ಉದ್ಯಮಿ ಚರಣ್ ಜತೆಗೆ ಲಹರಿ ವೇಲು ಪುತ್ರಿ ವರ್ಷಾ ವಿವಾಹ!
ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆ ಮಾಲೀಕ ತುಳಸಿರಾಮನಾಯ್ಡು (ಲಹರಿ ವೇಲು) ಪುತ್ರಿ ವರ್ಷಾ ಹಾಗೂ ಹೈದರಾಬಾದ್ ಮೂಲದ ಯುವ ಉದ್ಯಮಿ ಚರಣ್ ವಿವಾಹ ಮಹೋತ್ಸವ ಶುಕ್ರವಾರ ಬೆಳಗ್ಗೆ ನಡೆಯಿತು. ಬೆಂಗಳೂರಿನ ತಾಜ್ವೆಸ್ಟ್ ಎಂಡ್ ಪಂಚತಾರಾ ಹೋಟೆಲ್ನಲ್ಲಿ ಈ ಜೋಡಿಯ ವಿವಾಹವು ವರ್ಣರಂಜಿತವಾಗಿ ನೆರವೇರಿತು.
ಕನ್ನಡ ಹಾಗೂ ತೆಲುಗು ಚಿತ್ರೋದ್ಯಮದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಹಲವರು ಈ ಜೋಡಿಯ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾದರು. ಹಿಂದೂ ಸಂಪ್ರದಾಯದಂತೆ ಅದ್ಧೂರಿ ಶಾಸ್ತ್ರಗಳೊಂದಿಗೆ ಮದುವೆ ಕಾರ್ಯಕ್ರಮ ಜರುಗಿತು. ನವ ಜೋಡಿಯ ವಿವಾಹ ಶಾಸ್ತ್ರಕ್ಕೆ ಬಗೆಯ ಬಗೆಯ ಹೂವಿನ ಆಕರ್ಷಕ ವೇದಿಕೆ ನಿರ್ಮಾಣವಾಗಿತ್ತು. ಹೈದರಾಬಾದ್ ಮೂಲದ ಚರಣ್, ಟಾಲಿವುಡ್ ನಿರ್ಮಾಪಕ ಸುರೇಶ್ ದೇನಿನೇನಿ ಪುತ್ರ. ಅತೀ ಕಿರಿಯ ವಯಸ್ಸಿನಲ್ಲೇ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಲಹರಿ ವೇಲು ಪುತ್ರಿ ವರ್ಷ ಅಮೆರಿಕ ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ಮದುವೆಗೆ ಬಂದ ಗಣ್ಯರು
ಗುರುವಾರ ಸಂಜೆ ಈ ಜೋಡಿಯ ಆರತಕ್ಷತೆ ನಡೆಯಿತು. ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ, ನಿರ್ಮಾಪಕರಾದ ರಾಘವೇಂದ್ರ ರಾವ್, ಅಲ್ಲು ಅರವಿಂದ್, ನಟ ಅಲ್ಲು ಶಿರಿಶ್ ಆಗಮಿಸಿದ್ದರು. ಬಿಎಸ್ ಯಡಿಯೂರಪ್ಪ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಆಂಧ್ರ ಪ್ರದೇಶ ಸಚಿವ ಘಂಟಾ ಶ್ರೀನಿವಾಸ್, ರವಿಚಂದ್ರನ್, ಯಶ್, ಹಂಸಲೇಖ, ರಾಕ್ಲೈನ್ ವೆಂಕಟೇಶ್, ಮುನಿರತ್ನ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಪುರವಣಿ ಸಂಪಾದಕ ಜೋಗಿ, ಶಾಸಕ ಕುಮಾರ್ ಂಗಾರಪ್ಪ, ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ನಿರ್ದೇಶಕ ಗುರುದೇಶಪಾಂಡೆ, ನಿರ್ಮಾಪಕರಾದ ಸಾ.ರಾ. ಗೋವಿಂದು, ಶೈಲೇಂದ್ರ ಬಾಬು, ವಿಧಾನ ಪರಿಷತ್ ಸದಸ್ಯ ಶರವಣ, ನಿವೃತ್ತ ಐಎಎಸ್ ಅಧಿಕಾರಿಗಳಾದ ಕೆ. ಶಿವರಾಂ, ಡಾ. ಸೋಮಶೇಖರ್, ಸಾಹಿತಿಗಳಾದ ಎಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿ ಹಲವರು ಭಾಗವಹಿಸಿ, ನವ ಜೋಡಿಗೆ ಶುಭಾಶಯ ಕೋರಿದರು.