Asianet Suvarna News Asianet Suvarna News

ಗಂಗೂಬಾಯಿ ಹಾನಗಲ್ ಸ್ಮಾರಕ ಈಗ ಪಾಳು ಬಿದ್ದ ಮನೆ!

ಗಂಗೂಬಾಯಿ ಹಾನಗಲ್ ಸ್ಮಾರಕ ಈಗ ಪಾಳು ಬಿದ್ದ ಮನೆ!| ಸಂಗೀತ ಶಾಲೆ, ಮ್ಯೂಸಿಯಂ ಕೂಡ ಇದ್ದ ತಾಣ ಸಂಪೂರ್ಣ ಹಾಳು | ಜೀರ್ಣೋದ್ಧಾರವಾದ ಹತ್ತೇ ವರ್ಷದಲ್ಲಿ ದುಸ್ಥಿತಿ

Gangotri Museum built in memory Of Famous hindustani Singer gangubai hangal Ruins
Author
Bangalore, First Published Oct 14, 2019, 11:50 AM IST

ಬಸವರಾಜ ಹಿರೇಮಠ

ಧಾರವಾಡ[ಅ.14]: ತಮ್ಮ ಕಂಚಿನ ಸಿರಿಕಂಠದಿಂದ ದೇಶ- ವಿದೇಶ ಗಳಲ್ಲಿ ಪ್ರಖ್ಯಾತವಾಗಿದ್ದ ಪದ್ಮ ವಿಭೂಷಣ ಡಾ.ಗಂಗೂಬಾಯಿ ಹಾನಗಲ್(ಗಂಗಜ್ಜಿ) ಹೆಸರಿನಲ್ಲಿ ಧಾರವಾಡ ನಗರದಲ್ಲಿ ನಿರ್ಮಾಣವಾಗಿದ್ದ ಸ್ಮಾರಕ, ಗಂಗೋತ್ರಿ ಹೆಸರಿನ ವಸ್ತು ಸಂಗ್ರಹಾಲಯ ಹಾಗೂ ಸಂಗೀತ ಶಾಲೆ ಸಂಪೂರ್ಣವಾಗಿ ಬಿದ್ದು ಹಾಳಾಗಿ ಹೋಗಿದೆ.

೨ ವರ್ಷಗಳ ಹಿಂದೆಯೇ ಗಂಗೋತ್ರಿ ನೆಲಕಚ್ಚಿದ್ದು ಇಡೀ ಮನೆ ಜೇಡರ ಬಲೆಯಿಂದ ಸುತ್ತಿಕೊಂಡಿದೆ. ಕಟ್ಟಡ ವೀಕ್ಷಿಸಲು ಹೋದವರಿಗೆ ಅಲ್ಲಿ ವಿಷಜಂತುಗಳ ಭೇಟಿ ನಿಶ್ಚಿತ. ಇದು ಸ್ಮಾರಕವಾದ ಗಂಗಜ್ಜಿ ಮನೆಯ ದುಸ್ಥಿತಿ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಗಮ ನಕ್ಕೆ ತಂದರೂ ಇಲ್ಲಿಯವರೆಗೂ ಯಾರೊಬ್ಬರೂ ಈ ಕುರಿತು ಗಮನ ಹರಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಧಾರವಾಡದ ಹೊಸ ಯಲ್ಲಾಪುರ ಶುಕ್ರವಾರ ಪೇಟೆಯಲ್ಲಿರುವ ಗಂಗೂಬಾಯಿ ಹಾನಗಲ್ ಸ್ಮಾರಕ ಗಂಗೋತ್ರಿಯಲ್ಲಿ ನಿಲ್ಲಿಸಿದ ಫಲಕದಲ್ಲಿ ‘ಈ ಮನೆ ಯಲ್ಲಿಯೇ 1913ರ ಮಾರ್ಚ್ 5 ರಂದು ಗಂಗೂಬಾಯಿ ಹಾನಗಲ್ ಜನಿಸಿದರು. ಅವರ ಗೌರವಾರ್ಥ ಈ ಮನೆಯನ್ನು ರಾಜ್ಯ ಸರ್ಕಾರವು ಅಗಸ್ಟ್ 2008ರಲ್ಲಿ ಜೀರ್ಣೋದ್ಧಾರ ಮಾಡಿದೆ. ಅದಕ್ಕಾಗಿ ₹25 ಲಕ್ಷ ಖರ್ಚು ಮಾಡಲಾಗಿದೆ’ ಎಂಬ ವಿವರವುಳ್ಳ ಫಲಕ ಮಾತ್ರ ಕಾಣುತ್ತಿದೆ. ಕಟ್ಟಡ ಮಾತ್ರ ಹಾಳುಬಿದ್ದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಸ್ತು ಸಂಗ್ರಹಾಲಯ: ನವೀಕೃತ ಗಂಗೋತ್ರಿಯನ್ನು 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಸೆ.23ರಂದು ನಡೆದ ವಿಶೇಷ ಕಾರ‌್ಯಕ್ರಮದಲ್ಲಿ ನಾಡಿಗೆ ಸಮರ್ಪಿಸಿದ್ದನ್ನು ಅಲ್ಲಿಯೇ ಇದ್ದ ಫಲಕ ಸಾರಿ ಹೇಳುತ್ತಿದೆ. ಆಗಿನ ಶಾಸಕಿ ಸೀಮಾ ಮಸೂತಿ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ನವೀಕೃತ ಕಟ್ಟಡದ ಉದ್ಘಾಟನೆಯಲ್ಲಿ ಸ್ಥಳೀಯ ಶಾಸಕರು, ಅಧಿಕಾರಿಗಳು ಇದ್ದರು ಎಂಬುದನ್ನು ಅಲ್ಲಿಯ ಫಲಕದ ಮಾಹಿತಿ ತಿಳಿಸುತ್ತದೆ.

ಈ ಕಟ್ಟಡವು ಉದ್ಘಾಟನೆಯಾದ ನಂತರ ಗಂಗೂಬಾಯಿ ಹಾನಗಲ್‌ರ ಕೆಲ ಭಾವಚಿತ್ರ ಗಳನ್ನು ಇರಿಸಿ ಅದಕ್ಕೆ ವಸ್ತು ಸಂಗ್ರಹಾಲಯ ಎಂದು ಹೆಸರಿಟ್ಟಿದ್ದು, ಅಲ್ಲಿಯೇ ಕೆಲ ದಿನಗಳ ಕಾಲ ಸಂಗೀತ ವರ್ಗಗಳು ನಡೆದವು ಎಂಬು ದನ್ನು ಗಂಗೂಬಾಯಿಯವರ ಶಿಷ್ಯೆ ಡಾ. ಸುಲಭಾದತ್ತ ನೀರಲಗಿ ಹೇಳುತ್ತಾರೆ. 2009ರ ಜುಲೈ 21ರಂದು ಗಂಗಜ್ಜಿ ಕಣ್ಮರೆಯಾದದ್ದು ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಹಾನಿ. ಅವರು ಇಲ್ಲದ ನಂತರ ಗಂಗೋತ್ರಿಯೂ ಹಾಳು ಬಿತ್ತು ಎಂದು ತಮ್ಮ ಗುರುಗಳನ್ನು ಸ್ಮರಿಸಿಕೊಂಡರು ಡಾ.ನೀರಲಗಿ.

ಈ ಸ್ಮಾರಕ ಕಟ್ಟಡವು ಕೇವಲ ಹತ್ತು ವರ್ಷಗಳಲ್ಲಿ ಪಾಳು ಬಿದ್ದ ಬಗ್ಗೆ ಈ ಸ್ಮಾರಕವನ್ನು ನಿರ್ಮಿಸಿದವರು ಗಮನಿಸದೇ ಇರುವುದು ವಿಷಾದದ ಸಂಗತಿ ಎಂದು ಕರ್ನಾಟಕ ವಿದ್ಯಾವ ರ್ಧಕ ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಆಗ್ರ ಹಿಸುತ್ತಾರೆ

Follow Us:
Download App:
  • android
  • ios