ಆದಿಚುಂಚನಗಿರಿ ಶ್ರೀಗೆ 108ಕೆ.ಜಿ. ಬೆಳ್ಳಿ ತುಲಾಭಾರ
ಹಾಸನದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಬೇಲೂರು ತಾಲೂಕಿನ ಸಮಸ್ತ ಭಕ್ತವೃಂದ ಇವರ ಆಶ್ರಯದಲ್ಲಿ ಪಟ್ಟಣದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗೆ 108 ಕೆ.ಜಿ. ತೂಕದ ರಜತ ತುಲಾಭಾರ ನಡೆಸಲಾಯಿತು.
ಬೇಲೂರು (ಅ.15): ಪಟ್ಟಣದ ಸರ್ಕಾರಿ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಅಮೃತ ಹುಣ್ಣಿಮೆ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ 108 ಕೆ.ಜಿ. ತೂಕದ ರಜತ ತುಲಾಭಾರ ಹಾಗೂ ನವಧಾನ್ಯಗಳು ಮತ್ತು ಪೂಜಾ ಸಾಮಗ್ರಿಗಳ ತುಲಾಭಾರವನ್ನು ನಡೆಸಲಾಯಿತು.
ಗುರು ಪೂರ್ಣಿಮೆ ಅಂಗವಾಗಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ ಹಾಗೂ ಬೇಲೂರು ತಾಲೂಕಿನ ಸಮಸ್ತ ಭಕ್ತವೃಂದ ಇವರ ಆಶ್ರಯದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದ ಆರನೇ ವರ್ಷದ ವಾರ್ಷಿಕೋತ್ಸವ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಸಂಸ್ಮರಣೋತ್ಸವ, ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಗುರುವಂದನೆ ಮತ್ತು ರಜತ ತುಲಾಭಾರ ಕಾರ್ಯಕ್ರಮವನ್ನು ನಡೆಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದ ನಂತರ ಅವರಿಗೆ ಗೌರವವನ್ನು ಸಮರ್ಪಿಸಲು ಬೇಲೂರು ತಾಲೂಕಿನ ಸಮಸ್ತ ಭಕ್ತರು ರಜತ ತುಲಾಭಾರವನ್ನು ಆಯೋಜಿಸಿದ್ದರು. ಅದರಂತೆ ಅವರನ್ನು ವೇಲಾಪುರಿ ವೇದಿಕೆ ಮೇಲೆ ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಮಠದ ಭಕ್ತರ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡಿದ ಬೆಳ್ಳಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ಶಾಸಕ ಲಿಂಗೇಶ್ ಹಾಗೂ ತಾಲೂಕಿನ ಸಮಸ್ತ ಭಕ್ತರು ಭಾಗವಹಿಸಿದ್ದರು.