ನಿಮ್ಮ 40 ಶಾಸಕರು ನಮ್ಮೊಂದಿಗಿದ್ದಾರೆ, ಸಿಎಂ ಆಗಿ ಮುಂದುವರಿಯಲಾರಿರಿ : ಮೋದಿ
ಲೋಕಸಭಾ ಚುನಾವಣೆ ಬೆನ್ನಲ್ಲೇ ದೇಶದ ರಾಜಕೀಯದಲ್ಲಿ ಹಲವು ಬೆಳವಣಿಗಗಳಾಗುತ್ತಿವೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸಿಎಂ ಓರ್ವರಿಗೆ ನೀವು ಮುಂದುವರಿಯಲಾರಿರಿ ಎನ್ನುವ ಎಚ್ಚರಿಕೆ ರವಾನಿಸಿದ್ದಾರೆ.
ಕೋಲ್ಕತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸಂಪುಟದ 40 ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಈ ಬಗ್ಗೆ ಸರ್ಕಾರಕ್ಕೆ ಸಮಸ್ಯೆ ಎದುರಾಗುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಕೋಲ್ಕತಾ ಸಮೀಪದ ಸೇರಂಪೋರೆಯಲ್ಲಿ ನಡೆದ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರಕ್ಕೆ ಕಂಟಕ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮೇ 23ಕ್ಕೆ ದೇಶದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶದ ದಿನ ಎಲ್ಲೆಡೆ ಕಮಲ ಅರಳಲಿದೆ. ನಿಮ್ಮ ಶಾಸಕರು ನಿಮ್ಮ ಪಕ್ಷ ತೊರೆದು ಓಡಲಿದ್ದಾರೆ. ನಿಮ್ಮ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.
ಜನರೊಂದಿಗೆ ನೀವು ಎಲ್ಲಿಯವರೆಗೆ ಯುದ್ಧ ಮುಂದುವರಿಸುವಿರೋ ಅಲ್ಲಿಯವರೆಗೆ ನೀವು ಮುಖ್ಯಮಂತ್ರಿಯಾಗಿ ಬೆರೆಯಲಾರಿರಿ ಎಂದು ನರೇಂದ್ರ ಮೋದಿ ದೀದಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳನ್ನು ಗೆದ್ದು ಅಧಿಕಾರ ಗದ್ದುಗೆಗೆ ಏರಿದ್ದ ಎನ್ ಡಿಎ ಇದೀಗ ಮೋದಿ ಅಲೆಯೊಂದಿಗೆ ಅಧಿಕಾರಕ್ಕೆ ಏರುವ ಭರವಸೆ ಹೊಂದಿದೆ. ಇತ್ತ ವಿಪಕ್ಷಗಳೂ ಕೂಡ ಬಿಜೆಪಿ ಮಣಿಸುವ ಯತ್ನದಲ್ಲಿವೆ.