Asianet Suvarna News Asianet Suvarna News

ಪಕ್ಷಗಳಿಗೆ ಭಿನ್ನಮತ ತಲೆಬಿಸಿ : 2 ದಿನದಲ್ಲಿ ಶಮನವಾಗದಿದ್ದರೆ ಕಾದಿದೆ ಸವಾಲು

ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ.  ಇದೇ ವೇಳೆ  ಮೂರೂ ಪಕ್ಷಗಳಲ್ಲಿಯೂ ಕೂಡ ಬಂಡಾಯ ಬೇಗುದಿ ಇದ್ದು, 2 ದಿನದಲ್ಲಿ ಶಮನವಾಗದಿದ್ದಲ್ಲಿ ಸಮಸ್ಯೆ ಸವಾಲು ಎದುರಾಗಲಿದೆ. 

Lok Sabha Election Ticket Issue Dispute in 3 Parties
Author
Bengaluru, First Published Mar 27, 2019, 7:56 AM IST

ಬೆಂಗಳೂರು :  ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದೆ. ಇನ್ನು ಟಿಕೆಟ್‌ ಹಂಚಿಕೆಯಿಂದಾಗಿ ಹುಟ್ಟಿಕೊಂಡಿರುವ ಬಂಡಾಯ ಹಾಗೂ ಒಳ ಬೇಗುದಿ ಶಮನ ಪರ್ವಕ್ಕೆ ರಾಜಕೀಯ ಪಕ್ಷಗಳು ಚಾಲನೆ ನೀಡಲಿವೆ.

ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಈ ಮೂರು ಪಕ್ಷಗಳಲ್ಲೂ ಟಿಕೆಟ್‌ ಹಂಚಿಕೆಯಿಂದ ಒಳ ಬೇಗುದಿ ಸೃಷ್ಟಿಯಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ತುಮಕೂರು, ಚಿಕ್ಕಮಗಳೂರಿನಲ್ಲಿ ನೇರಾ ನೇರ ಬಂಡಾಯ ಎದುರಿಸುತ್ತಿದ್ದರೆ, ಕೋಲಾರದಲ್ಲಿದಲ್ಲಿ ಒಳ ಬೇಗುದಿ ಎದುರಿಸುತ್ತಿದೆ. ಇನ್ನು ಬಿಜೆಪಿಗೆ ಬೆಂಗಳೂರು ದಕ್ಷಿಣ, ಚಿತ್ರದುರ್ಗದಲ್ಲಿ ಹುಟ್ಟಿಕೊಂಡಿರುವ ಒಳ ಬೇಗುದಿ ದೊಡ್ಡ ಪ್ರಮಾಣದಲ್ಲಿ ಕಾಡಲಿದೆ. ಇದಲ್ಲದೆ, ಕೋಲಾರದಲ್ಲಿ ಬಿಜೆಪಿಗೆ ಬಂಡಾಯದ ಭೀತಿ ಉಂಟಾಗಿದೆ.

ಮೊದಲ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಹಿಂಪಡೆಯಲು ಕಡೆ ದಿನವಾದ ಮಂಗಳವಾರ 14 ಲೋಕಸಭಾ ಕ್ಷೇತ್ರಗಳಲ್ಲಿ 340 ಮಂದಿ ಅಭ್ಯರ್ಥಿಗಳು 452 ನಾಮ ಪತ್ರ ಸಲ್ಲಿಸಿದ್ದಾರೆ. ಅತಿ ಹೆಚ್ಚಿನ ನಾಮಪತ್ರ ಮೈಸೂರಿನಲ್ಲಿ (37 ನಾಮಪತ್ರ) ಸಲ್ಲಿಕೆಯಾಗಿದ್ದರೆ, ಕಡಿಮೆ ನಾಮಪತ್ರಗಳು ಹಾಸನ ಹಾಗೂ ಚಾಮರಾಜನಗರ (ತಲಾ 18 ನಾಮಪತ್ರ) ಲೋಕಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿವೆ.

ನಾಮಪತ್ರ ಹಿಂಪಡೆಯಲು ಶುಕ್ರವಾರ ಕಡೆ ದಿನವಾಗಿದೆ. ಹೀಗಾಗಿ ಇನ್ನು 2 ದಿನದಲ್ಲಿ, ಎಲ್ಲೆಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೋ ಅಲ್ಲಿ ಬಂಡಾಯ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡುವ ಪ್ರಯತ್ನವನ್ನು ಪಕ್ಷಗಳು ನಡೆಸಬೇಕಿದೆ.

ಬಂಡಾಯ:  ಈ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಅತಿ ದೊಡ್ಡ ಬಂಡಾಯ ಎದುರಾಗಿರುವುದು ತುಮಕೂರಿನಲ್ಲಿ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ಮುದ್ದಹನುನೇಗೌಡ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಗೆದ್ದಿರುವ ಕಾಂಗ್ರೆಸ್‌ನ 10 ಸದಸ್ಯರ ಪೈಕಿ ತಮಗೆ ಮಾತ್ರ ತಪ್ಪಿಸಿದ್ದನ್ನು ವಿರೋಧಿಸಿ ಅವರು ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ಮುದ್ದಹನುಮೇಗೌಡರ ಮನವೊಲಿಸಿ ನಾಮಪತ್ರ ಹಿಂಪಡೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಆರಂಭಿಸಿದೆ. ಈ ಹೊಣೆಯನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರಿಗೆ ನೀಡಲಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ಪ್ರಭಾವಿ ಕಾಂಗ್ರೆಸ್‌ ನಾಯಕ ಕೆ.ಎನ್‌. ರಾಜಣ್ಣ ಅವರು ಸಹ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಎನ್‌.ರಾಜಣ್ಣ ಮೊದಲಿಂದಲೂ ದೇವೇಗೌಡರ ಕುಟುಂಬ ರಾಜಕಾರಣ ವಿರೋಧಿಸುತ್ತಾ ಬಂದವರು. ಕಾಂಗ್ರೆಸ್‌ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಆರಂಭದಲ್ಲೇ ಘೋಷಿಸಿದ್ದರು. ಕಾಂಗ್ರೆಸ್‌ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಘೋಷಣೆ ಮಾಡಿದಾಗ ಮುದ್ದಹನುಮೇಗೌಡ ಬಂಡಾಯವೆದ್ದಾಗ ಅವರಿಗೆ ಬೆಂಬಲಕ್ಕೆ ನಿಂತರು.

ಆದರೆ, ಒಂದು ವೇಳೆ ಹೈಕಮಾಂಡ್‌ ಒತ್ತಡಕ್ಕೆ ಮಣಿದು ಮುದ್ದಹನುಮೇಗೌಡ ನಾಮಪತ್ರ ಹಿಂಪಡೆಯಬಹುದು ಎಂಬ ಶಂಕೆಯಿಂದ ತಾವೂ ಸಹ ನಾಮಪತ್ರ ಸಲ್ಲಿಸಿದ್ದಾರೆ. ರಾಜಣ್ಣ ಅವರನ್ನು ಮನವೊಲಿಸುವುದು ಕಾಂಗ್ರೆಸ್‌ ನಾಯಕರ ಪಾಲಿಗೆ ಕಬ್ಬಿಣದ ಕಡಲೆಯಾಗಲಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದನ್ನು ವಿರೋಧಿಸಿ ಎಐಸಿಸಿ ಸದಸ್ಯ ಅಮೃತ್‌ ಶೆಣೈ ನಾಮಪತ್ರ ಸಲ್ಲಿಸಿದ್ದಾರೆ. ಅವರನ್ನು ಸಮಾಧಾನಪಡಿಸುವ ಪ್ರಯತ್ನ ನಡೆದಿದ್ದು, ಅದು ಯಶಸ್ವಿಯಾಗುವ ವಿಶ್ವಾಸವನ್ನು ಮೈತ್ರಿ ಕೂಟ ಹೊಂದಿದೆ.

ಬಂಡಾಯವು ಬಿಜೆಪಿಯನ್ನೂ ಬಿಟ್ಟಿಲ್ಲ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಸ್‌.ಮುನಿಸ್ವಾಮಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಡಿ.ಎಸ್‌.ವೀರಯ್ಯ ನಾಮಪತ್ರ ಸಲ್ಲಿಸಿದ್ದಾರೆ. ವೀರಯ್ಯ ಎರಡು ಬಾರಿ ಕಾಂಗ್ರೆಸ್‌ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿದ್ದು ಸುಮಾರು 3 ಲಕ್ಷದಷ್ಟುಮತಗಳನ್ನು ಪಡೆದಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹತ್ತಿರದವರಾಗಿದ್ದರಿಂದ ಟಿಕೆಟ್‌ ಸಿಗುತ್ತದೆ ಎಂಬ ನಂಬಿಕೆ ಇಟ್ಟುಕೊಂಡಿದ್ದರು. ಆದರೆ, ಪಕ್ಷವು ಮುನಿಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಸಿಡಿದೆದ್ದು ವೀರಯ್ಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಭಿನ್ನಮತ:  ಇದಿಷ್ಟುಬಂಡಾಯ ಅಭ್ಯರ್ಥಿಯಾದರೆ, ಭಿನ್ನಮತ ಕೂಡ ಎಲ್ಲ ಪಕ್ಷಗಳಿಗೂ ಕಾಡುತ್ತಿದೆ. ಬಿಜೆಪಿ ಪಾಲಿಗೆ ತೀವ್ರ ಒಳ ಬೇಗುದಿ ಕಂಡು ಬಂದಿರುವುದು ಬೆಂಗಳೂರು ದಕ್ಷಿಣ ಹಾಗೂ ಚಿತ್ರದುರ್ಗದಲ್ಲಿ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನೇರಾನೇರ ಬಂಡಾಯ ಕಂಡು ಬಂದಿಲ್ಲ. ಆದರೆ, ಒಳ ಬೇಗುದಿ ಮಾತ್ರ ತೀವ್ರವಾಗಿದೆ. ಕೇಂದ್ರ ಸಚಿವ ದಿ. ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಆಕಾಂಕ್ಷಿಯಾಗಿದ್ದ ಈ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ ಅನ್ನು ತೇಜಸ್ವಿ ಸೂರ್ಯ ಎಂಬ ಯುವ ನಾಯಕನಿಗೆ ನೀಡಲಾಗಿದೆ. ಇದು ಟಿಕೆಟ್‌ ದೊರೆಯುವ ಖಾತರಿ ಹೊಂದಿದ್ದ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಮಾತ್ರವಲ್ಲ, ರಾಜ್ಯ ಬಿಜೆಪಿ ಘಟಕಕ್ಕೂ ಅಚ್ಚರಿಯ ಬೆಳವಣಿಗೆಯಾಗಿದೆ. ಸಹಜವಾಗಿಯೇ ಇದು ಪಕ್ಷದಲ್ಲಿ ಭಾರಿ ಪ್ರಮಾಣದಲ್ಲಿ ಒಳ ಬೇಗುದಿಯನ್ನು ಹುಟ್ಟುಹಾಕಿದೆ.

ಹೈಕಮಾಂಡ್‌ನ ಈ ನಿರ್ಧಾರದ ಬಗ್ಗೆ ಬಹಿರಂಗವಾಗಿ ಯಾರೂ ಹೇಳಿಕೆ ನೀಡಿಲ್ಲ. ಖುದ್ದು ತೇಜಸ್ವಿನಿ ಅನಂತಕುಮಾರ್‌ ಅವರಿಂದಲೂ ಬಂಡಾಯದ ಮಾತುಗಳು ಕೇಳಿಬಂದಿಲ್ಲ. ಆದರೆ, ಅನಂತಕುಮಾರ್‌ ಅವರ ಬೆಂಬಲಿಗರಾಗಿರುವ ಬೆಂಗಳೂರಿನ ಹಲವು ಬಿಜೆಪಿ ಶಾಸಕರು ಈ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ಬಹಿರಂಗವಾಗಿ ವ್ಯಕ್ತವಾಗದ ಈ ಬೇಗುದಿಯನ್ನು ಶಮನ ಮಾಡುವ ಕ್ಲಿಷ್ಟಸವಾಲು ಪಕ್ಷದ ನಾಯಕರ ಮುಂದಿದೆ.

ಇನ್ನು ಚಿತ್ರದುರ್ಗದಲ್ಲಿ ಯಾವುದೇ ಬಂಡಾಯಗಳು ಕಂಡಿಲ್ಲ. ಆದರೆ ಭೋವಿ ಸಮುದಾಯಕ್ಕೆ ಟಿಕೆಟ್‌ ನೀಡದೇ ಇರುವುದರ ಬಗ್ಗೆ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಅಸಮಾಧಾನಗೊಂಡಿದ್ದು ಬಿಜೆಪಿ ವಿರುದ್ಧ ಮತ ಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಇಬ್ಬರು ಶಾಸಕರಾದ ಗೂಳಿಹಟ್ಟಿಶೇಖರ್‌ಹಾಗೂ ಚಂದ್ರಪ್ಪ ಅವರು ಇದೇ ಸಮುದಾಯಕ್ಕೆ ಸೇರಿದವರು. ಸಮುದಾಯದ ಸ್ವಾಮೀಜಿ ಬಿಜೆಪಿ ವಿರುದ್ಧ ನಿಂತಿರುವುದರಿಂದ ಈ ಶಾಸಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಶಾಸಕರು ಬಿಜೆಪಿಯ ಅಭ್ಯರ್ಥಿ ಎ. ನಾರಾಯಸ್ವಾಮಿ ಪರ ಕೆಲಸ ಮಾಡಿದರೆ ಸಮುದಾಯದ ಆಕ್ರೋಶಕ್ಕೆ ಸಿಲುಕಬೇಕಾಗುತ್ತದೆ. ಹಾಗಂತ ಕೆಲಸ ಮಾಡದಿದ್ದರೆ ಪಕ್ಷದ ಸಿಟ್ಟಿಗೆ ಬಲಿಯಾಗಬೇಕಾಗುತ್ತದೆ. ಈ ದ್ವಂದ್ವವನ್ನು ಶಾಸಕರು ಹೇಗೆ ಮೀರುತ್ತಾರೆ ಎಂಬುದೇ ಕುತೂಹಲ.

ಇನ್ನು ಕೋಲಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಪಕ್ಷಗಳ ಅಭ್ಯರ್ಥಿಯಾಗಿರುವ ಕೆ.ಎಚ್‌.ಮುನಿಯಪ್ಪ ವಿರುದ್ಧ ಕಾಂಗ್ರೆಸ್‌ನ ನಾಲ್ವರು ಮತ್ತು ಜೆಡಿಎಸ್‌ನ ಒಬ್ಬರು ತಿರುಗಿ ಬಿದ್ದಿದ್ದಾರೆ. ಮುನಿಯಪ್ಪ ಅವರಿಗೆ ಟಿಕೆಟ್‌ ನೀಡದಂತೆ ಈ ಐದು ಮಂದಿ ಶಾಸಕರು ಮತ್ತು ಕೆಲ ಮಾಜಿ ಶಾಸಕರು ದೆಹಲಿಯಲ್ಲಿ ಲಾಬಿ ನಡೆಸಿ ಹೈಕಮಾಂಡ್‌ ಗಮನಕ್ಕೂ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮುನಿಯಪ್ಪ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಷ್ಟಾಗಿಯೂ ತಣ್ಣಗಾಗದ ಭಿನ್ನಮತೀಯ ಶಾಸಕರು ಮುನಿಯಪ್ಪ ಅವರ ವಿರುದ್ಧ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದು ಇದರ ಲಾಭ ಬಿಜೆಪಿ ಪಾಲಾಗುವ ನಿರೀಕ್ಷೆ ಇದೆ. ಇದು ಕಾಂಗ್ರೆಸ್‌ ವಲಯದಲ್ಲಿ ಆತಂಕವನ್ನು ಸೃಷ್ಟಿಮಾಡಿದೆ.

ಎಲ್ಲಿ ಬಂಡಾಯ?

ತುಮಕೂರು: ಕಾಂಗ್ರೆಸ್‌-ಜೆಡಿಎಸ್‌ನ ದೇವೇಗೌಡರ ವಿರುದ್ಧ ಕಾಂಗ್ರೆಸ್‌ನ ಮುದ್ದಹನುಮೇಗೌಡ, ರಾಜಣ್ಣ ನಾಮಪತ್ರ

ಉಡುಪಿ-ಚಿಕ್ಕಮಗಳೂರು: ಕಾಂಗ್ರೆಸ್‌-ಜೆಡಿಎಸ್‌ನ ಪ್ರಮೋದ್‌ ಮಧ್ವರಾಜ್‌ ವಿರುದ್ಧ ಕಾಂಗ್ರೆಸ್‌ನ ಅಮೃತ್‌ ಶೆಣೈ ನಾಮಪತ್ರ

ಕೋಲಾರ: ಬಿಜೆಪಿಯ ಮುನಿಸ್ವಾಮಿ ವಿರುದ್ಧ ಬಿಜೆಪಿ ನಾಯಕ ಡಿ.ಎಸ್‌. ವೀರಪ್ಪ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ

ಎಲ್ಲಿ ಭಿನ್ನಮತ?

ಕೋಲಾರ: ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ ಕೆ.ಎಚ್‌. ಮುನಿಯಪ್ಪ ವಿರುದ್ಧ ತಿರುಗಿಬಿದ್ದ 4 ಕಾಂಗ್ರೆಸ್‌, ಒಬ್ಬ ಜೆಡಿಎಸ್‌ ಶಾಸಕ

ಬೆಂಗಳೂರು ದಕ್ಷಿಣ: ಬಿಜೆಪಿಯಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್‌ ನೀಡಿ, ತೇಜಸ್ವಿನಿ ಅನಂತಕುಮಾರ್‌ಗೆ ನಿರಾಕರಿಸಿದ್ದಕ್ಕೆ ಪಕ್ಷದಲ್ಲಿ ಅಸಮಾಧಾನ

ಚಿತ್ರದುರ್ಗ: ಭೋವಿ ಸಮಾಜಕ್ಕೆ ಬಿಜೆಪಿ ಟಿಕೆಟ್‌ ದೊರಕದ್ದಕ್ಕೆ ಸಮಾಜದ ಬಿಜೆಪಿ ಶಾಸಕರು, ಶ್ರೀಗಳ ಅತೃಪ್ತಿ

Follow Us:
Download App:
  • android
  • ios