ರೇಲ್ವೆ ಗೇಟ್ನಲ್ಲಿ ತಪ್ಪಿದ ಭಾರೀ ದುರಂತ : 40 ಮಂದಿ ಪ್ರಾಣ ಉಳಿಸಿದ ಚಾಲಕ
ಸಾರಿಗೆ ಸಂಸ್ಥೆಯ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಗುರುವಾರ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಬಳಿಯ ಶ್ರೀನಗರ ರೇಲ್ವೆ ಗೇಟ್ನಲ್ಲಿ ಭಾರೀ ರೈಲು ದುರಂತವೊಂದು ತಪ್ಪಿದೆ.
ಧಾರವಾಡ : ನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಗುರುವಾರ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಬಳಿಯ ಶ್ರೀನಗರ ರೇಲ್ವೆ ಗೇಟ್ನಲ್ಲಿ ಭಾರೀ ರೈಲು ದುರಂತವೊಂದು ತಪ್ಪಿದ್ದು 40ಕ್ಕೂ ಹೆಚ್ಚು ಪ್ರಯಾಣಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.
ಧಾರವಾಡ ಸಿಬಿಟಿಯಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟ್ಟಿದ್ದ ಸಿಬಿಟಿ-ಪಾವಟೆನಗರ ಬಸ್ ಬೆಳಗ್ಗೆ 11.30ರ ಸುಮಾರಿಗೆ ರೇಲ್ವೆ ಗೇಟ್ ದಾಟುವಾಗ ಈ ಅಚಾತುರ್ಯ ನಡೆದಿದೆ.
ಆಗಿದ್ದೇನು?:
ಗೇಟು ತೆರೆದೇ ಇದ್ದರೂ ಯಾವುದೇ ಸೂಚನೆ, ಸಿಗ್ನಲ್ ನೀಡದೇ ಕೊನೆ ಪಕ್ಷ ಶಬ್ದ ಸಹ ಮಾಡದೇ ಏಕಾಏಕಿ ‘ಅಪಘಾತ ನಿರ್ವಹಣಾ ವೈದ್ಯಕೀಯ ರೈಲು’ ಬಂದುಬಿಟ್ಟಿದೆ. ಇದನ್ನು ಗಮನಿಸಿದ ಬಸ್ ಚಾಲಕ ತಕ್ಷಣ ಆ್ಯಕ್ಸೆಲರೇಟರ್ ಮೇಲಿದ್ದ ಕಾಲನ್ನು ಇನ್ನಷ್ಟುಜೋರಾಗಿ ಒತ್ತಿ, ‘ಕ್ಷಣಮಾತ್ರದಲ್ಲೇ’ ಬಸ್ಅನ್ನು ರೇಲ್ವೆ ಗೇಟ್ನಿಂದ ದಾಟಿಸಿ ಬಸ್ಸಿನಲ್ಲಿದ್ದವರ ಪ್ರಾಣ ಉಳಿಸಿದ್ದಾರೆ.
ಈ ರೈಲು ಸಂಚಾರದ ಬಗ್ಗೆ ರೈಲ್ವೆಯ ಲೋಕೋಪೈಲಟ್ ಹಾಗೂ ನಿಲ್ದಾಣದ ಸಿಬ್ಬಂದಿಗಳು ಶ್ರೀನಗರದ ರೈಲ್ವೆ ಗೇಟ್ಮನ್ಗೆ ಯಾವುದೇ ಸಿಗ್ನಲ್ ನೀಡಿರಲಿಲ್ಲ ಎನ್ನಲಾಗಿದೆ. ಇದೇ ಈ ಅವಾಂತರಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ನೈಋುತ್ಯ ರೈಲ್ವೆ ತನಿಖೆ ಆರಂಭಿಸಿದೆ ಎಂದು ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ.
ಸಮಯಪ್ರಜ್ಞೆ ಮೆರೆದು 40 ಜನರ ಪ್ರಾಣ ರಕ್ಷಿಸಿದ ಬಸ್ ಚಾಲಕ ಶಬ್ಬೀರ್ ಅವರನ್ನು ಕವಿವಿ ಶಂಶೋಧನಾ ವಿದ್ಯಾರ್ಥಿಗಳ ಪರವಾಗಿ ಬಸ್ಸಿನ ಬಳಿ ಸನ್ಮಾನಿಸಲಾಯಿತು.