ಚಿತ್ರ ನಿರ್ಮಾಣಕ್ಕೆ ಮುಂದಾದ ರಾಧಿಕಾ ಕುಮಾರಸ್ವಾಮಿ
ಇಷ್ಟು ದಿನ ನಟನೆಗೆ ಮಾತ್ರ ಸೀಮಿತವಾಗಿದ್ದ ರಾಧಿಕಾ ಕುಮಾರಸ್ವಾಮಿ, ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಈ ಬಗ್ಗೆ ಅವರು ಹೇಳುವುದೇನು?
ನಟನೆಯ ಜತೆಗೆ ಮತ್ತೆ ನಿರ್ಮಾಣಕ್ಕೂ ಮುಂದಾಗಿದ್ದು ಯಾಕೆ?
ಒಂದೊಳ್ಳೆ ಕತೆ. ಕೆಟ್ಟದ್ದರ ಸಂಹಾರಕ್ಕೆ ಕಾಳಿಯ ಅವತಾರ ಹೇಗೆಲ್ಲ ಆಗುತ್ತೆ ಅನ್ನೋದನ್ನು ಇಲ್ಲಿ ತೋರಿಸುವ ಪ್ರಯತ್ನ ನಡೆದಿದೆ. ಈ ಕಾಲಕ್ಕೆ ಇದೆಲ್ಲ ಬೇಕು ಎನಿಸುತ್ತೆ. ನಂಬಿಕೆ ಮತ್ತು ಅದರ ವಿರುದ್ಧದ ಹೋರಾಟ ಅದು. ಸಮಾಜಕ್ಕೆ ಒಂದೊಳ್ಳೆ ಸಂದೇಶವಿದೆ. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಅನ್ನೋದು ಒಂದೆಡೆಯಾದರೆ ನಟನೆ ಅಂತ ಬಂದಾಗ ವಿಭಿನ್ನ ಪಾತ್ರಗಳೇ ನನ್ನ ಆಯ್ಕೆ. ಅಂಥದ್ದೇ ವಿಭಿನ್ನ ಮತ್ತು ವಿಶೇಷವಾದ ಪಾತ್ರ. ಒಪ್ಪಿಕೊಳ್ಳುವುದಕ್ಕೆ ಇದಕ್ಕಿಂತ ಹೆಚ್ಚೇನು ಕಾರಣ ಬೇಕಿರಲಿಲ್ಲ.
ನಿಮ್ಮ ಜತೆ ಚಿತ್ರದಲ್ಲಿ ಯಾರೆಲ್ಲ ಇರುತ್ತಾರೆ, ನಿರ್ಮಾಣದ ಸಿದ್ಧತೆ ಹೇಗೆಲ್ಲ ನಡೆದಿದೆ?
ಸದ್ಯಕ್ಕೆ ನಾನು ಸೇರಿದಂತೆ ರಮೇಶ್ ಅರವಿಂದ್, ಅನು ಪ್ರಭಾಕರ್ ಆಯ್ಕೆ ಫೈನಲ್ ಆಗಿದೆ. ಇನ್ನಷ್ಟು ಕಲಾವಿದರು ಬೇಕಿದೆ. ಯಾವ ಪಾತ್ರಕ್ಕೆ ಯಾರು ಸೂಕ್ತ ಅನ್ನೋದು ನಿರ್ದೇಶಕರ ನಿರ್ಧಾರ. ಕತೆಗೆ ತಕ್ಕಂತೆ ೫೦ಕ್ಕೂ ಹೆಚ್ಚು ದಿನಗಳ ಚಿತ್ರೀಕರಣದ ಅವಧಿ ಅಂತ ಡಿಸೈಡ್ ಮಾಡಿಕೊಂಡಿದ್ದೇವೆ. ಇನ್ನಷ್ಟು ದಿನಗಳು ಹೆಚ್ಚಾಗಬಹುದು, ಇಲ್ಲವೇ ಕಮ್ಮಿಯೂ ಆಗಬಹುದು. ಒಟ್ಟಿನಲ್ಲಿ ಸಿನಿಮಾ ಚೆನ್ನಾಗಿ ಬರಬೇಕು ಅನ್ನೋದು ನಮ್ಮ ಆಲೋಚನೆ.
ಈಗಾಗಲೇ ನೀವು ಒಪ್ಪಿಕೊಂಡ ರವಿಚಂದ್ರನ್ ನಿರ್ದೇಶನದ 'ರಾಜೇಂದ್ರ ಪೊನ್ನಪ್ಪ' ಚಿತ್ರದ ಚಿತ್ರೀಕರಣ ಎಲ್ಲಿಗೆ ಬಂತು?
ಆಲ್ಮೋಸ್ಟ್ ಮುಗೀತಾ ಬಂದಿದೆ. ನನ್ನ ಪಾತ್ರಕ್ಕೆ ಸಂಬಂಧಿಸಿದಂತೆ ಹೇಳೋದಾದ್ರೆ ಇನ್ನು 10 ರಿಂದ 15 ದಿನಗಳ ಚಿತ್ರೀಕರಣ ಬಾಕಿಯಿದೆ. ಚಿತ್ರತಂಡದ ಕಡೆಯಿಂದ ಇನ್ನು ದಿನಾಂಕ ಫಿಕ್ಸ್ ಆಗಿಲ್ಲ. ದಿನಾಂಕ ಫಿಕ್ಸ್ ಆಗಿ, ಅದನ್ನು ಮುಗಿಸಿಕೊಟ್ಟರೆ ಎಲ್ಲವೂ ಕಂಪ್ಲೀಟ್ ಆಗುತ್ತೆ. ಒಂದೊಳ್ಳೆ ತಂಡದ ಜತೆಗೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.