ಸದಾನಂದ ಗೌಡ ಪರ ಪ್ರಚಾರಕ್ಕೆ ಇಳಿದ ಎಸ್.ಎಂ.ಕೃಷ್ಣ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿವಿಧ ಪಕ್ಷಗಳಲ್ಲಿ ಪ್ರಚಾರ ಕಾರ್ಯ ಜೋರಾಗಿದೆ. ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಕೂಡ ಪ್ರಚಾರ ಕಣಕ್ಕೆ ಇಳಿದಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರದ ಸಚಿವ ಡಿ.ವಿ. ಸದಾನಂದಗೌಡರ ಪರವಾಗಿ ಪ್ರಚಾರ ನಡೆಸಿದರು. ರಾಜಾಜಿನಗರದ ಬ್ರಿಗೇಡ್ ಗೇಟ್ ವೇ, ರೆನಾ ಸನ್ ಅಪಾರ್ಟ್ಮೆಂಟ್ ನಿವಾಸಿಗಳ ಜತೆ ಸಂವಾದ ನಡೆಸಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಕೃಷ್ಣ, ವಂಶಪಾರಂಪರ್ಯ ರಾಜಕಾರಣ ಸರಿಯಲ್ಲ. ಆಡಳಿತ ನಡೆಸಲು ಅರ್ಹತೆಯಿಲ್ಲದಿದ್ದರೂ ಆ ವಂಶದಲ್ಲಿ ಹುಟ್ಟಿದ್ದೇನೆ. ಹೀಗಾಗಿ ದೇಶ ಆಳುತ್ತೇನೆ ಎನ್ನುವುದನ್ನು ಒಪ್ಪಲು ಬರುವುದಿಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯನ್ನು ಟೀಕಿಸಿದರು.
ಇದು ಮಹತ್ವದ ಚುನಾವಣೆಯಾಗಿದೆ. ಕಳೆದ ಐದು ವರ್ಷದಲ್ಲಿ ದೇಶ ನಡೆದು ಬಂದಿರುವ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನ, ಸಂತೋಷ ತಂದು ಕೊಟ್ಟಿದೆ. ಈ ರಾಷ್ಟ್ರಕ್ಕೆ ಒಬ್ಬ ಬಲಿಷ್ಠ ವ್ಯಕ್ತಿ ಪ್ರಧಾನಿ ಆಗಬೇಕು ಎಂದಾಗ ಗುಜರಾತ್ ನಿಂದ ನರೇಂದ್ರ ಮೋದಿ ಬಂದರು. ಅಲ್ಲಿಯವರೆಗೂ ಬಲಿಷ್ಠ ಪ್ರಧಾನಿ ಎಂದರೆ ಏನು ಎನ್ನುವುದು ದೇಶಕ್ಕೆ ತಿಳಿದಿರಲಿಲ್ಲ ಎಂದು ಹೇಳಿದರು.
ಸದಾನಂದಗೌಡ ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಈ ಬಾರಿಯೂ ನನ್ನನ್ನು ಚುನಾಯಿಸಿ. ನಾನು ಮತ್ತು ಅನಂತ್ಕುಮಾರ್ ಜತೆಯಾಗಿ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದೇವೆ. ಈಗ ನಮ್ಮ ಜತೆ ಅನಂತ್ಕುಮಾರ್ ಇಲ್ಲ. ನಾವು ಜೋಡೆತ್ತು ಎಂದು ಹೇಳಿಕೊಳ್ಳುವುದಿಲ್ಲ. ಜೋಡೆತ್ತು ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ನಗುತ್ತಲೇ ಹೇಳಿದರು.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...