ಬೆಳಗಾವಿ: ಪ್ರವಾಹ ಸಂತ್ರಸ್ತರಿಗೆ ಚರ್ಮರೋಗ ಬಾಧೆ..!
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳನ್ನು ಮನಗಂಡು ಆರೋಗ್ಯ ಕೇಂದ್ರಗಳನ್ನು ಆರಂಭಿಸಿದ್ದು, ಬೆಳಗಾವಿಯಲ್ಲಿ ಚರ್ಮ ಅಲರ್ಜಿ ಕಾಣಿಸಿಕೊಂಡಿದೆ. ಆರೋಗ್ಯ ತಪಾಸಣೆ ಸಂದರ್ಭ ಸ್ಕಿನ್ ಅಲರ್ಜಿ ಪ್ರಕರಣಗಳು ಪತ್ತೆಯಾಗಿವೆ. ಇದು ಗಂಭೀರ ಸ್ವರೂಪ ಪಡೆದುಕೊಳ್ಳುವ ಮೊದಲೇ ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಿದೆ.
ಬೆಳಗಾವಿ(ಆ.28): ಪ್ರವಾಹಪೀಡಿತ ತಾಲೂಕಿನ ವಿವಿಧ ಗ್ರಾಮಗಳ ಜನರಲ್ಲಿ ಈಗ ಚರ್ಮರೋಗ ಬಾಧೆ ಶುರುವಾಗಿದೆ. ಇದು ಗಂಭೀರ ಸ್ವರೂಪ ಪಡೆದುಕೊಳ್ಳುವ ಮೊದಲೇ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿತ ಇತರೆ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಸ್ಪಲ್ಪ ಯಾಮಾರಿದರೂ ಪ್ರವಾಹ ಪೀಡಿತವಾಗಿದ್ದ ಗ್ರಾಮಗಳಲ್ಲಿ ಇನ್ನುಮುಂದೆ ಚರ್ಮರೋಗ ಉಲ್ಬಣಗೊಳ್ಳುವುದರಲ್ಲಿ ಅನುಮಾನವಿಲ್ಲ.
ದೇವಾಲಯ ಶುಚಿಗೊಳಿಸಿದ ಮುಸ್ಲಿಂ ಸಮುದಾಯ : ನೆರೆ ಸಂತ್ರಸ್ತರಿಗೆ ನೆರವು
ನೆರೆ ಹಾವಳಿಯಿಂದ ಬಾಧಿತ ಹೊಸ ಸವದಿ, ರಡ್ಡೇರಹಟ್ಟಿಹಾಗೂ ಜಿರೋ ಪಾಯಿಂಟ್ ನಿರಾಶ್ರಿತ ಕೇಂದ್ರ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ವಿಜಯಪುರದ ಬಿಎಲ್ಡಿಇ ಸಂಸ್ಥೆಯ ವೈದ್ಯರ ತಂಡ ಹಾಗೂ ಬೆಂಗಳೂರಿನ ಬಾಸ್ ತಂಡ ಪ್ರತ್ಯೇಕವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಇಂತಹ ಸ್ಫೋಟಕ ಮಾಹಿತಿ ತಿಳಿದು ಬಂದಿದೆ.
ಚರ್ಮ ಸಂಬಂಧ ರೋಗಗಳು:
ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ಗ್ರಾಮಸ್ಥರಲ್ಲಿ ಚರ್ಮ ಸಂಬಂಧಿ ವಿವಿಧ ರೋಗಗಳು ಕಾಣಿಸಿಕೊಂಡಿವೆ. ಅಲ್ಲದೆ ಇವುಗಳ ಜತೆ ಅಲರ್ಜಿಯೂ ಸಹಿತ ಕಾಣಿಸತೊಡಗಿದೆ. ಚರ್ಮ ಸಂಬಂಧಿ ರೋಗ ಕಂಡ ತಕ್ಷಣ ಚಿಕಿತ್ಸೆ ಸಿಕ್ಕರೆ ಸರಿ, ಇಲ್ಲದಿದ್ದರೆ ಅದು ಉಲ್ಬಣಗೊಂಡು ಸಂತ್ರಸ್ತರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೆರೆ ಹಾವಳಿ ಗ್ರಾಮ ಹಾಗೂ ಪ್ರದೇಶಗಳಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳು ಹರಡುವ ಎಲ್ಲ ಲಕ್ಷಣಗಳು ಕಾಣುತ್ತಿದ್ದು, ಈಗ ಈ ಚರ್ಮ ಸಂಬಂಧಿ ರೋಗದಿಂದ ಸಂತ್ರಸ್ತರು ಮತ್ತಷ್ಟುಚಿಂತೆಗೊಳಗಾಗುವಂತೆ ಮಾಡಿದೆ. ಇನ್ನು ಮುಂದಿನ ದಿನಗಳಲ್ಲಿ ಕಾಲರಾ, ಡೆಂಘೀ, ಚಿಕೂನ್ಗುನ್ಯಾ, ಟೈಫೈಡ್, ಕಾಮಾಲೆ, ವಾಂತಿಭೇದಿ, ಹೊಟ್ಟೆನೋವು ಕೂಡ ಅಬ್ಬರಿಸಿ ಸಂತ್ರಸ್ತರನ್ನು ಹೈರಾಣಾಗಿಸಬಹುದಾಗಿದೆ.
ಅಸ್ತಮಾ ರೋಗಿಗಳಿಗೂ ತೊಂದರೆ:
2005ಕ್ಕಿಂತ ಈ ಬಾರಿ 7 ಅಡಿ ಅತೀ ಎತ್ತರವಾಗಿ ನೀರು ನಿಂತಿದ್ದರಿಂದ ಎಲ್ಲ ಬೆಳೆಗಳು ಕೊಳೆತು ಹೋಗಿವೆ. ಮಾತ್ರವಲ್ಲದೆ ಕೊಳೆತ ಈ ಬೆಳೆಗಳ ಕೆಟ್ಟದುರ್ವಾಸನೆ ಕಿಮೀಗಟ್ಟಲೆ ದೂರದವರೆಗೆ ಹರಡಿದೆ. ಇದರಿಂದ ವಾತಾವರಣದಲ್ಲಿನ ಗಾಳಿ ಅಶುದ್ಧವಾಗಿ ಅಸ್ತಮಾ ರೋಗಿಗಳ ಜೀವ ಕೈಯಲ್ಲಿ ಬರುವಂತಾಗುತ್ತಿದೆ. ವಿವಿಧ ಕೆಲಸಕಾರ್ಯಕ್ಕೆಂದು ಹೊಲಕ್ಕೆ ಹೋಗಿ ಬಂದರೆ ಸಾಕು ಹೊಲದಲ್ಲಿನ ವಿವಿಧ ಸಸ್ಯಗಳು ಹಾಗೂ ಕೊಳೆತ ಬೆಳೆಗಳು ಮೈಕೈಗೆ ತಾಗಿ ಕೆರೆತ ಶುರುವಾಗುತ್ತಿದೆ. ಅಲ್ಲದೆ ಕುಡಿಯುವ ನೀರೂ ಸಹಿತ ಅಶುದ್ಧವಾಗಿದ್ದು ಸಂತ್ರಸ್ತರಿಗೆ ಮಾರಕವಾಗಿ ಪರಿಣಮಿಸಿದೆ.
ರೋಗಗಳನ್ನು ತಡೆಯಲು ಕ್ರಮ:
ನೆರೆ ಹಾವಳಿ ಪ್ರದೇಶ ವ್ಯಾಪ್ತಿಯಲ್ಲಿ 9 ಪ್ರಾಥಮಿಕ ಆರೋಗ್ಯ ಕಂದ್ರಗಳಿವೆ. ಒಟ್ಟು 19 ವೈದ್ಯಕೀಯ ತಂಡ ನೇಮಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ ಚಾಲನೆಗೆ ನೀಡಿದ್ದೇವೆ. ಶುದ್ಧ ಕುಡಿಯುವ ನೀರಿನ ಬಗ್ಗೆ ಆರ್ಒಪ್ಲಾಟ್ಗಳಲ್ಲಿ ನೀರನ್ನು ತಪಾಸಣೆ ಮಾಡಲಾಗುವುದು. ಹಲೋಜಿನ್ ಗುಳಿಗೆಗಳನ್ನು ವಿತರಿಸಲಾಗಿದೆ. ಮುಂದೆ ಬೇಕಾಗುವ ಔಷಧಗಳ ಸಂಗ್ರಹ ಮಾಡಲಾಗಿದೆ. ಗ್ರಾಪಂಗಳು ಗಟಾರ್ ಮತ್ತು ಓಣಿಗಳಲ್ಲಿರುವ ಕಸವನ್ನು ಸ್ವಚ್ಛ ಮಾಡುವುದು ಡಿಡಿಟಿ ಪೌಡರ್ ಸಿಂಪಡಿಸಲು ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ ಎಂದು ತಾಲೂಕು ಆರೋಗ್ಯಧಿಕಾರಿ ಡಾ.ಎಂ.ಎಸ್. ಕೊಪ್ಪದ ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರಿಲ್ಲ:
ಭೂಸೇನಾ ನಿಗಮದವರು ನಿರ್ಮಿಸಿದ ಸುಮಾರು 34 ಆರ್ಒಪ್ಲಾಟ್ (ಶುದ್ಧ ನೀರಿನ ಘಟಕ) ಸ್ಥಾಪಿಸಿದಾಗಿನಿಂದಲೂ ಚಾಲ್ತಿಯಲ್ಲಿ ಇಲ್ಲ. ಇನ್ನೂ ರಿಪೇರಿ ಹಂತದಲ್ಲಿವೆ. ಈ ಕುರಿತು ಆರೋಗ್ಯ ಅಧಿಕಾರಿಗಳನ್ನು ಕೇಳಿದಾಗ ನಾವು ಫಾಗಿಂಗ್ ಯಂತ್ರ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ರಿಪೇರಿಗಾಗಿ ಪತ್ರದ ಮೂಲಕ ತಾಲೂಕಾಡಳಿತಕ್ಕೆ ತಿಳಿಸಿದ್ದೇವೆ. ಅವರು ರಿಪೇರಿ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿಗಳ ಕೆಲಸಕ್ಕೆ ಕೆಲವು ಸಿಬ್ಬಂದಿ ಸಹಕಾರ ಕೊರತೆ ಆಗಿದೆ. ನದಿ- ಇಂಗಳಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ವಾಹನವನ್ನು ನೆರೆ ಪೀಡಿತ ಪ್ರದೇಶದ ಸೇವೆಗೆ ತಾತ್ಕಾಲಿಕವಾಗಿ ನೀಡಲು ಕೇಳಿದರೂ ಅಲ್ಲಿನ ಆರೋಗ್ಯಾಧಿಕಾರಿ ಒಪ್ಪುತ್ತಿಲ್ಲ. ಇದರಿಂದ ಆರೋಗ್ಯ ಇಲಾಖೆಯಲ್ಲಿ ಸಮನ್ವಯತೆ ಕೊರತೆ ಇದೆ.