‘ಮೈ ಭೀ ಚೌಕೀದಾರ್’ ಅಭಿಯಾನದಿಂದ ಭಾರೀ ಅನುಕೂಲ: ಬಿಜೆಪಿ ನಿರೀಕ್ಷೆ
ಅಂದು ಚಾಯ್ವಾಲಾ, ಇಂದು ಚೌಕೀದಾರ | ‘ಮೈ ಭೀ ಚೌಕೀದಾರ್’ ಅಭಿಯಾನದಿಂದ ಬಿಜೆಪಿಗೆ ಭಾರೀ ಅನುಕೂಲ: ಬಿಜೆಪಿ ನಿರೀಕ್ಷೆ | ‘ಚೌಕೀದಾರ್ ಚೋರ್ ಹೈ’ ಎಂಬ ಕಾಂಗ್ರೆಸ್ ಟೀಕೆಗೆ ಜನಾಕ್ರೋಶವಿತ್ತು: ಸಮೀಕ್ಷೆ | ಇದೇ ಸಮೀಕ್ಷೆ ಆಧರಿಸಿ ಚೌಕೀದಾರ್ ಆಂದೋಲನ ಶುರು ಮಾಡಿದ ಬಿಜೆಪಿ
ನವದೆಹಲಿ (ಮಾ. 19): ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ‘ಮೈ ಭೀ ಚೌಕೀದಾರ್’ ಅಭಿಯಾನವು 2014ರಲ್ಲಿ ಅವರು ನಡೆಸಿದ ‘ಚಾಯ್ವಾಲಾ’ ಅಭಿಯಾನದಷ್ಟೇ ಪರಿಣಾಮಕಾರಿಯಾಗಿ ಬಿಜೆಪಿಗೆ ಮತಗಳಿಸಿಕೊಡಲು ನೆರವಾಗಬಹುದು ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮಲ್ಟಿ ಸ್ಟಾರ್ ಸಿನಿಮಾ ಆಗಿರುವ ಮಂಡ್ಯ ಲೋಕಸಭಾ ಕ್ಷೇತ್ರ!
‘ಚೌಕೀದಾರ್ ಚೋರ್ ಹೈ’ (ಕಾವಲುಗಾರನೇ ಕಳ್ಳ) ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯ ವಿರುದ್ಧ ಆಂದೋಲನ ರಫೇಲ್ ಯುದ್ಧವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಆರಂಭಿಸಿದ ನಂತರ ಈ ಬಗ್ಗೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಪ್ರಧಾನಿಯನ್ನು ಕಳ್ಳ ಎಂದು ಕರೆಯುವುದರ ಬಗ್ಗೆ ಜನಾಭಿಪ್ರಾಯ ಹೇಗಿದೆ ಎಂದು ಬಿಜೆಪಿ ಎರಡು ಸಮೀಕ್ಷೆಗಳನ್ನೂ ನಡೆಸಿತ್ತು ಎಂದು ಮೂಲಗಳು ಹೇಳಿವೆ.
ಈ ಸಮೀಕ್ಷೆಗಳಲ್ಲಿ ಪ್ರಧಾನಿಯನ್ನು ಕಳ್ಳ ಎಂದು ಕರೆಯುವ ರಾಹುಲ್ ಗಾಂಧಿ ಬಗ್ಗೆ ಹೆಚ್ಚಿನ ಜನರು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಹೀಗಾಗಿ ‘ಚೌಕೀದಾರ್ ಚೋರ್ ಹೈ’ಗೆ ಪ್ರತಿಯಾಗಿ, ‘ಮೈ ಭೀ ಚೌಕೀದಾರ್’ (ನಾನೂ ಕಾವಲುಗಾರ) ಎಂಬ ಹ್ಯಾಷ್ಟ್ಯಾಗ್ನಲ್ಲಿ ಟ್ವೀಟರ್ನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿ-ಆಂದೋಲನ ಆರಂಭಿಸಲು ಬಿಜೆಪಿ ನಿರ್ಧರಿಸಿತು.
ಮೊದಲ ಹಂತದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ
ಬಿಜೆಪಿಯ ಟ್ವೀಟ್ಗಳಲ್ಲಿ ‘ಮೈ ಭೀ ಚೌಕೀದಾರ್’ ಎಂಬ ಹ್ಯಾಷ್ಟ್ಯಾಗ್ ಜತೆಗೆ ಟ್ವೀಟರ್/ಫೇಸ್ಬುಕ್ ಪ್ರೊಫೈಲ್ನ ಹೆಸರುಗಳನನ್ನೇ ‘ಚೌಕೀದಾರ್ ನರೇಂದ್ರ ಮೋದಿ’, ‘ಚೌಕೀದಾರ್ ಅಮಿತ್ ಶಾ’ ಎಂದು ಬದಲಿಸಿಕೊಳ್ಳಲಾಯಿತು. ಜನಮಾನಸದಲ್ಲಿ ಇರುವ ಆಕ್ರೋಶವನ್ನು ಈ ರೀತಿ ಭಾವನಾತ್ಮಕವಾಗಿ ‘ಬಂಡವಾಳ’ ಮಾಡಿಕೊಳ್ಳಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.
2014ರ ಚುನಾವಣೆಯಲ್ಲಿ ಕಾಂಗ್ರೆಸ್ನ ಮಣಿಶಂಕರ್ ಅಯ್ಯರ್ ಅವರು ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರ ವೃತ್ತಿಯನ್ನು ಟೀಕಿಸಿದ್ದರು. ‘ಬೇಕಿದ್ದರೆ ಎಐಸಿಸಿ ಸಮಾವೇಶದಲ್ಲಿ ಚಹಾ ಮಾರಲಿ’ ಎಂದು ವ್ಯಂಗ್ಯವಾಡಿದ್ದರು.
ಚಹಾ ಮಾರೋರೆಲ್ಲ ಪ್ರಧಾನಿ ಆದರೆ ಹೇಗೆ ಎಂದೂ ಕೆಲ ಕಾಂಗ್ರೆಸ್ಸಿಗರು ನಾಲಗೆ ಹರಿಬಿಟ್ಟಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಮೋದಿ, ‘ಚಹಾ ಮಾರೋದು ಪಾಪವೇ? ಚಹಾ ಮಾರೋರು ಯಾವತ್ತೂ ದೇಶದ ಉನ್ನತ ಸ್ಥಾನ ಅಲಂಕರಿಸಲೇಬಾರದೇ’ ಎಂದು ಭಾವನಾತ್ಮಕವಾಗಿ ಮತದಾರರನ್ನು ತಲುಪಿಸಿ, ಮತಗಳಿಸುವಲ್ಲಿ ಯಶಸ್ವಿಯಾಗಿದ್ದರು.