ಪತ್ನಿಯನ್ನು ಕಳುಹಿಸು ಎಂದು 25 ಬಾರಿ ಕರೆ ಮಾಡಿದ್ದಕ್ಕೆ ಹತ್ಯೆ!
ಪತ್ನಿಯನ್ನು ತನ್ನೊಂದಿಗೆ ಕಳುಹಿಸುವಂತೆ ಮೊಬೈಲ್ ಕರೆ ಮಾಡಿ ಪೀಡಿಸುತ್ತಿದ್ದ ಯುವಕನನ್ನು ಹತ್ಯೆಗೈದು ಪರಾರಿಯಾಗಿದ್ದ ಪ್ಲಂಬರ್ ಕೆಲಸಗಾರನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ
ಬೆಂಗಳೂರು [ಅ.18]: ಪತ್ನಿಯನ್ನು ತನ್ನೊಂದಿಗೆ ಕಳುಹಿಸುವಂತೆ ಮೊಬೈಲ್ ಕರೆ ಮಾಡಿ ಪೀಡಿಸುತ್ತಿದ್ದ ಯುವಕನನ್ನು ಹತ್ಯೆಗೈದು ಪರಾರಿಯಾಗಿದ್ದ ಪ್ಲಂಬರ್ ಕೆಲಸಗಾರನೊಬ್ಬ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬ್ಯಾಡರಹಳ್ಳಿಯ ಕೆಂಪೇಗೌಡ ನಗರದ ನಿವಾಸಿ ಮಣಿಕಂಠ ಬಂಧಿತನಾಗಿದ್ದು, ಪತ್ನಿ ಜತೆ ಅನೈತಿಕ ಶಂಕೆ ಮೇರೆಗೆ ಸೋಮವಾರ ರಾತ್ರಿ ತಿಮ್ಮೇಗೌಡ (26)ನನ್ನು ಸುಕಂದಟ್ಟೆಬಳಿ ಕೊಂದು ಪರಾರಿಯಾಗಿದ್ದ. ಈ ಕೃತ್ಯದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕೊನೆಗೆ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ರಾಮನಗರ ತಾಲೂಕಿನ ಅಕ್ಕೂರು ಗ್ರಾಮದ ತಿಮ್ಮೇಗೌಡ, ಖಾಸಗಿ ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದ. ಸುಂಕದಕಟ್ಟೆಹಳೇವೂರಮ್ಮ ದೇವಸ್ಥಾನದ ಸಮೀಪ ನೆಲೆಸಿದ್ದ ಆತ, ತನ್ನ ಸ್ನೇಹಿತೆ ಮೂಲಕ ಮಣಿಕಂಠನ ಪತ್ನಿ ರಮ್ಯಾ ಪರಿಚಿತನಾಗಿದ್ದ. ಈ ಗೆಳೆತನ ಕ್ರಮೇಣ ಅವರಲ್ಲಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕೊನೆಗೆ ಪತಿಯಿಂದ ಪ್ರತ್ಯೇಕಗೊಂಡ ಆಕೆ, ಎರಡು ತಿಂಗಳು ಪ್ರಿಯಕರ ಜತೆ ನೆಲೆಸಿದ್ದಳು. ಬಳಿಕ ಸುಂಕದಕಟ್ಟೆಯಲ್ಲಿ ಪ್ರತ್ಯೇಕ ಮನೆ ಮಾಡಿದ್ದಳು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರಿಯತಮೆಗೆ ಹುಡುಕಾಟ ನಡೆಸಿದ ತಿಮ್ಮೇಗೌಡ, ಎಲ್ಲೂ ಸಿಗದೆ ಹೋದಾಗ ಕೊನೆಗೆ ಆಕೆಯ ಪತಿ ಮಣಿಕಂಠನಿಗೆ ಕರೆ ಮಾಡಿದ್ದ. ಅ.14ರಂದು ರಾತ್ರಿ 11ಕ್ಕೆ ಸ್ನೇಹಿತರ ಜತೆ ಬಾರ್ನಲ್ಲಿ ಮದ್ಯ ಸೇವಿಸಿದ ಬಳಿಕ ತಿಮ್ಮೇಗೌಡ, ಮದ್ಯ ಅಮಲಿನಲ್ಲಿ ಮಣಿಕಂಠನಿಗೆ 25ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾನೆ. ‘ರಮ್ಯಾಳನ್ನು ನೀನೇ ಕರೆದುಕೊಂಡು ಹೋಗಿದ್ದು.
ಆಕೆಯನ್ನು ನೀನೆ ನನ್ನ ಮನೆಗೆ ತಂದು ಬಿಡು. ಇಲ್ಲವಾದರೇ ಗತಿ ಕಾಣಿಸುತ್ತೇನೆ’ ಎಂದು ಬೆದರಿಸಿದ್ದ. ಮೊದಲೇ ಪತ್ನಿಯಿಂದ ದೂರವಾಗಿದ್ದ ಕೋಪಗೊಂಡಿದ್ದ ಮಣಿಕಂಠ, ತಿಮ್ಮೇಗೌಡನ ಮಾತಿನಿಂದ ಮತ್ತಷ್ಟುಕೆರಳಿದ. ತಕ್ಷಣವೇ ಮದ್ಯ ಸೇವಿಸುತ್ತಿದ್ದ ಬಾರ್ಗೆ ತೆರಳಿ ತಿಮ್ಮೇಗೌಡನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಂದು ಕಾಲ್ಕಿತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.