ಬಜಾರ್ ಹುಡುಗಿಗೆ ಸಿಕ್ತು ‘ಬ್ರಹ್ಮಚಾರಿ’ಗಳಿಂದ ಸಾಥ್!
ನಟಿ ಅದಿತಿ ಪ್ರಭುದೇವ ಮತ್ತೊಂದು ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ನಂತರ ಅದಿತಿ ರಾವ್ ಸಾಕಷ್ಟುಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಚಿರಂಜೀವಿ ಸರ್ಜಾ ಜತೆ ‘ಸಿಂಗ’ ಚಿತ್ರವನ್ನು ಮುಗಿಸಿದ್ದಾರೆ. ಈ ಸಿನಿಮಾ ತೆರೆಗೆ ಬರುವ ಮುನ್ನವೇ ಮತ್ತೊಂದು ಚಿತ್ರಕ್ಕೆ ಬುಕ್ ಆಗಿದ್ದಾರೆ
ಚಂದ್ರಮೋಹನ್ ನಿರ್ದೇಶನದ, ಉದಯ್ ಕೆ ಮಹ್ತಾ ನಿರ್ಮಾಣದ ‘ಬ್ರಹ್ಮಚಾರಿ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ ಎಂಬುದು ಲೇಟೆಸ್ಟ್. ಹಾಗೆ ನೋಡಿದರೆ ‘ಸಿಂಗ’ ಇನ್ನೂ ತೆರೆಗೆ ಬಂದಿಲ್ಲ. ಈಗಷ್ಟೆಚಿತ್ರೀಕರಣ ಮುಗಿಸಿದೆ. ಈಗ ಸತೀಶ್ ನೀನಾಸಂ ಜತೆಗೆ ‘ಬ್ರಹ್ಮಚಾರಿ’ ಚಿತ್ರದಲ್ಲಿ ಹೆಜ್ಜೆ ಹಾಕುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.
ಈ ಹಿಂದೆ ‘ಬಾಂಬೆ ಮಿಠಾಯಿ’ ಹಾಗೂ ‘ಡಬಲ್ ಇಂಜನ್’ ಚಿತ್ರಗಳನ್ನು ನಿರ್ದೇಶಿಸಿದ ಚಂದ್ರಮೋಹನ್, ಈಗ ‘ಬ್ರಹ್ಮಚಾರಿ’ಗೆ ಕೈ ಹಾಕಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ. ಇಂಥ ಹಾಸ್ಯ ಪ್ರಧಾನ ಸಿನಿಮಾದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿರುವುದು ವಿಶೇಷ. ಶಿವತೇಜಸ್ ನಿರ್ದೇಶನದ ‘ಧೈರ್ಯ’ ಚಿತ್ರದ ಮೂಲಕ ಕನ್ನಡ ಬಂದ ನಟಿ ಅದಿತಿ. ಆ ನಂತರ ಬಜಾರ್, ತೋತಾಪುರಿ, ರಂಗನಾಯಕಿ, ಸಿಂಗ ಹಾಗೂ ದುನಿಯಾ ವಿಜಯ್ ಜತೆ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ ಮೂರು ಸಿನಿಮಾಗಳು ತೆರೆಗೆ ಬರಬೇಕಿದೆ. ಈಗ ಅವರ ನಟನೆಯ ನಾಲ್ಕನೇ ಚಿತ್ರವಾಗಿ ‘ಬ್ರಹ್ಮಚಾರಿ’ ಸೆಟ್ಟೇರುತ್ತಿದೆ. ಆ ಮೂಲಕ ಅದಿತಿ ಪ್ರಭುದೇವ ಬೇಡಿಕೆಯ ನಟಿಯರ ಸಾಲಿನಲ್ಲಿ ನಿಂತಿದ್ದಾರೆ.