‘ಬಳೆ’ ರಗಳೆ; ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕ್ಯಾಟಗರಿ ನಾನಲ್ಲ ಎಂದ ಸುದೀಪ್
ಪೈಲ್ವಾನ್ ಪೈರಸಿ ಬಗ್ಗೆ ಕಿಚ್ಚ ಸುದೀಪ್ ಮಾತನಾಡುವ ಭರದಲ್ಲಿ ‘ನಾನು ಹಾಕಿದ್ದು ಬಳೆಯಲ್ಲ, ಕಡಗ ಅಲ್ಲ’ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು | ತಮ್ಮ ಮಾತಿಗೆ ಸುದೀಪ್ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.
ಬಹುನಿರೀಕ್ಷಿತ ಕಿಚ್ಚ ಸುದೀಪ್ ‘ಪೈಲ್ವಾನ್’ ಪೈರಸಿ ಮಾಡಿದ ರಾಕೇಶ್ ಬಂಧನದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದವು. ಕಿಚ್ಚ ಸುದೀಪ್- ದರ್ಶನ್ ಅಭಿಮಾನಿಗಳ ನಡುವೆ ವಾಕ್ಸಮರ ತಾರಕ್ಕೇರಿತು. ಪೈರಸಿ ಬಗ್ಗೆ ಸುದೀಪ್ ಮಾತನಾಡುವ ಭರದಲ್ಲಿ, ‘ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ’ ಎಂದು ಟ್ವೀಟ್ ಮಾಡಿದ್ದರು.
ಪೈರಸಿ ಕಾಟಕ್ಕೆ ‘ಪೈಲ್ವಾನ್’ 5 ಕೋಟಿ ಲಾಸ್?
ಇಲ್ಲಿ ಕೈಗೆ ಹಾಕಿರುವುದು ಬಳೆಯಲ್ಲ, ಕಡಗ ಎಂದಿರುವುದು ಚರ್ಚಾಸ್ಪದವಾಗಿದೆ. ಸುದೀಪ್ ಮಹಿಳಾ ಮಣಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸ್ಟಾರ್ ನಟನಾಗಿ ಇಂತಹ ಮಾತುಗಳನ್ನಾಡಬಾರದು ಎಂಬ ಮಾತುಗಳು ಕೇಳಿ ಬಂದವು. ಇದೀಗ ಸುದೀಪ್ ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
" ನಾನು ಬಳಸಿರುವ ‘ಬಳೆ’ ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಮಹಿಳೆಯರಿಗೆ ಪ್ರತಿಕ್ರಿಯೆ ಇದು. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕ್ಯಾಟಗರಿ ನಾನಲ್ಲ. ಎಲ್ಲಾ ಮಹಿಳೆಯರ ಬಗ್ಗೆ ಗೌರವವಿದೆ. ಈ ಬಗ್ಗೆ ನಾನು ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ ಎಂದಿದ್ದಾರೆ.