Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಮಾಜಿ ಸಚಿವರ ಅಳಿಯ, ಮಗನ ನಿವಾಸದ ಮೇಲೆ ಐಟಿ ದಾಳಿ

ಮಾಜಿ ಸಚಿವ  ಆರ್‌.ಎಲ್‌.ಜಾಲಪ್ಪ ಅವರ ಅಳಿಯ ಹಾಗೂ ಮಗನ ಮನೆ ಮೇಲೆ ಐಟಿ ದಾಳಿ ನಡೆದಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಪರಿಶೀಲನೆ ಆರಂಭಗೊಂಡಿತ್ತು. ಜಾಲಪ್ಪ ಅವರ ಅಳಿಯ ಜಿ.ಎಚ್‌.ನಾಗರಾಜ್‌ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಎಂಬುದು ವಿಶೇಷ.

 

IT  raids in former minister r l jalappa son in law son home in Chikkaballapur
Author
Bangalore, First Published Oct 11, 2019, 10:00 AM IST

ಚಿಕ್ಕಬಳ್ಳಾಪುರ(ಅ.11): ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಚಿಕ್ಕಬಳ್ಳಾಪುರದ ಜಿ.ಎಚ್‌.ನಾಗರಾಜ್‌ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಬೆಳಗ್ಗೆ 8 ಗಂಟೆಯಿಂದ ಸತತವಾಗಿ ಪರಿಶೀಲನೆ ನಡೆಯುತ್ತಲೇ ಇದೆ.

ಜಿ.ಎಚ್‌.ನಾಗರಾಜ್‌ ಅವರು ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಅಳಿಯರಾಗಿದ್ದು, ಪ್ರಸ್ತುತ ಡಿಸೆಂಬರ್‌ನಲ್ಲಿ ಎದುರಾಗಲಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಎಂಬುದು ವಿಶೇಷ.

'ಎರಡು ಬಾರಿ ಗೆದ್ದಿರುವ ಶಿವಶಂಕರರೆಡ್ಡಿ ಏನು ಅಭಿವೃದ್ಧಿ ಮಾಡಿದ್ದಾರೆ'..?

ಚಿಕ್ಕಬಳ್ಳಾಪುರದ ಪ್ರಶಾಂತ ನಗರದಲ್ಲಿರುವ ಮಾತೃ ಮಂದಿರದ ಮೇಲೆ ಬೆಂಗಳೂರುನಿಂದ ಆಗಮಿಸಿರುವ 10ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಕೋಲಾರದ ಜಾಲಪ್ಪ ಮೆಡಿಕಲ… ಕಾಲೇಜ್‌ ಕಾರ್ಯದರ್ಶಿಯಾಗಿಯೂ ಜಿ.ಎಚ್‌.ನಾಗರಾಜ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ಜಾಲಪ್ಪ ಮಗನ ನಿವಾಸದ ಮೇಲೂ ದಾಳಿ

ಮಾಜಿ ಸಂಸದ ಆರ್‌.ಎಲ್‌.ಜಾಲಪ್ಪ ಅವರ ಮೂರನೇ ಪುತ್ರ ರಾಜೇಂದ್ರ ಅವರ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ನಿವಾಸದ ಮೇಲೂ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿದೆ. ಇವರ ಮನೆಯಲ್ಲಿನ ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌ ಓಪನ್‌ ಮಾಡಲು ಸಿಬ್ಬಂದಿಯನ್ನು ಕರೆಯಿಸಿ ಹಾರ್ಡ್‌ ಡಿಸ್ಕ್‌ ಓಪನ್‌ ಮಾಡಿಸಲಾಗಿದೆ.

ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತ

ಈ ಸಂದರ್ಭದಲ್ಲಿ ಮಹತ್ವದ ದಾಖಲೆಗಳು ಹಾರ್ಡ್‌ ಡಿಸ್ಕ್‌ನಲ್ಲಿಟ್ಟಿದ್ದಾರಾ ಎಂಬ ಬಗ್ಗೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಬೆಳಗ್ಗೆ 8 ಗಂಟೆಯಿಂದಲೂ ಸತತವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಜಾಲಪ್ಪ ಪುತ್ರ ರಾಜೇಂದ್ರ ಅವರು ದೇವರಾಜ್‌ ಅರಸ್‌ ಎಜುಕೇಷನ್‌ ಟ್ರಸ್ಟ್‌ ನಿರ್ದೇಶಕರಾಗಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮುಂದುವರಿದ ಮಳೆ: ತಪ್ಪದ ಕಿರಿಕಿರಿ

ಮಧ್ಯಾಹ್ನದ ವೇಳೆಗೆ ರಾಜೇಂದ್ರ ಅವರ ಪತ್ನಿ ಸುಜಾತಾ ಹಾಗೂ ಮಗ ರಾಕೇಶ್‌ ಅವರನ್ನು ಐಟಿ ಅಧಿಕಾರಿಗಳು ತಮ್ಮ ಜೊತೆ ಹೊರಗೆ ಕರೆದೊಯ್ದಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವರನ್ನು ತಮ್ಮ ವಶಕ್ಕೆ ಪಡೆದಿರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲದೆ ಅವರ ಬ್ಯಾಂಕ್‌ ಖಾತೆ ಮತ್ತು ಬ್ಯಾಂಕ್‌ ಲಾಕರ್‌ ಪರಿಶೀಲನೆಯನ್ನೂ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಲ್ಲಿರುವ ಗೋಡೆಯ ಲಾಕರ್‌ ತೆಗೆಯಲು ಬೀಗದ ಕೈ ಇಲ್ಲದ ಕಾರಣ ಹೊರಗಿನಿಂದ ಬೀಗ ರಿಪೇರಿ ಮಾಡುವ ವ್ಯಕ್ತಿಯನ್ನು ಕರೆಯಿಸಿ ಲಾಕರ್‌ ತೆಗೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯಲ್ಲಿರುವ ರಾಜೇಂದ್ರ ಅವರ ನಿವಾಸದಲ್ಲಿ ತನಿಖೆ ಮುಂದುವರಿದಿದೆ.

ಅಪವಾದ ಒಪ್ಪಲು ಸಾಧ್ಯವಿಲ್ಲ: ಬಚ್ಚೇಗೌಡ

ಕಾಂಗ್ರೆಸ್‌ ನಾಯಕರ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉಥ್ತರಿಸಿದ ಸಂಸದ ಬಿ.ಎನ್‌.ಬಚ್ಚೇಗೌಡ, ಐಟಿ ಹಾಗೂ ಇಡಿ ಸ್ವತಂತ್ರ ಸಂಸ್ಥೆಗಳಾಗಿದ್ದು, ಬೇರೆಯವರ ಮೇಲೆ ಅಪವಾದ ಮಾಡುವುದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರನ್ನೇ ಟಾರ್ಗೆಟ್‌ ಮಾಡಿದ್ದಾರೆ ಅನ್ನೋದು ನಾನು ಒಪ್ಪುವುದಿಲ್ಲ. ಬಿಜೆಪಿಯವರಿಗೆ ಯಾರ ಮೇಲೆ ಯಾವ ದ್ವೇಷವೂ ಇಲ್ಲ. ರಾಜ್ಯದಲ್ಲಿ ಪಕ್ಷ ಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ. ರಾಜ್ಯದ ಒಳಿತು ಜನರ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಿಡಸಿದರು.

Follow Us:
Download App:
  • android
  • ios