ಕೈ ತಪ್ಪಿದ ಹಾಲಿ ಸಂಸದರ ಕ್ಷೇತ್ರ, ಕಾಂಗ್ರೆಸ್ನಲ್ಲಿ ಭುಗಿಲೆದ್ದ ಅಸಮಾಧಾನ..!
ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದಕ್ಕೆ ಜಿಲ್ಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ತುಮಕೂರು, (ಮಾ.15): ಸರ್ಕಾರದಲ್ಲಿ ದೋಸ್ತಿಗಳಾಗಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಲೋಕಸಭೆ ಚುನಾವಣೆಗೂ ಮೈತ್ರಿ ಮಾಡಿಕೊಂಡಿದೆ.
ಆದರೆ, ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರ ಆಕ್ರೊಶದ ಕಟ್ಟೆ ಹೊಡೆದಿದೆ.
ತುಮಕೂರು JDS : ಪಕ್ಷೇತರ ಸ್ಪರ್ಧೆ ಎಚ್ಚರಿಕೆ ನೀಡಿದ ಕಾಂಗ್ರೆಸ್ ಮುಖಂಡ
ತುಮಕೂರು ಜಿಲ್ಲಾ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಾಲಿ ಸಂಸದ ಮುದ್ದಹನುಮೇಗೌಡ ಅವರ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದರಿಂದ ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ಮುಖಂಡ ರಾಜಣ್ಣ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ನಾಯಕರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು (ಶುಕ್ರವಾರ) ಜಿಲ್ಲಾ ಕಾಂಗ್ರೆಸ್ ಸುದ್ದಿಗೋಷ್ಠಿಯಲ್ಲಿ ನಾಯಕರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರು ಕ್ಷೇತ್ರ ಕ್ಕೆ ಮುದ್ದಹನುಮೇಗೌಡರು ಸಾಕಷ್ಟು ಅನುದಾನ ತಂದಿದ್ದಾರೆ. ಹೆಚ್ ಎ ಎಲ್ ಘಟಕ, ಇಸ್ರೋ,ರೈಲ್ವೆ ಸೇರಿದಂತೆ ಹಲವು ಯೋಜನೆಗಳನ್ನು ಕ್ಷೇತ್ರ ಕ್ಕೆ ತಂದಿದ್ದು ಅವರಿಗೆ ಮತ್ತೆ ಟಿಕೆಟ್ ನೀಡಬೇಕು ಎಂದು ಮುದ್ದಹನುಮೇಗೌಡರ ಪರ ಜಿಲ್ಲಾ ಕಾಂಗ್ರೆಸ್ ಘಟಕ ಬ್ಯಾಟಿಂಗ್ ಮಾಡಿದೆ.
ಎಲ್ಲಾ ಕಡೆಯೂ ಹಾಲಿ ಸಂಸದರಿರುವ ಕ್ಷೇತ್ರ ಕ್ಕೆ ಟಿಕೆಟ್ ನೀಡಲಾಗಿದೆ. ಆದ್ರೆ ತುಮಕೂರಿಗೆ ಟಿಕೆಟ್ ನೀಡಿಲ್ಲ. ಮುದ್ದಹನುಮೇಗೌಡ ರ ಕೊಡುಗೆ ನೋಡಿ ಟಿಕೆಟ್ ನೀಡಬೇಕು ಎಂದು ಈ ಮೂಲಕ ಹೈಕಮಾಂಡ್ ಗೆ ಮನವಿ ಮಾಡಿದರು.
ಕಳೆದ ಬಾರಿ ಮೋದಿ ಅಲೆಯಲ್ಲೂ ಮುದ್ದಹನುಮೇಗೌಡರು ಗೆಲುವು ಕಂಡಿದ್ದರು. ಹೀಗಾಗಿ ಈ ಬಾರಿಯೂ ಕೂಡ ಗೆಲ್ಲುವುದು ಖಚಿತ,. ಹೀಗಾಗಿ ಅವರಿಗೆ ಟಿಕೆಟ್ ನೀಡಲೇಬೇಕು.
ಬೇರೆ ಜಿಲ್ಲೆಗಳಲ್ಲಿ ಎರಡು ಪಕ್ಷಗಳು ಒಂದೆ ಇರಬಹುದು. ಆದ್ರೆ ತುಮಕೂರುನಲ್ಲಿ ಇಲ್ಲ. ಇಲ್ಲಿ ಕಾಂಗ್ರೆಸ್ ಬೇರೆ, ಜೆಡಿಎಸ್ ಬೇರೆ ,ಬಿಜೆಪಿಯೇ ಬೇರೆ.
ಹೀಗಾಗಿ ಮುದ್ದಹನುಮೇಗೌಡ ಟಿಕೆಟ್ ನೀಡುವಂತೆ ಒತ್ತಾಯ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.