೆದು ಹಾಕಿದರು. ನಂತರ ಯಥಾಪ್ರಕಾರ ತಾಲೀಮಿನಲ್ಲಿ ಕಾವೇರಿ ಆನೆ ಪಾಲ್ಗೊಂಡಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಜಪಡೆ ಹೋಗುವ ದಾರಿಯಲ್ಲಿ ಜೀಪ್ ಹಿಂಭಾಗದಲ್ಲಿ ಆಯಸ್ಕಾಂತಯುಕ್ತ ಕಬ್ಬಿಣವನ್ನು ಬಳಸಿ ಮಾರ್ಗ ಮಧ್ಯೆ ಬಿದ್ದಿರುವ ಮೊಳೆ, ಬಟ್ಟೆಪಿನ್ನು, ಕಬ್ಬಿಣದ ಚೂರುಗಳನ್ನು ಅರಣ್ಯ ಇಲಾಖೆಯವರು ಪ್ರತಿ ದಿನ ತೆಗೆದು ಹಾಕುತ್ತಾರೆ. ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಿದ್ದರೂ ಪಿನ್ನೊಂದು ಕಾವೇರಿ ಆನೆಗೆ ಚುಚ್ಚಿದೆ. ಇದರಿಂದ ಆನೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ದಸರಾ ಆನೆ ವೈದ್ಯ ಡಾ.ಡಿ.ಎನ್. ನಾಗರಾಜು ‘ಕನ್ನಡಪ್ರಭ’ಕ್ಕೆ ತಿಳಿಸಿದರು.