ಕಮಲ ಮುಡಿದ ಸಿದ್ದು ಕಟ್ಟಾ ಶಿಷ್ಯ, ಚುನಾವಣೆ ಹೊತ್ತಲ್ಲಿ ಕೈಗೆ ಶಾಕ್!
ಚುನಾವಣೆ ಎದುರಲ್ಲಿ ಕಾಂಗ್ರೆಸ್ಗೆ ಬಿಜೆಪಿ ಶಾಕ್ ನೀಡಿದೆ. ಸಿದ್ದರಾಮಯ್ಯ ಬೆಂಬಲಿಗರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಚುನಾವಣಾ ಫಲಿತಾಂಶದ ಮೇಲೆ ಇದು ಯಾವ ಪರಿಣಾಮ ಬೀರಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಚಾಮರಾಜನಗರ[ಏ.14] ಮಾಜಿ ಸಿಎಂ ಸಿದ್ದರಾಮಯ್ಯ ಶಿಷ್ಯ, ಕಾಂಗ್ರೆಸ್ ಯುವ ಮುಖಂಡ ಡಿ.ಎನ್.ನಟರಾಜು ಹಾಗೂ ಎ.ಆರ್.ಕೃಷ್ಣಮೂರ್ತಿ ಸಹೋದರ ಎ.ಆರ್.ಬಾಲರಾಜು ಕೈಬಿಟ್ಟು ಕಮಲ ಹಿಡಿದಿದ್ದಾರೆ.
ನಗರದ ಮಾರಿಗುಡಿ ಬಳಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.
ಸಿದ್ದರಾಮಯ್ಯ ಆಪ್ತ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಂಬಂಧಿಯೂ ಆದ ಡಿ.ಎನ್.ನಟರಾಜ್ ಮಾತನಾಡಿ, ಪಕ್ಷದಲ್ಲಿ ನನಗೆ ಸಿಗಬೇಕಾದ ಗೌರವ ಮತ್ತು ಸ್ಥಾನ ಸಿಗದಿದ್ದರಿಂದ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ, ರಾಜ್ಯ ವರಿಷ್ಠರ ಅಣತಿಯಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇವೆ ಎಂದರು.
ನಾವು ಸೋತ್ರೆ ಸರ್ಕಾರ ಇರುತ್ತಾ?: ಸಿದ್ದರಾಮಯ್ಯ ಈ ಮಾತಿನ ಮರ್ಮವೇನು..?
ಮತ್ತೆ ಬಿಜೆಪಿ ಸೇರಿದ ಬಿಜೆಪಿ ಸದಸ್ಯ: ಚಾಮರಾಜನಗರ ತಾಲೂಕಿನ ಚಂದಕವಾಡಿ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯ ಆರ್. ಬಾಲರಾಜು ಸಹ ಬಿಜೆಪಿ ಸೇರ್ಪಡೆಯಾದರು!. ಕಳೆದ ವಿಧಾನಸಭೆ ಚುನಾವಣೆ ವೇಳೆ ಬಾಲರಾಜು ಸಹೋದರ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಕಾಂಗ್ರೆಸ್ ಸೇರ್ಪಡೆಯಾಗಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಣ್ಣ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಬಾಲರಾಜು ಕೂಡ ಕೈ ಪಾಳಯ ಸೇರಿದ್ದರು. ಆದರೆ, ನಂತರ ದಿನಗಳಲ್ಲಿ ಬಾಲರಾಜು ಅವರನ್ನು ಕಾಂಗ್ರೆಸ್ ನಲ್ಲಿ ಕಡೆಗಣಿಸಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗದೆ, ಮಾತೃಪಕ್ಷ ಬಿಜೆಪಿಗೆ ಹೋಗಲಾರದೆ ಗೊಂದಲದಲ್ಲಿ ಸಿಲುಕ್ಕಿದ್ದರು.
ಕಾಂಗ್ರೆಸ್ ಸೇರ್ಪಡೆಯಾಗಿದ್ದರು ಸಹ ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ಕೊಳ್ಳದಿರರುವುದರಿಂದ ಬಾಲರಾಜ್ ಬಿಜೆಪಿ ಸದಸ್ಯರಾಗಿಯೇ ಮುಂದುವರಿದ್ದರು. ಇದೀಗ ಬಾಲರಾಜು ಬೆಂಬಲಿಗರು ಭವಿಷ್ಯದ ದೃಷ್ಟಿಯಿಂದ ಕಮಲ ಮುಡಿದಿದ್ದಾರೆ.