ಬಿಎಸ್ ವೈ ಹುದ್ದೆಗೆ ಅವರ ಮಕ್ಕಳು ವಾರಸುದಾರರಲ್ಲ : ಬಿಜೆಪಿ ಲೀಡರ್ ಸಿಟಿ ರವಿ
ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿಯೇ ಸಿಟಿ ರವಿ ಬಿಜೆಪಿ ರಾಜಕೀಯದ ಬಗ್ಗೆ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
ದಾವಣಗೆರೆ : ಅನ್ಯಪಕ್ಷಗಳಲ್ಲಿರುವಂತೆ ಬಿಜೆಪಿಯ ಉನ್ನತ ಸ್ಥಾನಗಳಲ್ಲಿ ವಂಶಾಡಳಿತವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಾರಸುದಾರಿಕೆ ನೇರವಾಗಿ ಅವರ ಮಕ್ಕಳಿಗೆ ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವಿದ್ದು, ಕುಟುಂಬದ ಆಸ್ತಿಯಂತೆ ಅಧಿಕಾರ ಹಸ್ತಾಂತರವಾಗುವುದಿಲ್ಲ ಎಂದರು. ಶಾಸಕ, ಸಂಸದರಾಗುವುದು ಬೇರೆ. ಆದರೆ ಅನ್ಯ ಪಕ್ಷಗಳಲ್ಲಿರುವಂತೆ ನಮ್ಮಲ್ಲಿ ಉನ್ನತ ಸ್ಥಾನಗಳಲ್ಲಿ ವಂಶಾಡಳಿತವಿಲ್ಲ ಎಂದು ತಿಳಿಸಿದರು.
ಮೋದಿ ಬಳಿಕ ಯಾರು ಗೊತ್ತಿಲ್ಲ: ಕಾಂಗ್ರೆಸ್ ಪಕ್ಷದಲ್ಲಿ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಇದೀಗ ಪ್ರಿಯಾಂಕ ಗಾಂಧಿ ಹೀಗೆ ಗಾಂಧಿ ಕುಟುಂಬದ ಸರಣಿಯೇ ಇದೆ. ಆದರೆ, ಬಿಜೆಪಿಯಲ್ಲಿ ಅಂತಹ ಕುಟುಂಬ ಸರಣಿ ಇಲ್ಲ. ನರೇಂದ್ರ ಮೋದಿ ನಂತರ ಯಾರು ಅಂತಲೂ ಗೊತ್ತಿಲ್ಲ. ಬಿಜೆಪಿಯಲ್ಲಿ ಜನರ ಮಧ್ಯದಿಂದ ಬಂದವರೇ ನಾಯಕರು ಎಂದರು.
ಜೆಡಿಎಸ್ ಅತಿಯಾಸೆ ಗತಿಕೇಡು: ಜೆಡಿಎಸ್ ಪಕ್ಷದ್ದು ಕುಟುಂಬ ಆಡಳಿತ ವಿಸ್ತರಿಸುವ ದುರಾಸೆಯ ಪರಮಾವಧಿಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಅತಿಯಾಸೆ ಗಡಿಗೇಡು ಎಂಬ ಸ್ಥಿತಿಯನ್ನು ಜೆಡಿಎಸ್ಗೆ ತಂದು ಕೊಡಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭವಿಷ್ಯ ನುಡಿದರು. ಕುಟುಂಬ ಆಡಳಿತ ವಿಸ್ತರಿಸಬೇಕೆಂಬ ಜೆಡಿಎಸ್ ವರಿಷ್ಠರ ದುರಾಸೆಯು ಅದೇ ಪಕ್ಷದ ಕಾರ್ಯಕರ್ತರ ಅಸಹನೆಗೆ ಕಾರಣವಾಗಿದ್ದು ಜೆಡಿಎಸ್ ಸೋಲಿಗೆ ಕಾರಣವಾಗಲಿದೆ ಎಂದರು.