ಬಿಜೆಪಿ ನಾಯಕರಿಂದಲೇ ಅಸಮಾಧಾನ : ಸೂರ್ಯಗೆ ಶುರುವಾಗಿದೆ ತಲೆಬಿಸಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ವಿವಿಧ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ತೇಜಸ್ವಿ ಸೂರ್ಯ ಕಣಕ್ಕೆ ಇಳಿದಿರುವುದು ಕೆಲ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು : ಬೆಂಗಳೂರು ಲೋಕಸಭಾ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ವಿ.ಸೋಮಣ್ಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಇದೇ ವೇಳೆ ಅವರು ಈ ಎಲ್ಲ ಬೆಳವಣಿಗೆಗಳ ನೇತಾರ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಎಂಬ ಆಪಾದನೆ ಮಾಡಿದ್ದು, ಪ್ರಚಾರ ಆರಂಭಿಸುವ ಮೊದಲು ಒಟ್ಟಾರೆ ನಡೆದಿರುವ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ಬೇಕು ಎಂದು ಆಗ್ರಹಿಸಿದ್ದಾರೆ. ಇದರೊಂದಿಗೆ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಅಡ್ಡಿ ಎದುರಾದಂತಾಗಿದೆ.
ಬುಧವಾರ ಬೆಳಗ್ಗೆ ಟಿಕೆಟ್ ವಂಚಿತಗೊಂಡ ತೇಜಸ್ವಿನಿ ಅನಂತಕುಮಾರ್ ಅವರ ನಿವಾಸಕ್ಕೆ ತೆರಳಿದ ಸೋಮಣ್ಣ, ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ‘ತೇಜಸ್ವಿ ಸೂರ್ಯ ಅವರಿಗೆ ಪಕ್ಷ ಟಿಕೆಟ್ ನೀಡಿರಬಹುದು. ಅದೃಷ್ಟಯಾರ ಮನೆಯ ಸ್ವತ್ತೂ ಅಲ್ಲ. ಹಾಗಂತ ಗೊತ್ತಿದ್ದು ಕೂಡ ತಪ್ಪು ಮಾಡಬಾರದು. ಪಕ್ಷ ಎಂದರೆ ಅದು ತಾಯಿ ಇದ್ದಂತೆ. ಅನಂತಕುಮಾರ್ ಅವರು ನಾನು ಕಂಡ ಅಪರೂಪದ ರಾಜಕಾರಣಿ. ಅವರ ಕುಟುಂಬಕ್ಕೆ ಈ ನೋವು ಆಗಬಾರದಿತ್ತು. ಇದರ ನೇತಾರರಾದ ರವಿ ಸುಬ್ರಹ್ಮಣ್ಯ ಅವರಿಗೂ ಹೇಳಿದ್ದೇನೆ’ ಎಂದರು.
‘ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿರುವುದು ನನಗೂ ಯಕ್ಷಪ್ರಶ್ನೆಯಾಗಿದೆ. ಇವತ್ತು ಬೆಳಗ್ಗೆ ಶಾಸಕ ರವಿ ಸುಬ್ರಹ್ಮಣ್ಯ ಅವರು ದೂರವಾಣಿ ಕರೆ ಮಾಡಿ ಪ್ರಚಾರಕ್ಕೆ ಬರುವಂತೆ ಕೋರಿದರು. ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಆದರೆ, ಈ ಬೆಳವಣಿಗೆ ನಡೆದಿದ್ದರ ಬಗ್ಗೆ ಏನೇನಿದೆ ಎಂಬುದರ ಸ್ಪಷ್ಟತೆಬೇಕು. ಯಾರಾರಯರು ದೊಡ್ಡವರಿದ್ದಾರೆ? ಯಾಕೆ ಹೀಗಾಯಿತು ಎಂಬುದು ನಮಗೂ ಮನವರಿಕೆಯಾಗಬೇಕು. ಇದಕ್ಕೆ ಕಾರಣರಾದವರ ಜೊತೆ ಮಾತನಾಡಲು ನಮಗೂ ಅವಕಾಶ ಕಲ್ಪಿಸಿಕೊಡಿ ಎಂಬ ಮಾತನ್ನು ಹೇಳಿದ್ದೇನೆ. ಇಷ್ಟುಮಾಡಿದರೆ ನಿಮಗೆ ಕೋಟಿ ಕೋಟಿ ನಮಸ್ಕಾರ ಮಾಡುತ್ತೇನೆ ಎಂದಿದ್ದೇನೆ’ ಎಂದರು.
‘ಅನಂತಕುಮಾರ್ ಅವರು ಈ ರಾಷ್ಟ್ರ ಕಂಡ ಒಬ್ಬ ಮಹಾನ್ ರಾಜಕಾರಣಿ. ದೇಶದಲ್ಲಿ ಯಾವುದೇ ರಾಜ್ಯದಲ್ಲಾದರೂ ಎಂಥದ್ದೇ ಜ್ವಲಂತ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರ ಕೊಡುವ ಸಾಮರ್ಥ್ಯ ಹೊಂದಿದ್ದವರು ಅನಂತಕುಮಾರ್. ಮೂರು ದಶಕಗಳಿಗೂ ಹೆಚ್ಚು ಕಾಲ ಸಂಸದರಾಗಿ ಮತ್ತು ಹಲವು ಬಾರಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ, ಈಗ ನಡೆದಿರುವ ಬೆಳವಣಿಗೆ ದುರ್ದೈವ’ ಎಂದು ಹೇಳಿದರು.
‘ಏನೂ ತಪ್ಪು ಮಾಡದಿರುವಂಥ, ಯಾವುದೇ ಆಸೆಪಡದೆ ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ರಾಜಧಾನಿ ಬೆಂಗಳೂರಿನಲ್ಲಿ ಬಡವರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮೊದಲು ಆರಂಭಿಸಿದ್ದು ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್. ಅನಂತಕುಮಾರ್ ಅವರು ಅಕಾಲಿಕವಾಗಿ ನಿಧನ ಹೊಂದಿದ ಬಳಿಕ ತೇಜಸ್ವಿನಿ ಅವರಿಗೆ ಟಿಕೆಟ್ ಕೊಡಬೇಕು ಎಂಬ ಉದ್ದೇಶದಿಂದ ನಾನು, ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ನಗರದ ಪಕ್ಷದ ಶಾಸಕರು ಹಾಗೂ ಮುಖಂಡರು ತೀರ್ಮಾನ ಮಾಡಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿ ನಿರ್ಣಯ ಕೈಗೊಂಡಿದ್ದೆವು’ ಎಂದು ತಿಳಿಸಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...