ಹಿಂಗಾರು ವಿಮೆ ಪರಿಹಾರ: ಗದಗ ಜಿಲ್ಲೆಗೆ 323 ಕೋಟಿ ರು. ಬಿಡುಗಡೆ
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ|ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ 323 ಕೋಟಿ ರು. ಬಿಡುಗಡೆ| ಜಿಲ್ಲೆಯ 5 ತಾಲೂಕುಗಳ 96339 ರೈತರ ಖಾತೆಗಳಿಗೆ ನೇರವಾಗಿ ವಿಮೆ ಪರಿಹಾರದ ಜಮೆ ಆಗಲಿದೆ ಎಂದ ಸಚಿವ ಸಿಸಿ ಪಾಟೀಲ|
ಗದಗ(ನ.9): ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ 2018-19ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ 323 ಕೋಟಿ ರು. ಬಿಡುಗಡೆಯಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಹೇಳಿದ್ದಾರೆ.
ಅವರು ಗುರುವಾರ ಗದಗ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ 5 ತಾಲೂಕುಗಳ 96339 ರೈತರ ಖಾತೆಗಳಿಗೆ ನೇರವಾಗಿ ವಿಮೆ ಪರಿಹಾರದ ಜಮೆ ಆಗಲಿದೆ. 323 ಕೋಟಿ ವಿಮೆ ಪರಿಹಾರ ಪಡೆದಿರುವ ಗದಗ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಗದಗ 91 ಕೋಟಿ, ರೋಣ 168 ಕೋಟಿ, ಮುಂಡರಗಿ 23.5 ಕೋಟಿ, ನರಗುಂದ 33 ಕೋಟಿ, ಶಿರಹಟ್ಟಿ 7.5 ಕೋಟಿ ಪರಿಹಾರ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಜಿಲ್ಲೆಯ ರೈತರ ನೆರವಿಗೆ ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ವಸತಿ ಸಚಿವ ವಿ. ಸೋಮಣ್ಣ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಜರಿದ್ದರು.