ನಟ ಸಾರ್ವಭೌಮ ಟೈಟಲ್ ಕೇಳಿ ಶಾಕ್ ಆಗಿತ್ತು: ಪುನೀತ್ ರಾಜ್ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ನಟಸಾರ್ವಭೌಮ' ರಿಲೀಸ್ ಆಗಿದೆ. ತಂದೆ ಡಾ.ರಾಜ್ಕುಮಾರ್ ಅವರಿಗೆ ಅಭಿಮಾನಿಗಳಿಗೆ ಪ್ರೀತಿ, ಗೌರವದಿಂದ ನೀಡಿರುವ ಬಿರುದಿನ ಹೆಸರಿನಲ್ಲಿ ನಟಿಸುವಾಗಿ ಇದ್ದ ಆತಂಕದ ಬಗ್ಗೆ ಪುನೀತ್ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಪುನೀತ್ ರಾಜ್ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರ ಇಂದು ತೆರೆಗೆ ಬರುತ್ತಿದೆ. ‘ರಣವಿಕ್ರಮ’ ನಂತರ ಪುನೀತ್ - ಪವನ್ ಒಡೆಯರ್ ಜೋಡಿ ಮತ್ತೆ ಒಂದಾಗಿದೆ. ರಾಕ್ಲೈನ್ ವೆಂಕಟೇಶ್ ಇದರ ನಿರ್ಮಾಪಕರು. ಈ ಸಿನಿಮಾದ ಕುರಿತು ಪುನೀತ್ ಹೇಳಿದ್ದು ಇಲ್ಲಿದೆ.
ಪುನೀತ್ ಮೇಲೆ ರಚಿತಾ ರಾಮ್ ದೆವ್ವ ಬರುತ್ತಾ?
1. ಟೈಟಲ್ ಕೇಳಿಯೇ ಶಾಕ್
ನಟ ಸಾರ್ವಭೌಮ ಅಂದ್ರೆ ಡಾ.ರಾಜ್ಕುಮಾರ್ ಒಬ್ಬರೇ. ಅದು ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಬಿರುದು. ಆ ಹೆಸರಿನಲ್ಲಿ ಸಿನಿಮಾ ಮಾಡೋದಂದ್ರೆ ಅದೊಂದು ಸವಾಲು, ದೊಡ್ಡ ಜವಾಬ್ದಾರಿ. ಯಾಕಂದ್ರೆ, ಅದರ ಹಿಂದೆ ರಾಜ್ಕುಮಾರ್ ವ್ಯಕ್ತಿತ್ವ ಇದೆ. ಆ ವ್ಯಕ್ತಿತ್ವಕ್ಕೆ ಕಿಂಚಿತ್ತೂ ಧಕ್ಕೆ ಆಗದಂತೆ ಸಿನಿಮಾ ಮಾಡುವ ಎಚ್ಚರಿಕೆ ಮತ್ತು ಸವಾಲುಗಳಿರುತ್ತವೆ. ಹಾಗಾಗಿ ನಿರ್ದೇಶಕ ಪವನ್ ಒಡೆಯರ್ ಚಿತ್ರಕ್ಕೆ ‘ನಟಸಾರ್ವಭೌಮ’ಅಂತ ಟೈಟಲ್ ಸೂಕ್ತ ಎನಿಸುತ್ತೆ ಅಂದಾಗ, ನನಗೂ ಶಾಕ್ ಆಗಿತ್ತು. ಆದರೆ ಶೀರ್ಷಿಕೆಯೇ ಒಂದು ಸಿನಿಮಾ ಅಲ್ಲ. ಮೇಲಾಗಿ ‘ನಟಸಾರ್ವಭೌಮ’ ಎನ್ನುವ ಬಿರುದಿಗೂ, ಈ ಸಿನಿಮಾಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಒಂದು ಕತೆ, ಆ ಕತೆಗೆ ತಕ್ಕಂತೆ ಟೈಟಲ್ ಅಷ್ಟೇ. ಫೈನಲಿ ‘ನಟ ಸಾರ್ವಭೌಮ’ ಅಂದ್ರೆ ರಾಜ್ಕುಮಾರ್ ಮಾತ್ರ.
2. ಫಸ್ಟ್ ಟೈಮ್ ಹಾರರ್ ಚಿತ್ರ, ಜರ್ನಲಿಸ್ಟ್ ಪಾತ್ರ
ಪ್ರತಿ ಸಿನಿಮಾಕ್ಕೂ ಏನಾದರೊಂದು ಹೊಸ ರೀತಿಯಲ್ಲಿ ಪ್ರಯತ್ನ ಮಾಡೋಣ ಎನ್ನುವುದು ನನ್ನಾಸೆ. ಆ ಹಂತದಲ್ಲಿ ನನಗೆ ಸಿಕ್ಕ ಸಿನಿಮಾ ಇದು. ಎರಡ್ಮೂರು ವರ್ಷಗಳ ಹಿಂದೆಯೇ ಈ ಕತೆ ಕೇಳಿದ್ದೆ. ಆದರೆ ಆಗ ನಾನು ಬೇರೆಯದೇ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದೆ. ಹಾಗಾಗಿ ಈ ಸಿನಿಮಾ ಮಾಡ್ಲಿಕ್ಕೆ ಆಗಿರಲಿಲ್ಲ. ನಿರ್ದೇಶಕ ಪವನ್ ಮತ್ತೆ ಬಂದು ಕತೆ ಹೇಳಿದಾಗ ಒಂದಷ್ಟುಚೇಂಜಸ್ ಆಗಿದ್ದವು. ಮೊದಲಿಗಿಂತ ಕತೆ ಇಂಟರೆಸ್ಟಿಂಗ್ ಆಗಿತ್ತು. ಪಾತ್ರದ ನಿರೂಪಣೆ ಕೂಡ ಅದ್ಭುತ ಎನಿಸಿತು. ಕತೆ ಹೇಳುವ ಮುನ್ನವೇ ಪವನ್, ಕತೆಯೊಳಗಡೆ ಒಂದಷ್ಟುಹಾರರ್ ಎಲಿಮೆಂಟ್ಸ್ ಇವೆ ಅಂದಿದ್ದರು. ಹಾಗೆಯೇ ಜರ್ನಲಿಸ್ಟ್ ಕ್ಯಾರೆಕ್ಟರ್ ಅಂತಲೂ ಹೇಳಿದರು. ಅದುವರೆಗೂ ನಾನು ಟಚ್ ಮಾಡದ ಕತೆ ಮತ್ತು ಪಾತ್ರ ಅದು. ನನಗೆ ಕ್ಯೂರಿಯಾಸಿಟಿ ಶುರುವಾಯ್ತು. ಹಾಗಾಗಿ ಈ ಸಿನಿಮಾ ಒಪ್ಪಿಕೊಂಡೆ. ಜರ್ನಲಿಸ್ಟ್ ಅಂದಾಕ್ಷಣ ‘ಜ್ವಾಲಾಮುಖಿ’ ಚಿತ್ರದಲ್ಲಿ ಅಪ್ಪಾಜಿ ಮಾಡಿದ್ದ ಪಾತ್ರ, ಅಥವಾ ‘ ನ್ಯೂ ಡೆಲ್ಲಿ’ ಸಿನಿಮಾದಲ್ಲಿ ಅಂಬರೀಷ್ ಅಂಕಲ್ ಮಾಡಿದ್ದ ಪಾತ್ರ ನೆನಪಾಗಬಹುದು. ಆದ್ರೆ, ಅಂತಹ ಪಾತ್ರ ಇದಲ್ಲ. ಒಬ್ಬ ಪೋಟೋ ಜರ್ನಲಿಸ್ಟ್ ಮಾತ್ರ. ಅದಕ್ಕೆ ಒಂದಷ್ಟುಕಮರ್ಷಿಯಲ್ ಅಂಶಗಳನ್ನು ಸೇರಿಸಿಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕರು.
ರಿಲೀಸ್ಗೂ ಮುನ್ನವೇ ದಾಖಲೆ ಬರೆದ ಚಿತ್ರ
3. ಪವನ್ ಪ್ಯಾಷನ್ ನಂಗಿಷ್ಟ
ನಿರ್ದೇಶಕ ಪವನ್ ಒಂದು ಸಿನಿಮಾಕ್ಕೆ ರೆಡಿ ಆಗುವ ರೀತಿ ಸೊಗಸಾಗಿರುತ್ತೆ. ಕಂಪ್ಲೀಟ್ ಬರವಣಿಗೆ ಮಾಡ್ಕೊಂಡು, ಸ್ಟೋರಿ ಬೋರ್ಡ್ ರಚಿಸಿ, ಶೂಟಿಂಗ್ ಅಂತ ಹೊರಟಾಗ ಏನೇನು ಬೇಕೋ ಅದೆಲ್ಲವನ್ನು ರೆಡಿ ಮಾಡ್ಕೊಂಡು ಸೆಟ್ನಲ್ಲಿರುತ್ತಾರೆ. ಅವರ ಸಿನಿಮಾ ಪ್ಯಾಷನ್ ನಂಗಿಷ್ಟ. ‘ರಣ ವಿಕ್ರಮ’ ಸಿನಿಮಾಗಿಂತ ಎರಡನೇ ಸಿನಿಮಾಕ್ಕೆ ಅವರಲ್ಲಿ ಆದ ಬದಲಾವಣೆಗಳನ್ನು ನಾನು ಕಂಡಿದ್ದೇನೆ. ಅನುಭವ ಹೆಚ್ಚಾಗಿದೆ. ಆ ಮೂಲಕ ಈ ಸಿನಿಮಾ ತೆರೆ ಬಂದಿದೆ. ನನಗೆ ಖುಷಿ ಕೊಟ್ಟಿದೆ. ಹಾಗೆಯೇ ‘ಚಕ್ರವ್ಯೂಹ’ದ ನಂತರ ರಚಿತಾ ರಾಮ್ ಜತೆಗೆ ಅಭಿನಯಿಸಿದ್ದೇನೆ. ಸದ್ಯಕ್ಕೀಗ ಚಿತ್ರೋದ್ಯಮದಲ್ಲಿ ಎಲ್ಲೇ ಹೋದರೂ ರಚಿತಾ ರಾಮ್ ಹೆಸರು ಚಾಲ್ತಿಯಲ್ಲಿದೆ. ಇಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ. ಇನ್ನು ಅನುಪಮಾ ಪರಮೇಶ್ವರನ್ ಫಸ್ಟ್ ಟೈಮ್ ಕನ್ನಡಕ್ಕೆ ಬಂದಿದ್ದಾರೆ. ಸಿನಿಮಾದ ಮೇಲೆ ತುಂಬಾ ಪ್ಯಾಷನ್ ಇದೆ. ಎರಡನೇ ಸಿನಿಮಾಕ್ಕೆ ತಾವೇ ವಾಯ್್ಸ ಡಬ್ ಮಾಡುವುದಾಗಿ ಹೇಳಿದ್ದಾರೆ. ಆ ಬದ್ಧತೆ ಮೆಚ್ಚಲೇಬೇಕು. ಮೀರಾ ಜಾಸ್ಮಿನ್, ಪಾರ್ವತಿ ಮೆನನ್ ಜತೆಗೆ ಅಭಿನಯಿಸಿದ ಫೀಲಿಂಗ್ ಅನುಪಮಾ ಜತೆಗೆ ಅಭಿನಯಿಸುವಾಗಲೂ ಇತ್ತು.
4. ರಾಕ್ಲೈನ್ ಬ್ಯಾನರ್ ನಮ್ಮ ಹೋಮ್ ಬ್ಯಾನರ್ ಇದ್ದ ಹಾಗೆ
ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಪಕ್ಕಾ ಎಂಟರ್ಟೈನರ್. ಇಲ್ಲಿ ಕತೆಗೇನು ಅವಶ್ಯಕತೆ ಇತ್ತೋ ಅಷ್ಟನ್ನೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಪ್ರಾಮಾಣಿಕವಾಗಿ ಒದಗಿಸಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ ಅಂದ್ರೆ ನನಗೆ ಹೋಮ್ ಬ್ಯಾನರ್ ಇದ್ದ ಹಾಗೆ. ಅವರಿಗೂ ನಮ್ಮ ಫ್ಯಾಮಿಲಿಗೂ ಅವಿನಾಭಾವ ಸಂಬಂಧ. ಆರಂಭದಿಂದಲೂ ಒಳ್ಳೆಯ ಒಡನಾಟ ಹೊಂದಿದವರು. ಅವರ ಬ್ಯಾನರ್ ಸಿನಿಮಾ ಅಂದಾಗ ಮರು ಮಾತೇ ಆಡಿರಲಿಲ್ಲ. ಅವರಿಗೂ ಚಿತ್ರವನ್ನು ಅದ್ಧೂರಿಯಾಗಿಯೇ ತರಬೇಕು ಎನ್ನುವುದಿತ್ತು. ಅದಕ್ಕೆ ತಕ್ಕಂತೆ ನಿರ್ಮಾಣ ಮಾಡುತ್ತಾ ಬಂದರು. ದುಬಾರಿ ಸೆಟ್, ಲೊಕೇಶನ್, ಕಾಸ್ಟ್ಯೂಮ…, ಹಾಡುಗಳು, ಫೈಟಿಂಗ್ ಎಲ್ಲವೂ ಅದಕ್ಕೆ ಸಾಕ್ಷಿ. ಸಂಗೀತ ಹೊಸ ರೀತಿಯಲ್ಲಿ ಇರಬೇಕು ಅಂದುಕೊಂಡರು. ಅದಕ್ಕಾಗಿ ಹೆಸರಾಂತ ಸಂಗೀತ ನಿರ್ದೇಶಕ ಇಮಾನ್ ಅವರನ್ನು ಕರೆ ತಂದರು. ಆ್ಯಕ್ಷನ್ ಸನ್ನಿವೇಶಗಳು ವಿಭಿನ್ನವಾಗಿರಬೇಕೆಂದು ಫೇಮಸ್ ಸ್ಟಂಟ್ ಮಾಸ್ಟರ್ ಪೀಟರ್ ಹೀನ್ ಕರೆ ತಂದರು. ಜತೆಗೆ ಪಾತ್ರಗಳಿಗೆ ತಕ್ಕಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿ ಇರುವಂತೆ ನೋಡಿಕೊಂಡರು. ಇಷ್ಟೆಲ್ಲ ಇದೆ ಅಂದ್ಮೇಲೆ ಇದೊಂದು ಅದ್ಧೂರಿ ಸಿನಿಮಾ ಅಲ್ವಾ?
5. ದೆವ್ವ ಯಾರು ಅನ್ನೋದು ನಂಗೂ ಗೊತ್ತಿಲ್ಲ..
ಹಾರರ್ ಸಿನಿಮಾ ನಿಜ, ಹಾಗಂತ ಅದೇ ಸಿನಿಮಾ ಅಲ್ಲ. ಎಲ್ಲಾ ರೀತಿಯ ಅಂಶಗಳು ಈ ಚಿತ್ರದಲ್ಲಿವೆ. ಪ್ರೇಕ್ಷಕರಿಗೆ ಏನ್ ಕೊಡ್ಬೇಕು ಅನ್ನೋದು ನಿರ್ದೇಶಕ ಪವನ್ಗೆ ಗೊತ್ತಿದೆ. ಹಾಗಾಗಿಯೇ ಅವರು ರಂಜನೆಯ ಯಾವುದೇ ಅಂಶ ಮಿಸ್ ಆಗಬಾರದು ಅಂತ ಲವ್, ಸೆಂಟಿಮೆಂಟ್, ಆ್ಯಕ್ಷನ್, ಕಾಮಿಡಿ, ಸಾಂಗ್ಸ್.. ಎಲ್ಲವನ್ನು ಅಚ್ಚುಕಟ್ಟಾಗಿ ತಂದಿದ್ದಾರೆ. ಹಾರರ್ ಅಂದಾಕ್ಷಣ ಇದೇನೋ ದೆವ್ವದ ಕತೆ ಇರ್ಬೇಕು ಅಂತಿದ್ದಾರೆ. ನಿಜ, ಹೇಳ್ತೀನಿ, ಇಲ್ಲಿ ದೆವ್ವ ಯಾರು ಅಂತ ನಂಗೂ ಗೊತ್ತಿಲ್ಲ. ಸಿನಿಮಾ ನೋಡಿದಾಗಲೇ ಅದು ಗೊತ್ತಾಗುತ್ತೆ. ಫೈನಲಿ ನಾವೇನೇ ಮಾಡಿದರೂ, ಸಿನಿಮಾ ಪ್ರೇಕ್ಷಕರಿಗೆ ಇಷ್ಟಆಗ್ಬೇಕು. ಸಿನಿಮಾ ಮಾಡೋದು ಅವರಿಗಾಗಿಯೇ. ಅವರಿಗೆ ಬೇಕಿರೋದನ್ನು ನಿರ್ದೇಶಕರು ಇಲ್ಲಿ ತೆರೆಗೆ ತಂದಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಅಂತ ನಮಗೂ ಎನಿಸಿದೆ.
ನಟಸಾರ್ವಭೌಮ ಚಿತ್ರದ 1250 ಟಿಕೆಟ್ ಕೊಂಡ ಅಪ್ಪು ಅಭಿಮಾನಿ
ಅಭಿಮಾನಿ ಅಭಿಯನ್ನು ನೋಡಬೇಕಿದೆ!
ನಮ್ಮ ಚಿತ್ರದ ಮುಂಗಡ ಟಿಕೆಟ್ಗೆ ಸಿಕ್ಕಾಪಟ್ಟೆಬೇಡಿಕೆ ಬಂದಿದೆ ಎನ್ನುವ ಸುದ್ದಿ ಕೇಳಿ ಅಚ್ಚರಿಯಾಯಿತು. ಅಭಿ ಅಂತ ಒಬ್ಬ ಹುಡುಗ, ಒಬ್ಬನೇ ಊರ್ವಶಿ ಚಿತ್ರಮಂದಿರದ ಅಷ್ಟೂಟಿಕೆಟ್ ಖರೀದಿಸಿದ್ದಾರೆಂದು ಕೇಳಿದೆ. ನಿಜ ಹೇಳ್ತೀನಿ, ಆತ ಯಾರು ಅಂತ ನಂಗೇ ಗೊತ್ತಿಲ್ಲ. ಅವರನ್ನು ನೋಡ್ಬೇಕು ಅಂತ ಭಾರಿ ಆಸೆ, ಕುತೂಹಲ ಇದೆ. ಅವರು ನಮ್ಮ ಮೇಲಿಟ್ಟಿರುವ ಪ್ರೀತಿಗೆ ಎಷ್ಟುಥ್ಯಾಂಕ್ಸ್ ಹೇಳಿದರೂ ಸಾಲದು. ಸಿನಿಮಾ ನೋಡಿ ಅವರು ಖುಷಿ ಪಟ್ಟರೆ, ನಾವು ಹಾಕಿದ ಶ್ರಮ ಸಾರ್ಥಕ.