ಮಂಡ್ಯಕ್ಕೆ ರಾಹುಲ್ ಗಾಂಧಿ: ಚಲುವರಾಯ ಸ್ವಾಮಿಗೆ ಸಿದ್ದು ಖಡಕ್ ಸೂಚನೆ!
ಮೈತ್ರಿ ಅಭ್ಯರ್ಥಿಯ ಪರ ಮಂಡ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರ| ಕಾಂಗ್ರೆಸ್ ಅಧ್ಯಕ್ಷ ಆಗಮಿಸುತ್ತಿರುವ ಹಿನ್ನೆಲೆ ಚಲುವರಾಯ ಸ್ವಾಮಿಗೆ ಸಿದ್ದು ಖಡಕ್ ಸೂಚನೆ!
ಮಂಡ್ಯ[ಏ.12]: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗ ರಾಷ್ಟ್ರೀಯ ನಾಯಕರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಸದ್ಯ ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಎಲ್ಲರ ಗಮನ ಸೆಳೆಯುತ್ತಿದ್ದು, ನಿಖಿಲ್ ಹಾಗೂ ಸುಮಲತಾ ನಡುವಿನ ಸಮರ ತಾರಕಕ್ಕೇರಿದೆ. ಪ್ರಚಾರದ ಅಬ್ಬರ ನಡುವೆಯೇ ನಾಳೆ ಶನಿವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೈತ್ರಿ ಅಭ್ಯರ್ಥಿ, ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಲು ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಚಲುವರಾಯ ಸ್ವಾಮಿಗೆ ಖಡಕ್ ಸೂಚನೆರಯನ್ನು ನೀಡಿದ್ದಾರೆ.
"
ಹೌದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಂಡ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಚಲುವರಾಯ ಸ್ವಾಮಿಗೆ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿಯಾಗಲು ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯರ ಈ ಸೂಚನೆಗೆ ಸೈ ಎಂದಿರುವ ಚಲುವರಾಯ ಸ್ವಾಮಿ ರಾಹುಲ್ ಗಾಂಧಿಗೆ ಮುಜುಗರ ಆಗದಂತೆ ನಡೆದುಕೊಳ್ಳುವುದಾಗಿ ಮಾತು ನೀಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಿಖಿಲ್ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಚಲುವರಾಯ ಸ್ವಾಮಿ ರಾಹುಲ್ ನಮ್ಮ ನಾಯಕರು, ಆ ಕಾರಣಕ್ಕೆ ಮಂಡ್ಯದಲ್ಲಿ ಶನಿವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.