ಚುನಾವಣಾ ತಂತ್ರಗಾರ, ಅತ್ಯಾಪ್ತನ ವಿರುದ್ಧವೇ ಹರಿಹಾಯ್ದ ನಿತೀಶ್!
ನಂ.2 ಸ್ಥಾನದ ನಂಬಿಕೆ ಇದ್ದರೆ ಅದು ಪ್ರಶಾಂತ್ ಭ್ರಮೆ: ನಿತೀಶ್ ವ್ಯಂಗ್ಯ
ಪಟನಾ[ಏ.02]: ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇದೀಗ ತಮ್ಮ ಅತ್ಯಾಪ್ತ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ವಿರುದ್ಧವೇ ಹರಿಹಾಯ್ದಿದ್ದಾರೆ. ಪಕ್ಷದಲ್ಲಿ ನಾನು ನಂ.2 ಹುದ್ದೆಯಲ್ಲಿದ್ದೇನೆ ಎಂಬ ಭ್ರಮೆಯಲ್ಲಿದ್ದರೆ ಅದು ಅವರಿಗೆ ಬಿಟ್ಟವಿಷಯ ಎಂದು ನಿತೀಶ್ ಹೇಳಿದ್ದಾರೆ. ಇದು ಇಬ್ಬರ ನಡುವೆ ಎಲ್ಲವೂ ಸರಿ ಎಲ್ಲ ಎಂಬುದನ್ನ ಬಹಿರಂಗಪಡಿಸಿದೆ.
ಜೆಡಿಯುನಲ್ಲಿ ನಂ.2 ಎಂದೇ ಬಿಂಬಿಸಿಕೊಂಡಿರುವ ಪ್ರಶಾಂತ್ ಕಿಶೋರ್ ತಾವು ಇನ್ನು ಮುಂದೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಈ ಕುರಿತಂತೆ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಿತೀಶ್ ಕುಮಾರ್, ‘ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ವ್ಯವಹಾರಗಳಿಂದ ಬದಿಗೆ ತಳ್ಳಲಾಗಿಲ್ಲ. ಅವರು ಇನ್ನೂ ಪಕ್ಷದಲ್ಲಿದ್ದಾರೆ ಮತ್ತು ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ನನ್ನ ಮತ್ತು ಪ್ರಶಾಂತ್ ಮಧ್ಯೆ ಉತ್ತಮ ಸಂಬಂಧವಿದೆ. ಒಂದು ವೇಳೆ ಪಕ್ಷದ ನಂ.2 ಹುದ್ದೆಯ ಬಗ್ಗೆ ಪ್ರಶಾಂತ್ ಕಿಶೋರ್ ಭ್ರಮೆಯಲ್ಲಿದ್ದರೆ, ಅದು ಅವರಿಗೆ ಬಿಟ್ಟವಿಚಾರ’ ಎಂದು ಹೇಳಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...