'ಕಾಂಗ್ರೆಸ್ ಗೆಲುವಿಗಾಗಿ RSS ನೆರವು ಪಡೆಯುತ್ತಿದೆ'
ಗೆಲುವಿಗಾಗಿ ಕಾಂಗ್ರೆಸ್ ಆರ್ಎಸ್ಎಸ್ ನೆರವು ಪಡೆಯುತ್ತಿದೆ ಎನ್ನುವ ಸ್ಫೋಟಕ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಈ ಹೇಳಿಕೆ ನೀಡಿದ್ದು ಯಾರು? ಇಲ್ಲಿದೆ ವಿವರ
ಬೆಲ್ಡಂಗಾ/ಭಾಗ್ವಾಂಗೋಲಾ[ಏ.16]: ಒಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಇತ್ತ ಚುನಾವಣೆ ಗೆಲುವಿಗಾಗಿ ಕಾಂಗ್ರೆಸ್ ಆರ್ಎಸ್ಎಸ್ ಸಹಾಯ ಪಡೆಯುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಅಲ್ಲದೆ, ಕಾಂಗ್ರೆಸ್, ಬಿಜೆಪಿ ಮತ್ತು ಎಡಪಂಥೀಯ ಪಕ್ಷಗಳ ಕೂಟವನ್ನು ಸೋಲಿಸುವಂತೆ ಮಮತಾ ಅವರು ಮತದಾರರಲ್ಲಿ ಕೋರಿದ್ದಾರೆ. ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ನಡೆದ ಟಿಎಂಸಿ ರಾರಯಲಿಯಲ್ಲಿ ಮಾತನಾಡಿದ ಅವರು, ‘ನನ್ನನ್ನು ಕೆಣಕಲು ಯಾರಾದರೂ ಮುಂದಾದರೆ, ಕಾಂಗ್ರೆಸ್ ಮುಖವಾಡವನ್ನು ಬಯಲು ಮಾಡುತ್ತೇನೆ,’ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅವರು 2018ರಲ್ಲಿ ಆರ್ಎಸ್ಎಸ್ ಕೋರಿಕೆ ಮೇರೆಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆರ್ಎಸ್ಎಸ್ ಕೇಂದ್ರ ಕಚೇರಿ ನಾಗ್ಪುರಕ್ಕೆ ಭೇಟಿ ನೀಡಿದ ಘಟನೆ ಹಾಗೂ ಅವರ ಪುತ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಮುಖರ್ಜಿ ಪರವಾಗಿ ಆರ್ಎಸ್ಎಸ್ ರಾರಯಲಿ ನಡೆಸುತ್ತಿದೆ ಎಂಬ ವಿಚಾರಗಳನ್ನು ಮಮತಾ ಉದಾಹರಿಸಿದರು.