ಏಕದೇವೋಪಾಸನೆ ಮಾಡೋರು ವಂದೇ ಮಾತರಂ ಹೇಳಲ್ಲ: ಆರ್ಜೆಡಿ ನಾಯಕ!
ಮುಸ್ಲಿಮರು ವಂದೇ ಮಾತರಂ ಗೀತೆ ಹಾಡುವಂತಿಲ್ಲ ಎಂದ ಆರ್ ಜೆಡಿ ನಾಯಕ’| ದರ್ಬಂಗಾ ಲೋಕಸಭಾ ಕ್ಷೇತ್ರದ ಆರ್ ಜೆಡಿ ಅಭ್ಯರ್ಥಿ ಅಬ್ದುಲ್ ಬಾರಿ ಸಿದ್ದಿಕಿ| ‘ಏಕದೇವೋಪಾಸನೆ ಮಾಡುವವರು ವಂದೇ ಮಾತರಂ ಗೀತೆ ಹಾಡಬಾರದು’| ಮುಸ್ಲಿಮರು ‘ಭಾರತ್ ಮಾತಾ ಕೀ’ ಜೈ ಹೇಳಬಹುದು ಎಂದ ಸಿದ್ದಿಕಿ| ಗೋಡ್ಸೆಯನ್ನು ಬಹಿರಂಗವಾಗಿ ಟೀಕಿಸುವಂತೆ ಮೋದಿಗೆ ಸವಾಲು|
ಪಾಟ್ನಾ(ಏ.23): ಏಕದೇವೋಪಾಸನೆ ಮಾಡುವ ಮುಸ್ಲಿಮರು ವಂದೇ ಮಾತರಂ ಗೀತೆಯನ್ನು ಹಾಡುವಂತಿಲ್ಲ ಎಂದು ದರ್ಬಂಗಾ ಲೋಕಸಭಾ ಕ್ಷೇತ್ರದ ಆರ್ ಜೆಡಿ ಅಭ್ಯರ್ಥಿ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ.
ಮುಸ್ಲಿಮರು ಅಲ್ಲಾನನ್ನು ಹೊರತುಪಡಿಸಿ ಯಾವುದೇ ದೇವರನ್ನು ನಂಬುವುದಿಲ್ಲ. ವಂದೇ ಮಾತರಂ ಗೀತೆಯಲ್ಲಿ ಭೂಮಿಯನ್ನು ತಾಯಿಗೆ ಹೋಲಿಸಿರುವುದರಿಂದ ಮತ್ತು ವಿವಿಧ ದೇವರ ಉಲ್ಲೇಖ ಇರುವುದರಿಂದ ಮುಸ್ಲಿಮರು ವಂದೇ ಮಾತರಂ ಹಾಡಬಾರದು ಎಂದು ಸಿದ್ದಿಕಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆದರೆ ಮುಸ್ಲಿಮರು ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಲು ಅಡ್ಡಿ ಇಲ್ಲ ಎಂದಿರುವ ಸಿದ್ದಿಕಿ, ವಂದೇ ಮಾತರಂ ಗೀತೆಯನ್ನು ಹಾಡುವಂತೆ ಮುಸ್ಲಿಮರನ್ನು ಯಾರೂ ಒತ್ತಾಯಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಬಹಿರಂಗವಾಗಿ ಟೀಕಿಸುವಂತೆ ಪ್ರಧಾಣಿ ನರೇಂದ್ರ ಮೋದಿ ಅವರಿಗೆ ಸಿದ್ದಿಕಿ ಸವಾಲು ಹಾಕಿದ್ದಾರೆ.