ಹಾಸನಾಂಬ ದರ್ಶನಕ್ಕೆ ಹೆಸರು ಹಾಕಿಸಿ ಹೋಗಬೇಕೇನ್ರೀ ಎಂದ್ರು ರೇವಣ್ಣ..!
ಹಾಸನಾಂಬ ದೇಗುಲದ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಚಿವ ರೇವಣ್ಣ ಅವರ ಹೆಸರನ್ನು ನಮೂದಿಸಿಲ್ಲ. ಹಾಸನಾಂಬೆ ದರ್ಶನಕ್ಕೆ ಬಂದ ಸಂದರ್ಭ ರೇವಣ್ಣ ಈ ಬಗ್ಗೆ ಹೇಳಿದ್ದೇನು..? ತಿಳಿಯಲು ಈ ಸುದ್ದಿ ಓದಿ.
ಹಾಸನ(ಅ.17): ಮಾಜಿ ಪ್ರಧಾನಿ ದೇವೇಗೌಡರು ಮತ್ತು ನಮ್ಮ ಕುಟುಂಬ ರಾಜಕೀಯ ಜೀವನದಲ್ಲಿ ಮಾಡಿರುವ ಸಾಧನೆಗಳು ಜನರ ಮನಸ್ಸಿನಲ್ಲಿವೆ. ಆದರೂ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಕುಟುಂಬದ ಹೆಸರನ್ನು ಹಾಕದೆ ಕೀಳುಮಟ್ಟದ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಹಾಸನಾಂಬ ದೇಗುಲದ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿನ ಎಡವಟ್ಟಿನ ಕುರಿತಂತೆ ಜಿಲ್ಲಾಡಳಿತ ಮತ್ತು ಕೆಲ ಕಾಣದ ಕೈಗಳ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ಹೊಳೆನರಸೀಪುರ ಪಟ್ಟಣದ ಪುರದೈವ ಲಕ್ಷ್ಮೇನರಸಿಂಹಸ್ವಾಮಿ ದೇವಾಲಯದ ಹೊರ ಗೋಡೆಗಳ ಪುನರ್ನಿರ್ಮಾಣ ಮತ್ತು ಇನ್ನಿತರೆ ಕಾಮಗಾರಿಗಳಿಗೆ ದೇವಾಲಯದ ಆವರಣದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಾಸನಾಂಬ ದೇಗುಲಕ್ಕೆ ನಾವು ನಮ್ಮ ಕುಟುಂಬ ಇವರಿಂದ ಹೆಸರು ಹಾಕಿಸಿಕೊಂಡು ಹೋಗಬೇಕೇನ್ರೀ ಎಂದು ಸಿಡಿಮಿಡಿಗೊಂಡಿದ್ದಾರೆ.
ಜಿಲ್ಲಾಧಿಕಾರಿಗಳು ಆಹ್ವಾನ ಪತ್ರಿಕೆ ಸಿದ್ಧಪಡಿಸುವಾಗ ಶಿಷ್ಟಾಚಾರ ಪಾಲಿಸಬೇಕಿತ್ತು. ಆದರೆ, ಬೇಕೆಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಂಸದ ಪ್ರಜ್ವಲ್ ರೇವಣ್ಣ ಮತ್ತು ನಮ್ಮಗಳ ಹೆಸರನ್ನು ಕೈಬಿಟ್ಟು ಹೀಗೆಲ್ಲಾ ಮಾಡಿದ್ದಾರೆ. ಇರಲಿ ಬಿಡಿ, ಅವರೆಲ್ಲಾ ಈ ಮಟ್ಟದ ರಾಜಕಾರಣ ಮಾಡೋದಾದ್ರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇದರ ಕುರಿತು ಗಮನಹರಿಸಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇವರಿಂದ ಹೆಸರು ಹಾಕಿಸಿಕೊಂಡು ಹಾಸನಾಂಬ ದೇಗುಲಕ್ಕೆ ಹೋಗುವ ಪರಿಸ್ಥಿತಿ ನಮಗೆ ಬಂದಿಲ್ಲ. ಅದಕ್ಕಾಗಿಯೇ ಜಿಲ್ಲಾಡಳಿತ ನೀಡಿದ ದೇಗುಲದ ದರ್ಶನ ಪಾಸ್ ಅನ್ನು ಕೂಡ ಹಿಂತಿರುಗಿಸಿದ್ದೇನೆ. ನೋಡೋನ ನಡೀರಿ ಎಲ್ಲಿಯವರೆಗೆ ಹೀಗೆಯೇ ನಡೆದುಕೊಳ್ಳುತ್ತಾರೆ ಎಂದಿದ್ದಾರೆ.
ಹುಣಸೂರು ತಾಲೂಕನ್ನು ಕೇಂದ್ರವಾಗಿಸಿಕೊಂಡು ಪ್ರತ್ಯೇಕ ಜಿಲ್ಲೆ ರಚಿಸುವಂತೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಇಟ್ಟಿರುವ ಬೇಡಿಕೆಯ ಕುರಿತು ಪ್ರತಿಕ್ರಿಯಿಸಲು ರೇವಣ್ಣ ನಿರಾಕರಿಸಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ
ಈ ಸಂದರ್ಭದಲ್ಲಿ ಇಇ ಪುಟ್ಟರಾಜು, ಮಹದೇವ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ಎಚ್.ವಿ.ಪುಟ್ಟರಾಜು, ಕೆ.ಆರ್.ಸುಬ್ರಹ್ಮಣ್ಯ, ಸದಸ್ಯ ಎಚ್.ಕೆ.ಪ್ರಸನ್ನ, ನಿಂಗಯ್ಯ, ಸೊಪ್ಪಿನ ಶಿವಣ್ಣ, ಎಸ್.ಎ.ರಘು ಮೊದಲಾದವರು ಹಾಜರಿದ್ದರು.
'ಹಣ ಇದೆ ಅಂತ ಎಂಟಿಬಿ ಮೆರೀತಿದ್ದಾರೆ, ಎಲೆಕ್ಷನ್ ನಂತ್ರ ಆಟ ಬಂದ್'..!..