‘ರಾಂಧವ’ನಾಗಿ ಭುವನ್ ಭರ್ಜರಿ ಎಂಟ್ರಿ
ಬಿಗ್ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ನಾಯಕರಾಗಿ ಅಭಿನಯಿಸಿರುವ ‘ರಾಂಧವ’ ಚಿತ್ರ ರಿಲೀಸ್ಗೆ ರೆಡಿ ಆಗಿದೆ. ಅದ್ದೂರಿ ವೆಚ್ಚದಲ್ಲೇ ನಿರ್ಮಾಣವಾಗಿರುವ ಈ ಚಿತ್ರ ಹೊಸ ವರ್ಷದಲ್ಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಇದಕ್ಕೆ ಪೂರಕವಾಗಿಯೇ ಈಗ ಗಾಂಧಿನಗರದ ಪ್ರತಿಷ್ಟಿತ ವಿತರಣೆ ಸಂಸ್ಥೆ ಜಯಣ್ಣ ಕಂಬೈನ್ಸ್ ‘ರಾಂಧವ’ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಲು ಮುಂದಾಗಿದೆ.
ಭುವನ್ ಪೊನ್ನಣ್ಣ ಇದೇ ಮೊದಲು ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ಸುನೀಲ್ ಎಸ್. ಆಚಾರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೈದರಾಬಾದ್ ಮೂಲದ ನಟಿ ಅಪೂರ್ವ ಶ್ರೀನಿವಾಸ್ ಈ ಚಿತ್ರದ ನಾಯಕಿ. ಅವರೊಂದಿಗೆ ಚಿತ್ರ ಪೋಷಕ ಪಾತ್ರಗಳಲ್ಲಿ ದೊಡ್ಡ ತಾರಾಗಣವೇ ಇದೆ. ಚಿತ್ರದ ಪೋಸ್ಟರ್ ಹಾಗೂ ಟ್ರೇಲರ್ನಲ್ಲಿ ಈಗಾಗಲೇ ರಿವೀಲ್ ಆಗಿರುವ ಹಾಗೆ ಇದೊಂದು ಐತಿಹಾಸಿಕ ಹಿನ್ನೆಲೆಯ ಚಿತ್ರ. ಭುವನ್ ಪೊನ್ನಣ್ಣ ಅವರದ್ದು ಮೂರು ಶೇಡ್ಗಳಿರುವ ಪಾತ್ರ. ಅವರ ಪಾತ್ರಕ್ಕೆ ಸಂಬಂಧಿಸಿದ್ದಂತೆ ಎರಡು ಲುಕ್ ರಿವೀಲ್ ಆಗಿವೆ. ಮತ್ತೊಂದು ಶೇಡ್ನ ಗೆಟಪ್ ಸದ್ಯಕ್ಕೆ ಸಸ್ಪೆನ್ಸ್.
ಬೆಳ್ಳಿತೆರೆಗೆ ಇದೇ ಮೊದಲು ಹೀರೋ ಆಗಿ ಎಂಟ್ರಿ ಆಗುತ್ತಿರುವ ಕಾರಣಕ್ಕೆ ಸಿನಿಮಾದ ಮೇಲೆ ಸಾಕಷ್ಟುನಿರೀಕ್ಷೆ ಹೊಂದಿದ್ದಾರೆ ಭುವನ್. ಹಾಗೆಯೇ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಿಗೂ ಅಷ್ಟೇ ಕಾಳಜಿ ವಹಿಸಿದ್ದಾರೆ. ಈ ನಡುವೆಯೇ ಚಿತ್ರದ ವಿತರಣೆ ಹಕ್ಕು ಪ್ರತಿಷ್ಟಿತ ಜಯಣ್ಣ ಕಂಬೈನ್ಸ್ ಪಾಲಾಗಿರುವುದು ಅವರಿಗೂ ಖುಷಿ ಕೊಟ್ಟಿದೆ.
ಜನವರಿ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದು, ಸೆನ್ಸಾರ್ ಒಂದೇ ಬಾಕಿಯಿದೆ. ಚಿತ್ರಕ್ಕೆ ಬೆಂಗಳೂರು, ಮೈಸೂರು, ಮಂಗಳೂರು, ರಾಜಸ್ಥಾನ ಸೇರಿ ವಿದೇಶದಲ್ಲೂ ಚಿತ್ರೀಕರಣ ನಡೆದಿದೆ. ಗಾಯಕ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಷ್ಟುದಿನ ಗಾಯಕರಾಗಿದ್ದವರೂ, ರಾಂಧವ ಮೂಲಕ ಅವರು ಕೂಡ ಸಂಗೀತ ನಿರ್ದೇಶಕರಾಗಿ ಪರಿಚಯವಾಗುತ್ತಿರುವುದು ವಿಶೇಷ.
ನನ್ನ ಮೊದಲ ಸಿನಿಮಾ ಪ್ರತಿಷ್ಟಿತ ಜಯಣ್ಣ ಕಂಬೈನ್ಸ್ ಮೂಲಕವೇ ರಾಜ್ಯಾದ್ಯಂತ ವಿತರಣೆ ಆಗಬೇಕೆಂದು ಕನಸು ಕಂಡಿದ್ದೆ. ಅದೀಗ ನನಸಾಗಿದೆ. ಯಾಕಂದ್ರೆ, ದರ್ಶನ್, ಯಶ್ ಅವರಂತಹ ಸಿನಿಮಾಗಳು ಅವರದ್ದೇ ಬ್ಯಾನರ್ನಲ್ಲಿ ವಿತರಣೆಯಾಗಿ, ಗೆದ್ದ ಇತಿಹಾಸವಿದೆ. ನನಗೂ ಅಂತಹದೊಂದು ಆಶೀರ್ವಾದ ಆ ಸಂಸ್ಥೆಯ ಮೂಲಕ ಬೇಕು ಎಂದುಕೊಂಡಿದ್ದೆ - ಭುವನ್ ಪೊನ್ನಣ್ಣ