ಮತದಾನ ಮಾಡದ್ದು ಮಹಾ ಪಾಪ: ದಿಗ್ವಿಜಯ್ ಸಿಂಗ್ಗೆ ಪ್ರಧಾನಿ ಮೋದಿ ಟಾಂಗ್
ಈ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳೂ ಸಹ ಮತಗಟ್ಟೆಎದುರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸುತ್ತಾರೆ| ಮತದಾನ ಮಾಡದ್ದು ಮಹಾಪಾಪ: ದಿಗ್ವಿಜಯ್ ಸಿಂಗ್ಗೆ ಪ್ರಧಾನಿ ಮೋದಿ ಟಾಂಗ್|
ನವದೆಹಲಿ[ಮೇ.14]: ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆ ವೇಳೆ ಮತದಾನ ಮಾಡದೇ ದಿಗ್ಗಿ ರಾಜಾ ಮಹಾಪಾಪ ಎಸಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಚಾಟಿ ಬೀಸಿದರು.
ರತ್ಲಂ ಜಿಲ್ಲೆಯಲ್ಲಿ ರಾರಯಲಿಯಲ್ಲಿ ಮಾತನಾಡಿದ ಅವರು, ಈ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳೂ ಸಹ ಮತಗಟ್ಟೆಎದುರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸುತ್ತಾರೆ. ಆದರೆ ದಿಗ್ವಿಜಯ್ ಸಿಂಗ್ ಮತದಾನ ಮಾಡದೇ ಮಹಾಪಾಪ ಎಸಗಿದ್ದಾರೆ. ಅಲ್ಲದೇ ಮತದಾನ ಮಾಡಿಲ್ಲವೆನ್ನುವ ಸೊಕ್ಕನ್ನು ತೋರಿಸುತ್ತಿದ್ದಾರೆ. ಅವರು ಪ್ರತಿನಿಧಿಸುವ ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ಮಾಡಿದ್ದಾರೆ.
ಭೋಪಾಲ್ನಲ್ಲಿ ಕಣಕ್ಕೆ ಇಳಿದಿರುವ ದಿಗ್ವಿಜಯ್ ಅವರ ಮತ, ರಾಜಗಢದಲ್ಲಿದೆ. ಅದು ಭೋಪಾಲ್ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಆದರೆ ದಿಗ್ವಿಜಯ್ ಪಕ್ಷದ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭೋಪಾಲ್ನ ಎಲ್ಲಾ ಮತಗಟ್ಟೆಗಳಿಗೆ ತೆರಳುತ್ತಲೇ ದಿನ ಕಳೆದರು. ಪರಿಣಾಮ ಮತ ಚಲಾವಣೆಗೆ ಹೋಗಿರಲಿಲ್ಲ.