ಮಧು ಬಂಗಾರಪ್ಪ ನಾಮಪತ್ರದಲ್ಲಿ ಯಡವಟ್ಟು : ಚುನಾವಣಾಧಿಕಾರಿಗೆ ದೂರು
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, 2ನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿ ಪರಿಶೀಲನೆ ನಡೆದಿದೆ. ಇನ್ನು ಇದೇ ವೇಳೆ ಮಧು ಬಂಗಾರಪ್ಪ ನಾಮಪತ್ರದಲ್ಲಿ ತಪ್ಪುಗಳಿರುವುದಾಗಿ ಬಿಜೆಪಿ ದೂರಿದೆ.
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ತಿರಸ್ಕರಿಸುವಂತೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ದಯಾನಂದಗೆ ದೂರು ನೀಡಿದ್ದಾರೆ.
ಮಧು ಬಂಗಾರಪ್ಪ ನಾಮಪತ್ರದಲ್ಲಿ ಹಲವು ತಪ್ಪುಗಳಿದೆ. 10ಕ್ಕೂ ಹೆಚ್ಚು ಕಲಂಗಳಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚುನಾವಣಾಧಿಕಾರಿಗೆ ಈ ಬಗ್ಗೆ ಬಿಜೆಪಿ ಲೀಗಲ್ ಅಡ್ವೈಸರ್ ಅನಂತ ಶಾಸ್ತ್ರೀ ದೂರು ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ವೇಳೆ ಬಿಜೆಪಿಯಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ.
ಚೆಕ್ ಬೋನ್ಸ್ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಮರೆ ಮಾಚಿದ ಅರೋಪವನ್ನೂ ಮಾಡಿದ್ದು, ಯಾವ ಕಂಪೆನಿಯ ಚೆಕ್ , ಮೊತ್ತ ಎಷ್ಟು , ನ್ಯಾಯಾಲಯದ ಸಿಸಿ ಸಂಖ್ಯೆ ದಾಖಲಿಸದೇ ಮಾಹಿತಿ ಮರೆ ಮಾಚಿದ್ದಾರೆಂದು ಅಕ್ಷೇಪಣೆಯಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ ಮಧು ಬಂಗಾರಪ್ಪ ಹೊಂದಿರುವ 277.50 ಗ್ರಾಂ ಚಿನ್ನ ಎಂದು ನಮೂದಿಸಿ ಅದರ ಮೌಲ್ಯ 1.25 ಕೋಟಿ ರೂ ಎಂದು ತಪ್ಪಾಗಿ ನಮೂದಿಸಿದ್ದಾರೆಂದು ಅಕ್ಷೇಪಣೆ ಸಲ್ಲಿಸಲಾಗಿದೆ. ಇನ್ನು ಸೊರಬ ತಾಲೂಕಿನ ಕೋಡಿಕೊಪ್ಪ ಗ್ರಾಮದ ಸರ್ವೆ ನಂ 12, 13, 14, 15 ಮತ್ತು 16 ರಲ್ಲಿ ಜಮೀನಿದೆ ಎಂದು ನಮೂದಿಸಿ ಒಟ್ಟು ಎಷ್ಟು ಎಕರೆ ಎಂದು ನಮೂದಿಸದೇ ಇರುವುದು ಹೀಗೆ 10 ಕ್ಕೂ ಹೆಚ್ಚು ತಪ್ಪು ಮಾಹಿತಿ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ನೀಡಿದ್ದಾರೆಂದು ಆಕ್ಷೇಪಣೆ ಸಲ್ಲಿಸಲಾಗಿದೆ.
ನಾಮಪತ್ರ ತಿರಸ್ಕರಿಸಿ ಇಲ್ಲವೇ ತಪ್ಪು ಮಾಹಿತಿ ನೀಡಿದ್ದರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಗಿದೆ.