ಪಾಕ್ಗೆ ಪಾಠ ಕಲಿಸಲು ಮೋದಿ ಗೆಲ್ಲಿಸಿ: ಅಮಿತ್ ಶಾ
ಪಾಕ್ಗೆ ಪಾಠ ಕಲಿಸಲು ಮೋದಿ ಗೆಲ್ಲಿಸಿ: ಶಾ| ಭಾರಿ ಮತಗಳೊಂದಿಗೆ ರಾಘವೇಂದ್ರ ಗೆಲ್ಲಿಸಿ| ಭದ್ರಾವತಿಯಲ್ಲಿ ಬಿಎಸ್ವೈ ಪುತ್ರನ ಪರ ಬಿಜೆಪಿ ಅಧ್ಯಕ್ಷ ರೋಡ್ ಶೋ
ಭದ್ರಾವತಿ[ಏ.21]: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಭದ್ರಾವತಿ ಪಟ್ಟಣದಲ್ಲಿ ಶನಿವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು, ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಬೇಕಾಗಿದೆ. ಅದಕ್ಕಾಗಿ ಬಿ.ವೈ.ರಾಘವೇಂದ್ರ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಾಗಿದೆ. ಈ ಚುನಾವಣೆ ಕೇವಲ ರಾಘವೇಂದ್ರ ಅವರ ಆಯ್ಕೆಗೆ ಸೀಮಿತವಾಗಿಲ್ಲ. ದೇಶದ ಪ್ರತಿಯೊಬ್ಬರ ರಕ್ಷಣೆ, ಭದ್ರತೆಗಾಗಿ ನರೇಂದ್ರ ಮೋದಿಯವರು ಪುನಃ ಪ್ರಧಾನಿಯಾಗಬೇಕಿರುವ ಹಿನ್ನೆಲೆಯಲ್ಲಿ ಅವರ ಕೈ ಬಲಪಡಿಸಲು ರಾಘವೇಂದ್ರ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮತ್ತಿತರರು ಇದ್ದರು. ರೋಡ್ ಶೋ ವೇಳೆ ಅಮಿತ್ ಶಾ ಅವರು ಕನ್ನಡಮಾತೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಇನ್ನಿತರ ಕಲಾತಂಡಗಳು ಮೆರಗು ನೀಡಿದವು. ರೋಡ್ ಶೋನಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಕಾಣಿಸಿಕೊಂಡದ್ದು ವಿಶೇಷವಾಗಿತ್ತು.
ಶುಕ್ರವಾರ ರಾತ್ರಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದ ಅಮಿತ್ ಶಾ ಅವರು, ಶನಿವಾರ ಬೆಳಗ್ಗೆ ಭದ್ರಾವತಿಗೆ ತೆರಳುವ ಮುನ್ನ ತಮ್ಮನ್ನು ಭೇಟಿಯಾದ ಪಕ್ಷದ ಮುಖಂಡರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರ ಜೊತೆ ಮಾತುಕತೆ ನಡೆಸಿದರು.