ಸಚಿವ ಸಾ.ರಾ. ಮಹೇಶ್ ಕಾರು ತಡೆದ ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್
ಸಚಿವ ಸಾ ರಾ ಮಹೇಶ್ ಅವರ ಕಾರನ್ನು ತಡೆದ ಹೆಡ್ ಕಾನ್ಸ್ ಸ್ಟೇಬಲ್ ಅವರನ್ನು ಅಮಾತು ಮಾಡಲಾಗಿದೆ. ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದ ವೇಳೆ ಕಾರು ತಡೆಯಲಾಗಿತ್ತು.
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರ ಕಾರು ತಡೆದ ಹೆಡ್ ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ.
ಕುವೆಂಪುನಗರ ಠಾಣೆಯ ವೆಂಕಟೇಶ್ ಅಮಾನತುಗೊಂಡವರು. ನಾಮಪತ್ರ ಸಲ್ಲಿಸುವ ವೇಳೆ ಜೆಎಲ್ಬಿ ಜಂಕ್ಷನ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಹೋಗಲು ಬಂದ ಸಚಿವ ಸಾ.ರಾ.ಮಹೇಶ್ ಅವರ ಕಾರನ್ನು ಹೆಡ್ಕಾನ್ಸ್ಟೇಬಲ್ ವೆಂಕಟೇಶ್ ತಡೆದು ಇಲ್ಲಿ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರವನ್ನು ಸಚಿವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ ಎಂ.ಮುತ್ತುರಾಜ್, ಇಲ್ಲಿ ಸಂಸದರು, ಶಾಸಕರ ಕಡೆಯ 3 ವಾಹನ ಮತ್ತು ಮಾಧ್ಯಮದವರ ವಾಹನಗಳನ್ನು ಬಿಡಲು ಅವಕಾಶವಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೂಚನೆ ಸಹ ನೀಡಲಾಗಿತ್ತು. ಆದರೂ ಈ ರೀತಿಯ ವರ್ತನೆ ತೋರಿದ್ದಕ್ಕಾಗಿ ಹೆಡ್ ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಡಿಸಿಪಿ ಎಂ. ಮುತ್ತುರಾಜು ತಿಳಿಸಿದ್ದಾರೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...