ಮಂಡ್ಯ: ಜೆಡಿಎಸ್ ಸಮಾವೇಶದಲ್ಲಿ ಮೊಳಗಿತು 'ಡಿ ಬಾಸ್' ಘೋಷಣೆ..!
ಮಂಡ್ಯ ಕಣ ರಣರಂಗವಾಗಿದ್ದು, ಇಂದು ಕೆ.ಆರ್.ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿಯೂ ಡಿ ಬಾಸ್ ಕೂಗು ಕೇಳಿಬಂದಿದೆ.
ಮಂಡ್ಯ, [ಏ.04] ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಚಾರದ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ನಟ ದರ್ಶನ್ ಕಹಳೆ ಮೊಳಗಿಸಿದ್ದು, ಹೋದಲೆಲ್ಲ ಡಿ ಬಾಸ್ ಎಂಬ ಘೋಷಣೆ ಕೇಳಿಬರುತ್ತದೆ.
ಆದರೆ, ಇತ್ತ ಇಂದು [ಗುರುವಾರ] ಕೆ.ಆರ್.ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿಯೂ ಡಿ ಬಾಸ್ ಕೂಗು ಕೇಳಿಬಂದಿದೆ. ಡಿ ಬಾಸ್ ಅಂದರೆ ದರ್ಶನ್ ಅಲ್ಲ. ಬದಲಾಗಿ ದೇವೇಗೌಡ ಬಾಸ್ ಎಂದು ಜೆಡಿಎಸ್ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ದರ್ಶನ್ ಕಂಡರೆ ಸಿಎಂ ಉರಿದು ಬೀಳಲು ಇಲ್ಲಿವೆ ಐದು ಕಾರಣಗಳು
ಸಮಾವೇಶದಲ್ಲಿ ದೇವೇಗೌಡರನ್ನು ಉದ್ದೇಶಿಸಿ ಅವರು ಮಾಡಿರುವ ವಿವಿಧ ಸಾಧನೆಗಳ ಮೇಲೆ ಘೋಷಣೆ ಕೂಗಿ ಕಾರ್ಯಕರ್ತರು ಎದುರಾಳಿಗಳಿಗೆ ಟಾಂಗ್ ನೀಡಿದರು.
ಡಿ ಬಾಸ್ ದೇವೇಗೌಡ ಬಾಸ್, ದುಡಿಮೆಯ ಬಾಸ್ ದೇವೇಗೌಡ ಬಾಸ್, ಮಂಡ್ಯದ ಬಾಸ್ ದೇವೇಗೌಡ ಬಾಸ್, ನೀರಾವರಿ ಯೋಜನೆಯ ಬಾಸ್ ದೇವೇಗೌಡ ಬಾಸ್, ಕಾವೇರಿ ಹೋರಾಟದ ಬಾಸ್ ದೇವೇಗೌಡ ಬಾಸ್, ಬಾಸ್ ಬಾಸ್ ದೇವೇಗೌಡ ಬಾಸ್ ಅಂತೆಲ್ಲಾ ಘೋಷಣೆ ಮೊಳಗಿಸಿದರು.
ದರ್ಶನ್ ಹಾಗೂ ಯಶ್ ಜೋಡೆತ್ತು ಎನ್ನುವುದಕ್ಕೆ ಈ ಹಿಂದೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ಅವು ಜೋಡೆತ್ತು ಅಲ್ಲ. ರೈತರು ಬೆಳೆ ಪೈರನ್ನು ತಿನ್ನುವ ಕಳ್ಳೆತ್ತು ಎಂದು ಟಾಂಗ್ ಕೊಟ್ಟುರುವುದನ್ನು ಇಲ್ಲಿ ಸ್ಮರಿಸಬಹುದು.