ಎಲ್ಲರನ್ನು ಕಾಲೆಳೆಯುತ್ತೆ ಕಾಲ: ಬಳ್ಳಾರಿಯಲ್ಲಿ ಹಿಂದೆ ಕಾಂಗ್ರೆಸ್ಗೆ ಇದ್ದ ಸ್ಥಿತಿ ಈಗ ಬಿಜೆಪಿಗೆ..!
ಬಳ್ಳಾರಿ ಲೋಕಸಭೆ ಅಭ್ಯರ್ಥಿಗಾಗಿ ಬಿಜೆಪಿಯಿಂದ ತಲಾಶ್..! ಬಳ್ಳಾರಿ ಲೋಕಸಭೆಗೆ ಫೈನಲ್ ಆಗಿಲ್ಲ ಬಿಜೆಪಿ ಕ್ಯಾಂಡಿಡೇಟ್..! ಈ ಹಿಂದೆ ಮೊದಲೇ ಅಭ್ಯರ್ಥಿ ಘೋಷಿಸುತ್ತಿದ್ದ BJP ಪಾಳಯ! ಈ ಹಿಂದೆ ಕಾಂಗ್ರೆಸ್ ಗೆ ಇದ್ದ ಪರಿಸ್ಥಿತಿ ಈಗ ಬಿಜೆಪಿಗೆ..! ಇದೆಂಥಾ ಕಾಲವಯ್ಯಾ...!
ಬಳ್ಳಾರಿ, [ಮಾ.12]: ಬಳ್ಳಾರಿಯಲ್ಲಿ ಬಿಜೆಪಿಗಿರುವ ಈಗಿನ ಸ್ಥಿತಿ ನೋಡಿದ್ರೆ ಉಪೇಂದ್ರ ಅಭಿನಯಿಸಿದ ಉಪ್ಪಿ-2 ಚಿತ್ರದ 'ಎಲ್ಲರ ಕಾಲೆಳೆಯುತ್ತೆ ಕಾಲ' ಎನ್ನುವ ಹಾಡು ನೆನಪಾಗುತ್ತದೆ.
ಹೌದು...ರಾಜ್ಯ ರಾಜಕಾರಣದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಸದ್ದು ಮಾಡುವ ‘ಗಣಿನಾಡು’ ಖ್ಯಾತಿಯ ಬಳ್ಳಾರಿ ಜಿಲ್ಲೆ ಈ ಹಿಂದೆ ಕಾಂಗ್ರೆಸ್ನ ಭದ್ರಕೋಟೆ ಎಂದೇ ಖ್ಯಾತಿ. ಕಳೆದ ಒಂದೂವರೆ ದಶಕದಿಂದ ಪರಿಸ್ಥಿತಿ ಬದಲಾಗಿದ್ದು, ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿತ್ತು.
ಆದ್ರೆ, ಜಿಲ್ಲೆಯಲ್ಲಿ ಪ್ರಸ್ತುತ ಬಿಜೆಪಿ ಸ್ಥಿತಿ ಯಾವ ಮಟ್ಟಕ್ಕೆ ಬಂದುನಿಂತಿದೆ ಅಂದ್ರೆ ಲೋಕಸಭಾ ಚುನಾವಣೆಗೆ ಸ್ಥಳೀಯವಾಗಿ ಸೂಕ್ತ ಕ್ಯಾಂಡಿಡೇಟ್ ಕೊರತೆ ಅನುಭವಿಸುತ್ತಿದೆ.
ಅಂದು ಬಳ್ಳಾರಿ ಬಿಜೆಪಿಯ ಭದ್ರಕೋಟೆ, ಈಗ ಬಳ್ಳಾರಿಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಬರ
ಈ ಹಿಂದೆ ಕಾಂಗ್ರೆಸ್ ನಲ್ಲಿ ನಾಮಪತ್ರ ಸಲ್ಲಿಕೆ ಕೊನೆ ಕ್ಷಣದವರೆಗೂ ಅಭ್ಯರ್ಥಿ ಹೆಸರು ಘೋಷಣೆಯಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಬಳ್ಳಾರಿಯಲ್ಲಿ ಬಿಜೆಪಿ ಬಲಿಷ್ಠವಾಗಿತ್ತು. ಇದೀಗ ಅಂದಿನ ಕಾಂಗ್ರೆಸ್ ಪರಿಸ್ಥಿತಿ ಬಿಜೆಪಿಗೆ ಬಂದಿದೆ.
17ನೇ ಲೋಕಸಭಾ ಚುನಾವಣೆಗೆ ಈಗಾಗಲೇ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೆಸರು ಫೈನಲ್ ಆಗಿದೆ. ಆದ್ರೆ ಈವರೆಗೂ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಸುಳಿವು ಸಹ ಇಲ್ಲ. ಹೀಗಾಗಿ ಬಿಜೆಪಿಯಿಂದ ಕಾಂಗ್ರೆಸ್ ಎದುರಾಳಿ ಯಾರು ಎನ್ನುವುದೇ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!
1999 ಚುನಾವಣೆಯಲ್ಲಿ ಸೋನಿಯಾ ಗಾಂಧಿ ಹೆಸರು ಕೊನೆಯ ಕ್ಷಣದಲ್ಲಿ ಘೋಷಣೆಯಾಗಿತ್ತು. ಆದಾದ ಬಳಿಕ ನಡೆದ ಎಲ್ಲಾ ಚುನಾವಣೆಯಲ್ಲಿ ಅಭ್ಯರ್ಥಿ ಹೆಸರು ಕೊನೆಯ ಕ್ಷಣದಲ್ಲಿ ಘೋಷಣೆಯಾಗ್ತಿತ್ತು.
ಆದ್ರೇ ಈ ಬಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮೊದಲೇ ಘೋಷಣೆಯಾಗಿದೆ. ಬಿಜೆಪಿಯಲ್ಲಿ ಇನ್ನೂ ಗೊಂದಲದ ಗೂಡಾಗಿದ್ದು, ಉಗ್ರಪ್ಪ ಎದುರಾಳಿ ಕ್ಯಾಂಡಿಡೇಟ್ ಯಾರು ಎನ್ನುವುದು ಮಾತ್ರ ನಿಗೂಢವಾಗಿ ಉಳಿದಿದೆ.
ಒಂದು ಕಾಲದಲ್ಲಿ ಬಳ್ಳಾರಿಯಲ್ಲಿ ನಾಯಿ ನಿಂತರೂ ಗೆಲ್ಲುತ್ತದೆ ಎನ್ನುವ ಮಾತುಗಳಿದ್ದವು. ಆದ್ರೆ, ಕಳೆದ ಉಪಚುನಾವಣೆಯಲ್ಲಿ ಸ್ವತಃ ಶ್ರೀರಾಮುಲು ಸಹೊದರಿ ಜೆ.ಶಾಂತ ಉಗ್ರಪ್ಪ ವಿರುದ್ಧ ಸೋಲುಕಂಡಿದ್ದರು.
ಡಿಕೆಶಿಗೆ ಸೆಡ್ಡುಹೊಡೆಯಲು ಬಳ್ಳಾರಿಯಲ್ಲಿ ಅಚ್ಚರಿಯ ಅಭ್ಯರ್ಥಿ?
ಅಷ್ಟೇ ಅಲ್ಲದೇ ಈ ಹಿಂದೆ ರಾಮುಲು ತಮ್ಮ ಮಾವ ಸಣ್ಣ ಪಕೀರಪ್ಪ ಅವರನ್ನು ಪಕ್ಕದ ರಾಯಚೂರು ಜಿಲ್ಲೆಗೆ ನಿಲ್ಲಿಸಿ ಸಂಸದನಾಗಿ ಮಾಡಿದ್ದರು. ಈ ಚುನಾವಣೆಗೆ ರಾಮುಲು ಪಾಳಯದಲ್ಲಿ ಯಾರು ಸ್ಪರ್ಧಿಸಲು ಮುಂದೆ ಬರುತ್ತಿಲ್ಲ.
ಹೀಗಾಗಿ ಬಿಜೆಪಿ ದೂರದ ಜಿಲ್ಲೆಯ ಅಭ್ಯರ್ಥಿಯ ಹುಡುಕಾಟ ನಡೆಸಿದೆ. ಇದರ ಅರ್ಥ ಬಳ್ಳಾರಿಯಲ್ಲಿ ಬಿಜೆಪಿಗೆ ಯಾವ ಸ್ಥಿತಿ ಬಂದೊದಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಸದ್ಯಕ್ಕೆ ಲಖನ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್ ಹೆಸರುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಅಭ್ಯರ್ಥಿ ವಿಷಯದಲ್ಲಿ ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ.