‘ರಾಜ್ಯ ಸರ್ಕಾರ ವಜಾಗೊಳಿಸಿ : 25 ಸಂಸದರು ರಾಜೀನಾಮೆ ಕೊಡಲಿ’
ರಾಜ್ಯದಲ್ಲಿರುವ 25 ಸಂಸದರು ರಾಜೀನಾಮೆ ನೀಡಲಿ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ವಜಾಗೊಳಿಸಬೇಕು ಎಂದು ಹೇಳಿದ್ದಾರೆ.
ಹಾಸನ [ಅ.05]: ನೆರೆ ಸಂತ್ರಸ್ತರಿಗೆ ನೆರವು ಕೊಡಿಸದ ಅಸಮರ್ಥ ಸಂಸದರು ರಾಜೀನಾಮೆ ನೀಡಬೇಕು ಮತ್ತು ಸಮಪರ್ಕ ಆಡಳಿತ ನೀಡದ ಕರ್ನಾಟಕ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಹುಜನ್ ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ಕೋಟಿ ಬಂಡವಾಳ ಹೂಡಿ ಕೆಲವು ಶಾಸಕರನ್ನು ಖರೀದಿಸಿ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕೆಡವಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದ ರಾಜ್ಯ ಬಿಜೆಪಿ ಸರ್ಕಾರ ಕೇಂದ್ರದಿಂದ ಸೂಕ್ತ ನೆರವು ತರಲಾಗದೆ ತಮ್ಮದು ಅಸಮರ್ಥ ಸರ್ಕಾರವೆಂದು ನಿರೂಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೇಂದ್ರ ಮತ್ತು ರಾಜ್ಯದ ಎರಡೂ ಕಡೆ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿವೆ. ಅಲ್ಲದೇ, ಬಿಜೆಪಿಗೆ ಅತಿ ಹೆಚ್ಚು ಶಾಸಕರು ಮತ್ತು ಸಂಸದರನ್ನು ನೀಡಿರುವ ಕರ್ನಾಟಕ ರಾಜ್ಯವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿರುವುದು ದುರಂತ. ರಾಜ್ಯದ 28 ಸಂಸದರ ಪೈಕಿ 25 ಮಂದಿ ಬಿಜೆಪಿಯಿಂದಲೇ ಆಯ್ಕೆಯಾಗಿದ್ದಾರೆ.
ಕೇಂದ್ರದಲ್ಲೂ ತಮ್ಮದೇ ಸರ್ಕಾರ ಇರುವುದರಿಂದ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದರೇ ಅತೀ ಹೆಚ್ಚಿನ ಪ್ರಮಾಣದ ಅನುದಾನ ತರಬಹುದು ಎಂಬ ಭರವಸೆಯನ್ನು ಜನರಲ್ಲಿ ಹುಟ್ಟಿಸಿ. ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿ ಅಗತ್ಯ ನೆರವು ನೀಡಬೇಕಿದ್ದ ಜನಪ್ರತಿನಿಧಿಗಳು ಪ್ರವಾಹ ಸಂತ್ರಸ್ತರ ಬಗ್ಗೆ ಅತ್ಯಂತ ನಿಕೃಷ್ಟವಾಗಿ ವರ್ತಿಸುತ್ತಿದ್ದಾರೆ. ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಲಾಗದ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.
ರಾಜ್ಯದ ಕೋಟ್ಯಂತರ ಜನರು ಸಾವು ಬದುಕಿನ ನಡುವೆ ಜೀವನ ನಡೆಸುತ್ತಿದ್ದಾರೆ. ಅಸಮರ್ಥರಾಗಿರುವ ರಾಜ್ಯದ ಸಂಸದರು ತಕ್ಷಣ ರಾಜೀನಾಮೆ ಕೊಡಬೇಕು. ಅಸಹಾಯಕ ಸಿಎಂ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರವನ್ನು ವಿಸರ್ಜಿಸಬೇಕೆಂದರು.