Asianet Suvarna News Asianet Suvarna News

ಚಿಕ್ಕೋಡಿಗೆ ಶೀಘ್ರ ಹೆಚ್ಚುವರಿ ಎಸ್ಪಿ ಹುದ್ದೆ: ಬಸವರಾಜ ಬೊಮ್ಮಾಯಿ

ನಿಪ್ಪಾಣಿಯಲ್ಲಿ ಅಗ್ನಿಶಾಮಕ ಠಾಣೆ ಕಟ್ಟಡ, ವಸತಿಗೃಹ ಉದ್ಘಾಟಿಸಿ ಗೃಹ ಸಚಿವ ಬೊಮ್ಮಾಯಿ| ಎಸ್‌ಡಿಆರ್‌ಎಫ್‌ ಬಲಪಡಿಸಲು 20 ಕೋಟಿ ನೀಡಲು ಸಂಪುಟದಲ್ಲಿ ಈಗಾಗಲೇ ಅನುಮೋದನೆ|ಠಾಣೆಗೆ ಯಾರೇ ಸಾರ್ವಜನಿಕರು ದೂರು ನೀಡಲು ಬಂದಾಗ ಕಡ್ಡಾಯವಾಗಿ ದೂರು ದಾಖಲಿಸಬೇಕು|200 ಜನರನ್ನು ಆಯ್ಕೆ ಮಾಡಿ ಸೂಕ್ತ ತರಬೇತಿ ನೀಡಿ ದೇಶದಲ್ಲಿಯೇ ಮಾದರಿ ಎಸ್‌ಡಿಆರ್‌ಎಫ್‌ ತಂಡ ರಚನೆ|

Soon Additional SP Post to Chikkodi
Author
Bengaluru, First Published Nov 3, 2019, 11:54 AM IST

ಬೆಳಗಾವಿ[ನ.3]: ತುರ್ತು ಸಂದರ್ಭಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಎಸ್‌ಡಿಆರ್‌ಎಫ್‌ ಬಲಪಡಿಸಲು 20 ಕೋಟಿ ಅನುದಾನ ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಎನ್‌ಡಿಆರ್‌ಎಫ್‌ ಮಾದರಿಯಲ್ಲಿ ಸಿಬ್ಬಂದಿ ನೇಮಕ, ತರಬೇತಿ, ಸಾಧನ-ಸಲಕರಣೆಗಳನ್ನು ಒದಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಪ್ಪಾಣಿಯ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಹಾಗೂ ಸಿಬ್ಬಂದಿಯ ವಸತಿ ಗೃಹಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಚಿಕ್ಕೋಡಿಗೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹುದ್ದೆಯನ್ನು ಶೀಘ್ರದಲ್ಲೇ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅದೇ ರೀತಿ ನಿಪ್ಪಾಣಿಯ ಮೂರು ಪೊಲೀಸ್‌ ಠಾಣೆಗಳ ನೂತನ ಕಟ್ಟಡ ನಿರ್ಮಿಸಲು ಮುಂದಿನ ಆಯವ್ಯಯ ಸಂದರ್ಭದಲ್ಲಿ ಅನುದಾನ ಒದಗಿಸಲಾಗುವುದು. ರಾಜ್ಯದಲ್ಲಿರುವ ಶೇ.60 ರಷ್ಟು ಸಿಬ್ಬಂದಿಗೆ ವಸತಿ ಗೃಹ ಕಲ್ಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಶೇ.80 ರಷ್ಟು ಸಿಬ್ಬಂದಿಗೆ ವಸತಿ ಗೃಹ ಒದಗಿಸುವುದು ಸರ್ಕಾರದ ಗುರಿ. ಪೊಲೀಸ್‌ ಸುಧಾರಣೆ ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರದ ನೆರವಿನಿಂದ ಎಲ್ಲ ಸೌಲಭ್ಯ ಒದಗಿಸಲಾಗುವುದು. ಜನಸ್ನೇಹಿ ಠಾಣೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ದೂರು ದಾಖಲಿಸಲು ಸೂಚನೆ:

ಠಾಣೆಗೆ ಯಾರೇ ಸಾರ್ವಜನಿಕರು ದೂರು ನೀಡಲು ಬಂದಾಗ ಕಡ್ಡಾಯವಾಗಿ ದೂರು ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದರು.

ದಾಖಲಾಗುವ ಪ್ರತಿಯೊಂದು ಪ್ರಕರಣವೂ ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ಜತೆ ರಾಜೀ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗಡಿ ಜಿಲ್ಲೆಗಳಲ್ಲಿ ನಡೆಯಬಹುದಾದ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಸೂಚನೆ ನೀಡಿದ್ದೇನೆ. ಸೈಬರ್‌ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಆದ್ಯತೆ ನೀಡಿ ಎಲ್ಲ ಜಿಲ್ಲೆಗಳಲ್ಲಿ ಸೈಬರ್‌ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರ, ವಾಹನ ಮತ್ತಿತರ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ. ಪೊಲೀಸ್‌, ಅಗ್ನಿಶಾಮಕ, ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ 112 ದೂರವಾಣಿ ಸಂಖ್ಯೆಯನ್ನು ವ್ಯವಸ್ಥೆ ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಕರೆ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದ್ದು, ಎಲ್ಲ ತುರ್ತು ಸೇವೆಗಳನ್ನು ಒಂದೇ ದೂರವಾಣಿ ಸಂಖ್ಯೆಯಡಿ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕೂ ಮುನ್ನ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು, ಗಡಿಭಾಗದ ನಿಪ್ಪಾಣಿಯಲ್ಲಿ ಅಗ್ನಿಶಾಮಕ ಠಾಣೆಯ ಅಗತ್ಯ ಮನಗಂಡು 2013 ರಿಂದಲೇ ಪ್ರಯತ್ನ ಆರಂಭಿಸಿದ ಪರಿಣಾಮ ಇಂದು ಹೊಸ ಠಾಣೆ ಮತ್ತು ಸಿಬ್ಬಂದಿ ವಸತಿಗೃಹ ನಿರ್ಮಿಸಲಾಗಿದೆ ಎಂದು ಸ್ಮರಿಸಿದರು.

ಅಗ್ನಿಶಾಮಕ ಸೇವೆಯನ್ನು ತುರ್ತು ಅಗತ್ಯ ಎಂದು ಪರಿಗಣಿಸಿ ಅಗತ್ಯವಿರುವ ಕಡೆ ಉಚಿತವಾಗಿ ಸರ್ಕಾರಿ ಜಮೀನು ಒದಗಿಸುವ ಅಗತ್ಯವಿದೆ. ನಿಪ್ಪಾಣಿಯ ಮೂರು ಪೊಲೀಸ್‌ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಹಾಗೂ ಆಧುನಿಕ ಸೌಲಭ್ಯ ಒದಗಿಸಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.

ಅಧಿಕಾರಿಗಳ ತುರ್ತು ಸಂಚಾರಕ್ಕೆ ವಾಹನ ಕೊರತೆ ಇರುವುದನ್ನು ಮನಗಂಡು ಟೌನ್‌ ಪೊಲೀಸ್‌ ಠಾಣೆಗೆ ತಮ್ಮ ಶಾಸಕರ ಅನುದಾನದಲ್ಲಿ ಒಂದು ವಾಹನ ನೀಡಿದ್ದೇನೆ. ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರು, ನೇಕಾರರು ಸೇರಿದಂತೆ ಎಲ್ಲರಿಗೂ ಅಗತ್ಯ ಪರಿಹಾರ ಮತ್ತು ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ. ಸಂತ್ರಸ್ತರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್‌ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್‌ಡಿಆರ್‌ಎಫ್‌ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ನೆರೆಸಂತ್ರಸ್ತರ ಹಿತರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ಅಗ್ನಿಶಾಮಕ ದಳದ ಹೆಚ್ಚುವರಿ ಮಹಾನಿರ್ದೇಶಕ ಸುನಿಲ್‌ ಅಗರವಾಲ್‌, ಜಿಲ್ಲೆಯಲ್ಲಿ ಹದಿಮೂರು ಅಗ್ನಿಶಾಮಕ ಠಾಣೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಯಬಾಗ ಮತ್ತು ಕಾಗವಾಡದಲ್ಲಿ ತಾತ್ಕಾಲಿಕ ಠಾಣೆಗಳು ಕಾರ್ಯನಿರ್ವಹಿಸುತ್ತವೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಎಸ್‌ಡಿಆರ್‌ಎಫ್‌ ಬಲಪಡಿಸಲು ರಾಜ್ಯ ಸರ್ಕಾರವು 20 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. 200 ಜನರನ್ನು ಆಯ್ಕೆ ಮಾಡಿ ಸೂಕ್ತ ತರಬೇತಿ ನೀಡಿ ದೇಶದಲ್ಲಿಯೇ ಮಾದರಿ ಎಸ್‌ಡಿಆರ್‌ಎಫ್‌ ತಂಡ ರಚಿಸಲಾಗುವುದು ಎಂದರು.

ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಆದಿತ್ಯ ಬಿಸ್ವಾಸ್‌, ಐಜಿಪಿ ಎಚ್‌.ಜಿ.ರಾಘವೇಂದ್ರ ಸುಹಾಸ್‌, ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಿಪ್ಪಾಣಿ ನಗರಸಭೆ ಜನಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು. ಅಗ್ನಿಶಾಮಕ ದಳದ ಉಪನಿರ್ದೇಶಕ ಸಿ. ಬಸವಣ್ಣ ಸ್ವಾಗತಿಸಿದರು. ಇದಕ್ಕೂ ಮುಂಚೆ ಪೊಲೀಸ್‌ ಇಲಾಖೆಯ ವಸತಿಗೃಹಗಳನ್ನು ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Follow Us:
Download App:
  • android
  • ios