Asianet Suvarna News Asianet Suvarna News

ಬೆಂಗ್ಳೂರಲ್ಲಿ ಗಂಗೂಲಿ-ದ್ರಾವಿಡ್ ಸುದೀರ್ಘ ಚರ್ಚೆ; NCAಗೆ ಹೊಸ ರೂಪ!

ಬಿಸಿಸಿಐ ಅಧ್ಯಕ್ಷರಾದ ಒಂದೇ ವಾರಕ್ಕೆ ಸೌರವ್ ಗಂಗೂಲಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಬೆಂಗಳೂರಿಗೆ ಆಗಮಿಸಿದ ಗಂಗೂಲಿ, NCA ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಗಂಗೂಲಿ ಹಾಗೂ ದ್ರಾವಿಡ್ ನಡೆಸಿದ ಮಾತುಕತೆ ವಿವರ ಇಲ್ಲಿದೆ.

BCCI president sourav ganguly meets nca chief rahul  dravid at bengaluru
Author
Bengaluru, First Published Oct 31, 2019, 10:21 AM IST

ಬೆಂಗಳೂರು(ಅ.31):  ಬೆಂಗ​ಳೂ​ರಿ​ನ​ಲ್ಲಿ​ರುವ ರಾಷ್ಟ್ರೀಯ ಕ್ರಿಕೆಟ್‌ ಅಕಾ​ಡೆಮಿ (ಎನ್‌ಸಿಎ) ಭಾರ​ತೀಯ ಕ್ರಿಕೆಟ್‌ನ ಅವಿ​ಭಾಜ್ಯ ಅಂಗ. ರಾಷ್ಟ್ರೀಯ ತಂಡ​ಗಳ ಅಭ್ಯಾಸ ಶಿಬಿರ ನಡೆ​ಸುವ, ಆಟ​ಗಾ​ರ​ರಿಗೆ ಪುನ​ಶ್ಚೇ​ತನ ಶಿಬಿರಗಳನ್ನು ಆಯೋ​ಜಿ​ಸುವ ಕೇಂದ್ರ, ಫಿಟ್ನೆಸ್‌ ಪರೀಕ್ಷೆಗಳನ್ನು ನಡೆ​ಸುವ ಸ್ಥಳ ಎಲ್ಲವೂ ಆಗಿದೆ. ಆದರೆ ಎನ್‌ಸಿಎಯನ್ನು ಇಷ್ಟಕ್ಕೆ ಮಾತ್ರ ಸೀಮಿತಗೊಳ್ಳು​ವುದು ಬಿಸಿ​ಸಿಐನ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ಗೆ ಇಷ್ಟವಿಲ್ಲ. ಎನ್‌ಸಿಎ ಅಭಿ​ವೃದ್ಧಿಗೊಳಿ​ಸ​ಲು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯ​ಕ​ರಿ​ಬ್ಬರು ಪಣತೊಟ್ಟಿದ್ದು, ಬುಧ​ವಾರ ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದ ಆವ​ರಣದಲ್ಲಿ​ರುವ ಎನ್‌ಸಿಎ ಕಚೇ​ರಿಗೆ ಗಂಗೂಲಿ ಭೇಟಿ ನೀಡಿ​ದ್ದರು. ಅವ​ರೊಂದಿ​ಗೆ ಬಿಸಿ​ಸಿಐ ಕಾರ‍್ಯ​ದರ್ಶಿ ಜಯ್‌ ಶಾ ಸಹ ಆಗ​ಮಿಸಿ​ದ್ದರು. ದ್ರಾವಿಡ್‌ ಹಾಗೂ ಎನ್‌ಸಿಎ ತಂಡ​ದೊಂದಿಗೆ ಮೂರು​ವರೆ ಗಂಟೆಗೂ ಹೆಚ್ಚು ಕಾಲ ಗಂಗೂಲಿ ಚರ್ಚೆ ನಡೆ​ಸಿ​ದರು. ಎನ್‌ಸಿಎ ಮಾರ್ಗಸೂಚಿ, ಹೊಸ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿ​ಸ​ಲಾ​ಯಿತು ಎಂದು ನಂಬ​ಲಾರ್ಹ ಮೂಲ​ಗ​ಳಿಂದ ತಿಳಿ​ದು​ಬಂದಿದೆ.

ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಕಾಂಟ್ರಾಕ್ಟ್ ಸಿಸ್ಟಮ್; ಗಂಗೂಲಿ ದಿಟ್ಟ ನಿರ್ಧಾರ!

ಬುಧ​ವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಚಿನ್ನ​ಸ್ವಾಮಿ ಕ್ರೀಡಾಂಗಣಕ್ಕೆ ಆಗ​ಮಿ​ಸಿದ ಗಂಗೂಲಿ, ನೇರವಾಗಿ ಎನ್‌ಸಿಎ ಕಚೇ​ರಿಗೆ ತೆರ​ಳಿ​ದರು. ಸುದೀರ್ಘ ಚರ್ಚೆ ಬಳಿಕ, ದೇವನಹಳ್ಳಿ ಅಂತಾ​ರಾ​ಷ್ಟ್ರೀ​ಯ ವಿಮಾ​ನದ ಸಮೀಪದಲ್ಲಿ ಎನ್‌ಸಿಎಯನ್ನು ಹೊಸ​ದಾಗಿ ಸ್ಥಾಪಿ​ಸ​ಲು ಬಿಸಿ​ಸಿಐ ಭೂಮಿ ಖರೀ​ದಿ​ಸಿ​ರುವ ಸ್ಥಳಕ್ಕೆ ಗಂಗೂಲಿ ಭೇಟಿ ನೀಡಿ​ದರು. ಬಿಸಿ​ಸಿಐ ಒಟ್ಟು 40 ಎಕರೆ ಜಾಗ ಹೊಂದಿದ್ದು, ಅತ್ಯಾ​ಧು​ನಿ​ಕ ಶೈಲಿ​ಯಲ್ಲಿ ಎನ್‌ಸಿಎ ನಿರ್ಮಿ​ಸಲು ಬಿಸಿ​ಸಿಐ ಯೋಜನೆ ರೂಪಿ​ಸಿದೆ.

ಇದನ್ನೂ ಓದಿ: ದಾದಾ ಪ್ರಸ್ತಾವನೆಗೆ ಬಾಂಗ್ಲಾ ಸಮ್ಮತಿ; ಭಾರತದಲ್ಲಿ ಮೊಟ್ಟ ಮೊದಲ ಡೇ & ನೈಟ್ ಟೆಸ್ಟ್!

ಸಭೆ ಉದ್ದೇ​ಶ​ವೇನು?: 
ಕ್ರಿಕೆ​ಟಿ​ಗ​ರಲ್ಲಿ ಎನ್‌ಸಿಎ ಬಗ್ಗೆ ಇರುವ ಅಭಿ​ಪ್ರಾಯಗಳು ಇತ್ತೀ​ಚೆಗೆ ಬದ​ಲಾ​ಗಿವೆ. ಇಲ್ಲಿನ ವೈದ್ಯ​ಕೀಯ ತಂಡ, ಆಟ​ಗಾ​ರರ ಗಾಯದ ಪ್ರಮಾಣ, ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ನೀಡು​ತ್ತಿಲ್ಲ ಎನ್ನುವ ಆರೋ​ಪ​ಗಳು ಕೇಳಿ​ಬಂದಿ​ದ್ದವು. ವೃದ್ಧಿ​ಮಾನ್‌ ಸಾಹ, ಭುವ​ನೇ​ಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ ಫಿಟ್ನೆಸ್‌ ವಿಚಾರದಲ್ಲಿ ಎನ್‌ಸಿಎ ಎಡವಟ್ಟು ಮಾಡಿತ್ತು. ಎನ್‌ಸಿಎ ಧೋರಣೆಯಿಂದಾಗೇ ಪೃಥ್ವಿ ಶಾ ಡೋಪಿಂಗ್‌ ಪ್ರಕ​ರಣ ತಡ​ವಾಗಿ ಬೆಳ​ಕಿಗೆ ಬಂತು ಎನ್ನುವ ವರ​ದಿ​ಗಳು ಮಾಧ್ಯ​ಮ​ಗ​ಳಲ್ಲಿ ಪ್ರಕಟವಾಗಿ​ದ್ದವು. ಆಟ​ಗಾ​ರರು ಗಾಯ​ಗೊಂಡ ವೇಳೆ ಪುನ​ಶ್ಚೇತನ ಶಿಬಿರಕ್ಕಾಗಿ ಎನ್‌ಸಿಎಗೆ ಆಗ​ಮಿ​ಸಲು ಹಿಂಜ​ರಿ​ಯು​ತ್ತಿ​ದ್ದಾ​ರೆಂಬ ವರ​ದಿ​ಗಳು ಸಹ ಹೊರ​ಬಿ​ದ್ದಿ​ದ್ದವು. ಈ ನಿಟ್ಟಿ​ನಲ್ಲಿ ಎನ್‌ಸಿಎಗೆ ಮರು​ಜೀವ ನೀಡಲು ಗಂಗೂ​ಲಿ, ದ್ರಾವಿ​ಡ್‌ ಸಭೆ ಸೇರಿ​ದ್ದರು.

ಕಳೆದ ವಾರವಷ್ಟೇ ಭಾರ​ತದ ಮಾಜಿ ಕ್ರಿಕೆ​ಟಿಗ ವಿವಿ​ಎಸ್‌ ಲಕ್ಷ್ಮಣ್‌ ಸಹ ಎನ್‌ಸಿಎ ಪುನ​ಶ್ಚೇ​ತನಗೊ​ಳಿ​ಸುವ ಬಗ್ಗೆ ಮಾತ​ನಾ​ಡಿ​ದ್ದರು. ‘ಬಿಸಿ​ಸಿಐ ಅಧ್ಯ​ಕ್ಷ ಸ್ಥಾನ​ಕ್ಕೇ​ರಿ​ರುವ ಗಂಗೂ​ಲಿ​ಯಲ್ಲಿ ನಾನು ಒಂದೇ ಒಂದು ಮನವಿ ಮಾಡು​ತ್ತೇನೆ. ಎನ್‌ಸಿಎ ಯುವ ಕ್ರಿಕೆ​ಟಿ​ಗ​ರಿಗೆ ಶಾಲೆಯಂತಾ​ಗ​ಬೇಕು, ಹೊಸ ಪ್ರತಿಭೆಗಳನ್ನು ಗುರು​ತಿಸಿ ಅವ​ರನ್ನು ಪೋಷಿ​ಸುವ ಕೇಂದ್ರವಾಗ​ಬೇಕು, ಭಾರತ ತಂಡ ದಶ​ಕ​ಗಳ ಕಾಲ ವಿಶ್ವ ಕ್ರಿಕೆ​ಟನ್ನು ಆಳ​ಬೇಕು ಎಂದರೆ ದೇಸಿ ಕ್ರಿಕೆಟ್‌ ಬಲಿ​ಷ್ಠ​ವಾ​ಗಿ​ರ​ಬೇಕು. ಇತ್ತೀ​ಚೆಗೆ ಭಾರತಕ್ಕೆ ಆಗ​ಮಿ​ಸಿದ್ದ ದ.ಆ​ಫ್ರಿಕಾ ತಂಡ ಹೀನಾ​ಯ​ವಾಗಿ ಸೋಲು ಕಾಣಲು, ಅಲ್ಲಿನ ದೇಸಿ ಕ್ರಿಕೆಟ್‌ ವ್ಯವಸ್ಥೆ ಬಲಿ​ಷ್ಠ​ವಾಗಿದಿರು​ವುದೇ ಕಾರಣ’ ಎಂದಿ​ದ್ದರು.

Follow Us:
Download App:
  • android
  • ios